ಪಂಚಮಸಾಲಿ ಮೀಸಲಾತಿಗಾಗಿ ನಾಳೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ: ಬಸವ ಜಯಮೃತ್ಯುಂಜಯ ಶ್ರೀ

By Ravi JanekalFirst Published Oct 29, 2023, 7:37 PM IST
Highlights

ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಾಳೆ ಅಸುಂಡಿ ಕ್ರಾಸ್ ಬಳಿ ಅ 30 ರಂದು ಬೆಳಗ್ಗೆ 9ಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

ಗದಗ (ಅ.29): ರಾಜ್ಯದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿ ಸಾತ್ವಿಕ ಪ್ರತಿಭಟನೆ ನಡೆಸಲಾಗಿದ್ದು, ಅದರ ಭಾಗವಾಗಿಯೇ ಗದಗ ನಗರದ ಹೊರವಲಯದಲ್ಲಿರುವ ಅಸುಂಡಿ ಕ್ರಾಸ್ ಬಳಿ ಅ 30 ರಂದು ಬೆಳಗ್ಗೆ 9ಕ್ಕೆ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಿಂದಿನ ಸರ್ಕಾರದ ಕೊನೆ ಕೊನೆಗೆ ನಮ್ಮ ಹೋರಾಟಕ್ಕೆ ಮಣಿದು 2ಡಿ ಮೀಸಲಾತಿಯನ್ನು ನೀಡಿತ್ತು. ಆದರೆ ಅದು ಅನುಷ್ಠಾನವಾಗುವ ಪೂರ್ವದಲ್ಲಿಯೇ ಚುನಾವಣಾ ನೀತಿ ಸಂಹಿತೆ ಬಂದ ಹಿನ್ನೆಲೆಯಲ್ಲಿ ಅದು ಜಾರಿಯಾಗಿಲ್ಲ. ಅದಕ್ಕಾಗಿ ನೂತನ ಸರ್ಕಾರ ನಮ್ಮ ಹಿಂದಿನ ಬೇಡಿಕೆಯಂತೆಯೇ 2ಎ ಮೀಸಲಾತಿಯನ್ನು ನೀಡಬೇಕು ಎಂದು ಒತ್ತಾಯಿಸಲು ಈ ಇಷ್ಟಲಿಂಗ ಪೂಜೆಯ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ಪಂಚಮಸಾಲಿ ಮೀಸಲಾತಿಗೆ ವೇಗ ಸಿಗುತ್ತಿಲ್ಲ; ಸಚಿವೆ ಹೆಬ್ಬಾಳ್ಕರ್ ಮುಂದೆಯೇ ಶ್ರೀಗಳ ಅಸಮಾಧಾನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈಗಾಗಲೇ ಭೇಟಿ ಮಾಡಿ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ನಿಟ್ಟಿನಲ್ಲಿ ಮನವಿ ಮಾಡಲಾಗಿತ್ತು. ಅವರು ಒಂದು ತಿಂಗಳ ಕಾಲಾವಕಾಶ ಕೇಳಿದ್ದರು. ಹಲವಾರು ತಿಂಗಳುಗಳು ಕಳೆದರೂ ಅವರು ಸಭೆ ಕರೆಯಲಿಲ್ಲ, ಪದೇ ಪದೇ ಮುಖ್ಯಮಂತ್ರಿಗಳ ಮನೆಗೆ ಹೋಗಿ ಕೇಳುವುದು ಸರಿಯಲ್ಲ, ನಮ್ಮ ಸಂವಿಧಾನಬದ್ಧ ಹಕ್ಕನ್ನು ಹೋರಾಟದ ಮೂಲಕವೇ ಪಡೆಯಲು ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಲಾಗುತ್ತಿದೆ ಎಂದರು.

ಲಿಂಗಾಯತರಿಗೆ ಮೀಸಲಾತಿ ಸಾಧ್ಯವೇ ಇಲ್ಲ ಎನ್ನುವ ಡಾ. ಜಾಮದಾರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಈಗಾಗಲೇ ಲಿಂಗಾಯತ ಸಮುದಾಯದ ಹಲವಾರು ಸಮುದಾಯಗಳು 2ಎ, 3ಬಿಯಲ್ಲಿ ಇಲ್ಲವೇ ? ಇದು ಮೀಸಲಾತಿ ಅಲ್ಲವೇ ? ಅವರು ಬಹಳಷ್ಟು ಓದಿಕೊಂಡವರು, ಅಧ್ಯಯನಶೀಲರು. ಅವರು ಪುಸ್ತಕಗಳ ಆಧಾರದಲ್ಲಿ ಮಾತನಾಡುತ್ತಾರೆ. ನಾವು ಹೋರಾಟದ ಹಾದಿಯಲ್ಲಿ ಮಾತನಾಡುತ್ತೇವೆ, ನಾವು ಸ್ವಾತಂತ್ರ್ಯವನ್ನು ಪಡೆದಿದ್ದು ಹೋರಾಟದ ಮೂಲಕವೇ ಎಂದರು.

ಧರ್ಮ ಸಂರಕ್ಷಣಾ ರಥ ಯಾತ್ರೆ: ಸಮಾವೇಶದಲ್ಲಿ ಸೌಜನ್ಯ ಪ್ರಕರಣದ ಬಗ್ಗೆ ಮೌನ ಮುರಿದ ಡಾ.ವೀರೇಂದ್ರ ಹೆಗ್ಗಡೆ!

ರಾಜ್ಯ ಸರ್ಕಾರ ಕೂಡಲೇ ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಹಾಗೂ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಎಲ್ಲಾ ಲಿಂಗಾಯತರನ್ನು ಸೇರ್ಪಡೆಗೆ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು.

click me!