ಆಕ್ಸಿಜನ್‌ಗೆ ಗೋವಾ ಹಾಹಾಕಾರ,ರಾಜ್ಯದಲ್ಲಿಲ್ಲ ಸಮಸ್ಯೆ

By Kannadaprabha NewsFirst Published May 17, 2021, 9:48 AM IST
Highlights
  • ಕರ್ನಾಟಕದಲ್ಲಾಯ್ತು ಈಗ ಗೋವಾದಲ್ಲಿ ಆಕ್ಸಿಜನ್‌ಗೆ ಹಾಹಾಕಾರ
  • ಆಮ್ಲಜನಕ ಸಮಸ್ಯೆಯಿಂದ ಸಾವಿಗೀಡಾಗುವ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳ
  •  ಆಮ್ಲಜನಕ ಸಮಸ್ಯೆಯಿಂದ ಇದುವರೆಗೆ ಸಾವಿಗೀಡಾದ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿಕೆ

ಬೆಂಗಳೂರು (ಮೇ.17):  ನೆರೆಯ ಗೋವಾದಲ್ಲಿ ಆಮ್ಲಜನಕ ಸಮಸ್ಯೆಯಿಂದ ಸಾವಿಗೀಡಾಗುವ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಆಮ್ಲಜನಕ ಸಮಸ್ಯೆಯನ್ನು ಬಹುತೇಕ ನಿಭಾಯಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ.

ರಾಜ್ಯದ ಚಾಮರಾಜನಗರ ಜಿಲ್ಲೆಯಲ್ಲಿ 24 ಮಂದಿ ಸೋಂಕಿತರು ಆಮ್ಲಜನಕ ಕೊರತೆಯಿಂದಾಗಿ ಸಾವನ್ನಪ್ಪಿದ ದುರಂತದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರ ಚುರುಕಾಗಿ ಪರಿಸ್ಥಿತಿಯನ್ನು ನಿಯಂತ್ರಿಸುವ ಮೂಲಕ ಆಮ್ಲಜನಕ ಕೊರತೆ ಸಂಭವಿಸದಂತೆ ಕ್ರಮ ಕೈಗೊಂಡಿತು. ಆದಾದ ಬಳಿಕ ಇದುವರೆಗೆ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದ ಘಟನೆಗಳು ರಾಜ್ಯದಲ್ಲಿ ಸಂಭವಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಗೋವಾದಲ್ಲಿ ಮತ್ತೆ ದುರ್ಘಟನೆ: ಆಕ್ಸಿಜನ್ ಇಲ್ಲದೆ 15 ಜನ ಸೋಂಕಿತರು ಸಾವು ...

ಹಾಗೆ ನೋಡಿದರೆ ನೆರೆಯ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಮ್ಲಜನಕ ಸಮಸ್ಯೆಯಿಂದ ಇದುವರೆಗೆ ಸಾವಿಗೀಡಾದ ಕೊರೋನಾ ಸೋಂಕಿತರ ಸಂಖ್ಯೆ 83ಕ್ಕೆ ಏರಿದೆ. ಅದಕ್ಕೆ ಹೋಲಿಸಿದರೆ ಕರ್ನಾಟಕವು ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸಫಲವಾಗಿದೆ ಎಂದೇ ಹೇಳಬಹುದಾಗಿದೆ.

ಚೀನಾದಿಂದ ದೆಹಲಿಗೆ ಬಂತು 3,600 ಆಕ್ಸಿಜನ್ ಕಾನ್ಸನ್‌ಟ್ರೇಟರ್ಸ್; ಇದುವರಿಗಿನ ಅತ್ಯಧಿಕ! ..

ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಅವರನ್ನು ಆಮ್ಲಜನಕ ಪೂರೈಕೆಗೆ ಉಸ್ತುವಾರಿಯನ್ನಾಗಿ ನೇಮಿಸಿದ ಬೆನ್ನಲ್ಲೇ ಬಳ್ಳಾರಿಯ ಜಿಂದಾಲ್‌ ಸೇರಿದಂತೆ ಪ್ರಮುಖ ಕೈಗಾರಿಕೆಗಳಿಗೆ ಭೇಟಿ ನೀಡಿ ರಾಜ್ಯದಲ್ಲಿ ಉತ್ಪಾದನೆಯಾಗುವ ಆಮ್ಲಜನಕವನ್ನು ಇಲ್ಲಿಯೇ ಹೆಚ್ಚು ಪೂರೈಸಬೇಕು ಎಂಬ ಸೂಚನೆ ನೀಡಿದರು. ಜತೆಗೆ ಚಾಮರಾಜನಗರ ದುರಂತ ಬೆನ್ನಲ್ಲೇ ಹೈಕೋರ್ಟ್‌ ಕೂಡ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಆಮ್ಲಜನಕ ಪಾಲು ನೀಡಬೇಕು ಎಂದು ಆದೇಶಿಸಿತು. ಜತೆಗೆ ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದಲೂ ರಾಜ್ಯಕ್ಕೆ ಹಡಗು, ರೈಲು ಹಾಗೂ ವಿಮಾನದಲ್ಲಿ ಆಮ್ಲಜನಕ ಪೂರೈಕೆಯಾಗುವಂತೆ ಸರ್ಕಾರ ನೋಡಿಕೊಂಡಿತು. ಒಟ್ಟಾರೆ ಸದ್ಯಕ್ಕೆ ರಾಜ್ಯದಲ್ಲಿ ಕೊರೋನಾ ಸೋಂಕಿತರಿಗೆ ಆಮ್ಲಜನಕ ಪೂರೈಕೆ ಸುಗಮವಾಗಿ ನಡೆಯುತ್ತಿದೆ ಎನ್ನುವುದು ಸಮಾಧಾನದ ಸಂಗತಿ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!