10 ಕನ್ನಡಿಗರಿಗೆ ಪದ್ಮ: ಪೇಜಾವರಶ್ರೀ, ಜಾರ್ಜ್ ಫರ್ನಾಂಡಿಸ್‌ಗೆ ಮರಣೋತ್ತರ ಪದ್ಮವಿಭೂಷಣ!

By Kannadaprabha NewsFirst Published Jan 26, 2020, 10:28 AM IST
Highlights

10 ಕನ್ನಡಿಗರಿಗೆ ಪದ್ಮ| ಪೇಜಾವರಶ್ರೀ, ಜಾರ್ಜ್ ಫರ್ನಾಂಡಿಸ್‌ಗೆ ಮರಣೋತ್ತರ ಪದ್ಮವಿಭೂಷಣ| ಕನ್ನಡಪ್ರಭ ವರ್ಷದ ವ್ಯಕ್ತಿ, ಅಕ್ಷರ ಸಂತ ಹರೇಕಳ ಹಾಜಬ್ಬಗೆ ಪದ್ಮಶ್ರೀ ಗೌರವ| ತುಳಸಿ ಗೌಡ, ವಿಜಯ ಸಂಕೇಶ್ವರ, ಎಂ.ಪಿ.ಗಣೇಶ್‌ ಸೇರಿ 8 ಗಣ್ಯರಿಗೆ ಪದ್ಮಶ್ರೀ

ನವದೆಹಲಿ[ಜ.26]: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ನೀಡಲಾಗುವ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ಒಟ್ಟು 141 ಜನರಿಗೆ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಈ ಪೈಕಿ 10 ಕನ್ನಡಿಗರಿಗೆ 9 ಪ್ರಶಸ್ತಿ ಸಂದಿದೆ. 2019ನೇ ಸಾಲಿನಲ್ಲಿ ಕನ್ನಡಿಗರಿಗೆ ಕೇವಲ 5 ಪದ್ಮಶ್ರೀ ಪುರಸ್ಕಾರಗಳು ಮಾತ್ರ ಸಂದಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಕನ್ನಡಿಗರಿಗೆ ಹೆಚ್ಚಿನ ಮನ್ನಣೆ ಸಿಕ್ಕಿದೆ.

ಪದ್ಮವಿಭೂಷಣ: ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಮತ್ತು ಮಂಗಳೂರು ಮೂಲದ ಮಾಜಿ ಕೇಂದ್ರ ಸಚಿವ ಜಾಜ್‌ರ್‍ ಫರ್ನಾಂಡಿಸ್‌ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಕಿತ್ತಳೆ ಮಾರಿ ಶಿಕ್ಷಣ ದೇಗುಲ ಕಟ್ಟಿದ ಅಕ್ಷರ ಸಂತನಿಗೆ ಪದ್ಮಶ್ರೀ

ಉಳಿದಂತೆ ‘ಕನ್ನಡಪ್ರಭ ವರ್ಷದ ವ್ಯಕ್ತಿ ಪ್ರಶಸ್ತಿ’ ಪುರಸ್ಕೃತ ಮಂಗಳೂರಿನ ಹರೇಕಳ ಹಾಜಬ್ಬ, ಕ್ರೀಡಾ ಕ್ಷೇತ್ರದಿಂದ ಎಂ.ಪಿ.ಗಣೇಶ್‌, ವೈದ್ಯಕೀಯ ಕ್ಷೇತ್ರದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನ ನಿರ್ದೇಶಕ ಡಾ| ಬಿ.ಎನ್‌.ಗಂಗಾಧರ್‌, ಟ್ಯಾಲಿ ಸಲ್ಯೂಷನ್ಸ್‌ ಸಂಸ್ಥಾಪಕ ಭರತ್‌ ಗೋಯೆಂಕಾ, ಸಂಗೀತ ಕ್ಷೇತ್ರದಲ್ಲಿ ಕೆ.ವಿ.ಸಂಪತ್‌ಕುಮಾರ್‌ ಮತ್ತು ವಿದುಷಿ ಕೆ.ಎಸ್‌. ಜಯಲಕ್ಷ್ಮೇ (ಜಂಟಿ), ಉದ್ಯಮ ವಲಯದಿಂದ ವಿಜಯ್‌ ಸಂಕೇಶ್ವರ, ಸಮಾಜ ಸೇವೆಗಾಗಿ ಉತ್ತರ ಕನ್ನಡ ಜಿಲ್ಲೆಯ ತುಳಸಿ ಗೌಡ ಅವರಿಗೆ ಪದ್ಮಶ್ರೀ ಗೌರವ ಪ್ರಕಟಿಸಲಾಗಿದೆ.

ಪದ್ಮವಿಭೂಷಣ

1. ದಿ.ವಿಶ್ವೇಶ ತೀರ್ಥ ಸ್ವಾಮೀಜಿ: ಹಿಂದಿನ ಉಡುಪಿ ಪೇಜಾವರ ಮಠಾಧೀಶ

2. ದಿ.ಜಾಜ್‌ರ್‍ ಫರ್ನಾಂಡಿಸ್‌: ಮಾಜಿ ಕೇಂದ್ರ ಸಚಿವ

ಪದ್ಮಶ್ರೀ

1. ಹರೇಕಳ ಹಾಜಬ್ಬ: ಕಿತ್ತಳೆ ಮಾರಿ ಶಾಲೆ ಕಟ್ಟಿಸಿದ ಅಕ್ಷರ ಸಂತ

2. ತುಳಸೀ ಗೌಡ: 1 ಲಕ್ಷ ಗಿಡ ನೆಟ್ಟಹಾಲಕ್ಕಿ ಜನಾಂಗದ ಸಾಧಕಿ

3. ವಿಜಯ ಸಂಕೇಶ್ವರ: ಸಾರಿಗೆ ಉದ್ಯಮಿ, ಮಾಧ್ಯಮ ಸಂಸ್ಥೆ ಮಾಲಿಕ

4. ಭರತ್‌ ಗೋಯೆಂಕಾ: ಟ್ಯಾಲಿ ಕಂಪನಿ ಸಂಸ್ಥಾಪಕ, ಉದ್ಯಮಿ

5. ಕೆ.ವಿ.ಸಂಪತ್‌-ವಿದುಷಿ ಜಯಲಕ್ಷ್ಮಿ: ದೇಶದ ಏಕೈಕ ಸಂಸ್ಕೃತ ದಿನಪತ್ರಿಕೆಯ ಸಂಪಾದಕ

6. ಎಂ.ಪಿ.ಗಣೇಶ್‌: ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ, ಕೋಚ್‌

7. ಡಾ| ಬಿ.ಎನ್‌.ಗಂಗಾಧರ: ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಯ ನಿರ್ದೇಶಕರು

‘ರಾಷ್ಟ್ರಸಂತ’ ಉಡುಪಿ ವಿಶ್ವೇಶ ತೀರ್ಥರಿಗೆ ಮರಣೋತ್ತರ ಗೌರವ

click me!