Chamarajanagar: ಸಿಎಂ ಸಿದ್ಧರಾಮಯ್ಯಗೆ ರೈತರು ಹಾಗೂ ಸಾರ್ವಜನಿಕರು ನೀಡಿದ್ದ ಮನವಿ ಪತ್ರ ಕಸದ ರಾಶಿಯಲ್ಲಿ!

By Govindaraj SFirst Published Jul 13, 2024, 7:01 PM IST
Highlights

ಜು.10 ರಂದು ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆ ಕೃತಜ್ಞತೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಾಮರಾಜನಗರ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಮನವಿ ಪತ್ರ ಸಲ್ಲಿಸಿದ್ದರು. 

ಚಾಮರಾಜನಗರ (ಜು.13): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೊಟ್ಟಿದ್ದ ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿರುವ ಘಟನೆ ಚಾಮರಾಜನಗರದಲ್ಲಿ ‌ನಡೆದಿದೆ. ಜು.10 ರಂದು ಚಾಮರಾಜನಗರದ ಡಾ.ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಹಿನ್ನೆಲೆ ಕೃತಜ್ಞತೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಚಾಮರಾಜನಗರ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಮನವಿ ಪತ್ರ ಸಲ್ಲಿಸಿದ್ದರು. 

ಆದರೆ, ಮುಖ್ಯಮಂತ್ರಿಗಳು ಕೆಲವು ಪತ್ರಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಇನ್ನುಳಿದ ಪತ್ರಗಳನ್ನು ಕಾರ್ಯಕ್ರಮ ನಡೆದ ಸ್ಥಳದಲ್ಲೇ ಬಿಟ್ಟಿದ್ದಾರೆ. ಸ್ಟೇಡಿಯಂಗೆ ಶುಕ್ರವಾರ ಕ್ರಿಕೆಟ್ ಆಡಲು ತೆರಳಿದ್ದ ಯುವಕರು ವೇದಿಕೆ ಬಳಿ ಹೋಗಿದ್ದಾಗ ಮನವಿ ಪತ್ರಗಳು ಅಲ್ಲೇ ಬಿದ್ದಿರುವುದನ್ನು ಕಂಡಿದ್ದಾರೆ. ಬಳಿಕ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ, ಮನವಿ ಪತ್ರಗಳು ಕಸದ ರಾಶಿಯಲ್ಲಿ ಪತ್ತೆಯಾಗಿರುವುದಕ್ಕೆ ಜನರು, ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

Latest Videos

ದೇವರು ಒಂದೇ ನಮ್ಮ ಬಾಸ್ ಒಂದೇ: ದರ್ಶನ್ ಭೇಟಿಗೆ ಜೈಲು ಬಳಿ ಬಂದು ಕಣ್ಣೀರಿಟ್ಟ ಟಿ.ನರಸೀಪುರ ಮಹಿಳೆ!

ಮನವಿ ಪತ್ರಗಳನ್ನು ಬೀಸಾಡಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ: ರೈತರು, ಸಾರ್ವಜನಿಕರು ತಮ್ಮ ಮನವಿ ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಸಲ್ಲಿಸಿದ್ದ ಮನವಿ ಪತ್ರಗಳನ್ನು ಕಾರ್ಯಕ್ರಮದ ಸ್ಥಳದಲ್ಲೇ ಬೀಸಾಡಿ ಹೋಗಿರುವುದು ಪ್ರಜಾಪ್ರಭುತ್ವದ ಕಗ್ಗೋಲೆಯಾಗಿದೆ ಎಂದು ಜಿಲ್ಲಾ ರೈತ ಸಂಘದ ಅಧ್ಯಕ್ಷ ಹೊನ್ನೂರು ಬಸವಣ್ಣ ಖಂಡಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಕ್ಕೆ ಆಗಮಿಸಿದ್ದ ವೇಳೆ ರೈತ ಸಂಘ ಸೇರಿದಂತೆ ಇತರೆ ಸಂಘ ಸಂಸ್ಥೆಗಳು ನೀಡಿದ್ದ ಮನವಿ ಪತ್ರಗಳನ್ನು ರೈತ ನಾಯಕ ಪ್ರೊ.ನಂಜುಂಡಸ್ವಾಮಿಯವರ ಶಿಷ್ಯ, ರೈತರ ಪರ ಎಂದು ಬೊಗಳೆ ಬಿಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಮನವಿಗಳನ್ನು ಅಲ್ಲಿಯೇ ಬಿಸಾಡಿ ಹೋಗಿರುವುದು ಅವರ ರೈತ ವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ತಮ್ಮ ಹಕ್ಕೊತ್ತಾಯಗಳನ್ನು ಒಳಗೊಂಡ ಮನವಿ ಪತ್ರಗಳನ್ನು ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಲ್ಲಿಸಿ ತೆರಳಿದ್ದರು. ಆದರೆ ಸ್ವೀಕರಿಸಿದ್ದ ಮನವಿ ಪತ್ರಗಳನ್ನು ವೇದಿಕೆ ಬಳಿಯೇ ಎಸೆಯಲಾಗಿದೆ. ಸಾರ್ವಜನಿಕರು ವೇದಿಕೆ ಬಳಿ ತೆರಳಿ ನೋಡಿದಾಗ ಮನವಿ ಪತ್ರಗಳು ಬೀಸಾಡಿರುವುದು ಗಮನಕ್ಕೆ ಬಂದಿದೆ. ಮನವಿ ಪತ್ರಗಳನ್ನು ಬೀಸಾಡಿರುವುದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಕಾಟಾಚಾರಕ್ಕೆ ಮನವಿ ಪತ್ರಗಳನ್ನು ಸಿಎಂ ಸ್ವೀಕರಿಸಿ ಹೋಗಿದ್ದಾರೆ. ತಮ್ಮ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂಬ ಉದ್ದೇಶದಿಂದ ನೀಡುವ ಮನವಿ ಪತ್ರಗಳನ್ನು ನೀಡಿದರೆ ಅದನ್ನು ಅಲ್ಲಿಯೇ ಎಸೆದು ಹೋದರೆ ಹೇಗೆ ಇವರು ಜನರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಇವರು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಾರೆ, ತಕ್ಷಣ ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ಟ್ರಾಮಾ ಸೆಂಟರ್‌ ಉದ್ಘಾಟನೆಯಾದ್ರೂ ಕಾರ್ಯಾರಂಭ ಇಲ್ಲ: ಗ್ಯಾರಂಟಿ ನಡುವೆ 1.5 ವರ್ಷದಿಂದ ಅನಾಥವಾಗಿದೆ ಕಟ್ಟಡ!

ಸಮಾಜವಾದಿ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯ ಅವರ ನಿಜ ಮುಡಾ ಪ್ರಕರಣದಿಂದ ಬಯಲಾಗಿದೆ. ತನಿಖೆ ಮುಗಿಯುವ ವರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಚಾಮರಾಜನಗರ ಜಿಲ್ಲೆಯ ಜನರ ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ರೈತ ಸಂಘ ಇವರ ವಿರುದ್ಧ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಕುಮಾರ್, ಕುಂತೂರು ನಂಜುಂಡಸ್ವಾಮಿ, ಹೆಗ್ಗೋಠಾರ ವಿಜಯಕುಮಾರ್ ಇದ್ದರು.

click me!