
ಬೆಳಗಾವಿ (ಜ.06): ರಾಜ್ಯ ಸರ್ಕಾರ ಇತ್ತೀಚೆಗೆ ಘೋಷಿಸಿದ್ದ 2ಡಿ ಮೀಸಲಾತಿಯನ್ನು ಪಂಚಮಸಾಲಿ ಸಮುದಾಯ ತಿರಸ್ಕರಿಸಿದ್ದು, 2ಎ ಮೀಸಲಾತಿಗಾಗಿ ಮತ್ತೆ ಪಟ್ಟು ಹಿಡಿದಿದೆ. 2ಎ ಮೀಸಲಾತಿ ಘೋಷಿಸಲು ಸರ್ಕಾರಕ್ಕೆ 24 ಗಂಟೆಗಳ ಗಡುವನ್ನೂ ನೀಡಿರುವ ಸಮುದಾಯ, ಇಲ್ಲವಾದಲ್ಲಿ ಜ.13ರಂದು ಮುಖ್ಯಮಂತ್ರಿ ಬೊಮ್ಮಾಯಿ ಅವರ ಹಾವೇರಿಯ ಮನೆ ಮುಂದೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಿದೆ. ನಗರದ ಗಾಂಧಿಭವನದಲ್ಲಿ ಗುರುವಾರ 2ಡಿ ಪಂಚಮಸಾಲಿಗಳ ಹೋರಾಟಕ್ಕೆ ಸಿಕ್ಕ ನ್ಯಾಯವೋ? ಅನ್ಯಾಯವೋ? ಎಂಬ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಮುದಾಯದ ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳ ರಾಜ್ಯ ಕಾರ್ಯಕಾರಿಣಿಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಮಗೆ 2ಎ ಮೀಸಲಾತಿ ಅಡಿಯಲ್ಲೇ ಸೌಲಭ್ಯಗಳನ್ನು ಕೊಡಬೇಕು.
ಆದರೆ, ಸರ್ಕಾರ 2 ಡಿ ಮೀಸಲಾತಿ ಘೋಷಿಸಿ ಅನಗತ್ಯ ಗೊಂದಲ ಸೃಷ್ಟಿಸಿದೆ. 24 ಗಂಟೆಯೊಳಗೆ 2ಎ ಮೀಸಲಾತಿ ಘೋಷಣೆ ಮಾಡಿ, ಜ.12ರೊಳಗೆ ಅಧಿಸೂಚನೆ ಹೊರಡಿಸದಿದ್ದಲ್ಲಿ ಜ.13ರಂದು ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿರುವ ಸಿಎಂ ಮನೆ ಮುಂದೆ ಪ್ರತಿಭಟನಾ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದರು. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡದೆ ಹೋದರೆ ಮುಂದಿನ ಹೋರಾಟದ ಸ್ವರೂಪವನ್ನು ಹಾವೇರಿಯಲ್ಲೇ ನಿರ್ಧಾರ ಮಾಡುತ್ತೇವೆ ಎಂದು ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಮೀಸಲಾತಿ ಪ್ರಮಾಣ ತಿಳಿದ ಬಳಿಕ ಮುಂದಿನ ತೀರ್ಮಾನ: ಬಸವಜಯ ಮೃತ್ಯುಂಜಯ ಸ್ವಾಮೀಜಿ
ಪಂಚಮಸಾಲಿ ಸಮುದಾಯದ ಜನಪ್ರತಿನಿಧಿಗಳ, ಪದಾಧಿಕಾರಿಗಳ ಕಾರ್ಯಕಾರಿಣಿ ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 24 ಗಂಟೆಯಲ್ಲಿ ಮೀಸಲಾತಿ ಕೊಡುತ್ತಾರೋ ಇಲ್ವೋ ಎಂಬುದನ್ನು ಸ್ಪಷ್ಟಪಡಿಸಬೇಕು. ಜ.12ರೊಳಗಾಗಿ 2ಎ ಮೀಸಲಾತಿ ಅಧಿಸೂಚನೆ ಹೊರಡಿಸಬೇಕು. ಒಂದು ವೇಳೆ ಈ ಘೋಷಣೆ ಮಾಡದಿದ್ದರೆ ಜ.13ರಂದು ಹಾವೇರಿಯ ಸಿಎಂ ಮನೆ ಮುಂದೆ ಒಂದು ದಿನದ ಉಗ್ರ ಹೋರಾಟ ಮಾಡಲಾಗುವುದು ಎಂದರು. ಪಂಚಮಸಾಲಿ ನಡೆ ಹಾವೇರಿ ಕಡೆ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಂಚಮಸಾಲಿಗಳು ಭಾಗವಹಿಸಬೇಕು. ಸಚಿವ ಸಂಪುಟದ ಸಭೆಯ ನಿರ್ಣಯವನ್ನು ನಾವು ತಿರಸ್ಕರಿಸುತ್ತೇವೆ. ಹಾವೇರಿಯಲ್ಲಿ 40 ಸಾವಿರಕ್ಕೂ ಅಧಿಕ ಜನರೊಂದಿಗೆ ಹೋರಾಟ ಮಾಡುತ್ತೇವೆ. ಅಂದು 2ಎ ಮೀಸಲಾತಿ ಘೋಷಣೆ ಮಾಡದಿದ್ದರೆ ಮುಂದಿನ ಹೋರಾಟದ ಸ್ವರೂಪವನ್ನು ಹಾವೇರಿಯಲ್ಲಿಯೇ ಘೋಷಣೆ ಮಾಡುತ್ತೇವೆ ಎಂದರು.
ಪಂಚಮಸಾಲಿಗರಿಗೆ ಮೋಸ ಮಾಡಿದ್ರೆ ಉಳಿಗಾಲವಿಲ್ಲ: ಪಂಚಮಸಾಲಿ ಸಮಾಜಕ್ಕೆ ಮೋಸ ಮಾಡಿದರೆ ಬಿಜೆಪಿಗೆ ಉಳಿಗಾಲ ಇಲ್ಲ ಎಂದು ಇಲ್ಲಿಯವರೆಗೆ ಬೊಮ್ಮಾಯಿ ಅವರಿಗೆ ಕೋಣೆಯಲ್ಲಿ ಹೇಳುತ್ತಿದ್ದೆ. ಈಗ ಬಹಿರಂಗವಾಗಿಯೇ ಹೇಳುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದ ವಿಚಾರಕ್ಕೆ ಸಂಬಂಧಿಸಿ ಸರ್ಕಾರ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಾನು ಬಿಜೆಪಿ ಉಳಿಯಬೇಕು ಹಾಗೂ ಪಕ್ಷದ ಭವಿಷ್ಯದ ದೃಷ್ಟಿಯಿಂದ ಮಾತನಾಡುತ್ತಿದ್ದೇನೆ.
ಪಂಚಮಸಾಲಿ ಅಹೋರಾತ್ರಿ ಧರಣಿ ವಾಪಸ್: ತಾತ್ಕಾಲಿಕವಾಗಿ ಹಿಂತೆಗೆತ
ನಾವು ಕೇವಲ ಒಂದೇ ಸಮಾಜಕ್ಕೆ ಕೇಳಿಲ್ಲ. ಹಾಲುಮತ ಸಮುದಾಯವನ್ನೂ ಎಸ್ಟಿಗೆ ಸೇರಿಸಿ ಎಂದು ಹೇಳಿದ್ದೇವೆ. ಇಷ್ಟುಹೇಳಿದರೂ ಗೊಂದಲದಲ್ಲಿ ಇಟ್ಟಿದ್ದಾರೆ ಎಂದು ಹರಿಹಾಯ್ದರು. ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಎಷ್ಟುಅಂತರದಿಂದ ಗೆಲುವು ಸಾಧಿಸಿದೆ? ಬೆಳಗಾವಿ ವಿಧಾನ ಪರಿಷತ್, ಮಸ್ಕಿಯಲ್ಲಿ ಏನಾಯಿತು ಎಂದ ಅವರು, ಪಕ್ಷ 2023ರಲ್ಲಿ ಅಧಿಕಾರಕ್ಕೆ ಬರಬೇಕು 150 ಕ್ಷೇತ್ರ ಬರಬೇಕು ಎನ್ನುವ ಉದ್ದೇಶ ನನ್ನದು ಎಂದು ಮಾರ್ಮಿಕವಾಗಿ ನುಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ