Operation Ganga: ಭಾರತ ಸರ್ಕಾರ ಏನೂ ಮಾಡ್ತಿಲ್ಲ ಎಂದವರ ವಿರುದ್ಧ ಆಕ್ರೋಶ

By Kannadaprabha NewsFirst Published Mar 4, 2022, 8:48 AM IST
Highlights

*  ಖಾರ್ಕೀವ್‌ ಸೇರಿ ಸಂಘರ್ಷ ಪೀಡಿತ ಪ್ರದೇಶಗಳ ವಿದ್ಯಾರ್ಥಿಗಳ ರಕ್ಷಣೆ ಇಲ್ಲ
*  ಯುದ್ಧಪೀಡಿತ ಪ್ರದೇಶಗಳಿಗೆ ಯಾರೂ ತೆರಳಲು ಸಾಧ್ಯವಿಲ್ಲ
*  ಜಾಲತಾಣದಲ್ಲಿ ವಿದ್ಯಾರ್ಥಿ ವಿರುದ್ಧ ಗರಂ
 

ಬೆಂಗಳೂರು(ಮಾ.04):  ಉಕ್ರೇನ್‌ನಲ್ಲಿ(Ukraine) ಸಿಲುಕಿರುವ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರವಾಗಲಿ(Government of India), ರಾಯಭಾರ ಸಿಬ್ಬಂದಿಯಾಗಲಿ ಏನೂ ಸಹಾಯ ಮಾಡುತ್ತಿಲ್ಲ. ಉಕ್ರೇನ್‌ ಪಶ್ಚಿಮ ಭಾಗದಲ್ಲಿರುವವರು ಮಾತ್ರ ಬರುತ್ತಿದ್ದಾರೆ. ಎಲ್ಲರೂ ತಾವೇ ಬಸ್ಸು ಮತ್ತಿತರೆ ವಾಹನ ಹಿಡಿದು ಹೇಗ್ಹೇಗೋ ಗಡಿ ತಲುಪುತ್ತಿದ್ದಾರೆ. ಅದಕ್ಕೂ ಉಕ್ರೇನ್‌ ಪೊಲೀಸರು ನೆರವಾಗುತ್ತಿದ್ದಾರೆಯೇ ಹೊರತು, ಒಬ್ಬೇ ಒಬ್ಬ ಭಾರತೀಯ ರಾಯಭಾರ ಸಿಬ್ಬಂದಿ ಸಹಾಯಕ್ಕೆ ಧಾವಿಸಿಲ್ಲ. ಗಡಿಯಲ್ಲೂ ಸಹಾಯ ಸಿಕ್ಕಿಲ್ಲ. ಪೂರ್ವ ಭಾಗದಲ್ಲಿ ಸಿಲುಕಿದವರು ಅಲ್ಲಲ್ಲೇ ಇದ್ದಾರೆ. ಯಾರೂ ರಕ್ಷಣೆಗೆ ಬಂದಿಲ್ಲ. ಕೇಂದ್ರ ಸಚಿವರು ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಉಕ್ರೇನ್‌ನಿಂದ ಬೆಂಗಳೂರಿಗೆ ಆಗಮಿಸಿದ ಕೆಲ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ವಿದ್ಯಾರ್ಥಿಗಳ ಈ ಹೇಳಿಕೆಗಳಿಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಯುದ್ಧಪೀಡಿತ ಪ್ರದೇಶಕ್ಕೆ ನೇರವಾಗಿ ತೆರಳಿ ಯಾರನ್ನೂ ರಕ್ಷಿಸಲು ಸಾಧ್ಯವಿಲ್ಲ. ಇಂತಹ ಸಂಕಷ್ಟಮಯ ಪರಿಸ್ಥಿತಿಯಲ್ಲೂ ಭಾರತ ಸರ್ಕಾರ ಕೈಕಟ್ಟಿಕೂತಿಲ್ಲ. ಆಪರೇಷನ್‌ ಗಂಗಾ(Operation Ganga) ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು(Students) ರಕ್ಷಿಸಲಾಗುತ್ತಿದೆ.

Latest Videos

Operation Ganga: ಉಕ್ರೇನ್‌ನಿಂದ ಒಂದೇ ದಿನ 3726 ಭಾರತೀಯರ ರಕ್ಷಣೆ: 63 ಕನ್ನಡಿಗರು ತಾಯ್ನಾಡಿಗೆ ವಾಪಸ್‌!

ಪ್ರಧಾನಿ ನರೇಂದ್ರ ಮೋದಿ(Narendra Modi) ಸರ್ಕಾರ ತನ್ನ ರಾಜತಾಂತ್ರಿಕ ಸಂಪರ್ಕಗಳನ್ನು ಬಳಸಿ 5 ದೇಶಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಪ್ರಯಾಣಿಕ ವಿಮಾನಗಳಲ್ಲದೆ, ವಾಯುಪಡೆಯ ವಿಮಾನಗಳನ್ನೂ ಬಳಸಿ ನಿರಂತರವಾಗಿ ಏರ್‌ ಲಿಫ್ಟ್‌(Airlift) ಮಾಡುತ್ತಿದೆ. ಅಲ್ಲದೆ, ಉಕ್ರೇನ್‌ನಲ್ಲಿ ಸಿಲುಕಿರುವವರು ಗಡಿಯತ್ತ ಬರಲು ಅಗತ್ಯ ಸಮನ್ವಯ ವ್ಯವಸ್ಥೆಯನ್ನೂ ಮಾಡುತ್ತಿದೆ. ಅಮೆರಿಕ, ಚೀನಾದಂತಹ ದೇಶಗಳೇ ತಮ್ಮ ನಾಗರಿಕರ ರಕ್ಷಣೆ ಬಗ್ಗೆ ಕೈಚೆಲ್ಲಿ ‘ನಿಮ್ಮ ಸುರಕ್ಷತೆ ನೀವೇ ನೋಡಿಕೊಳ್ಳಿ’ ಎಂಬರ್ಥದ ಸಂದೇಶ ರವಾನಿಸಿರುವ ಸಂದರ್ಭದಲ್ಲಿ ಭಾರತ ಸರ್ಕಾರ ತನ್ನೆಲ್ಲಾ ಶಕ್ತಿ-ಯುಕ್ತಿಯನ್ನೂ ಬಳಸಿ ಭಾರತೀಯರ(Indians) ರಕ್ಷಣೆಯಲ್ಲಿ ತೊಡಗಿದೆ. ಆದಾಗ್ಯೂ, ತವರಿಗೆ ಮರಳಿದ ವಿದ್ಯಾರ್ಥಿಗಳು ಕೃತಘ್ನರಂತೆ ವರ್ತಿಸುವುದು ಸರಿಯಲ್ಲ ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿದ್ದಾರೆ.

ವಿದ್ಯಾರ್ಥಿಗಳ ಆಕ್ರೋಶ:

ಬುಧವಾರ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಅನೀಶ್‌ ಮತ್ತು ಸ್ನೇಹಿತರು ಉಕ್ರೇನ್‌ನಲ್ಲಿ ತಾವು ಎದುರಿಸಿದ ಸಂಕಷ್ಟ ವಿವರಿಸಿದರಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು.

Russia Ukraine War: ಉಕ್ರೇನಿಯನ್ನರಿಗೆ 18 ತಿಂಗಳ ಅವಧಿಗೆ ಅಮೆರಿಕಾದಲ್ಲಿ ಕಾನೂನುಬದ್ಧವಾಗಿ ಉಳಿಯಲು ಅವಕಾಶ

ಭಾರತೀಯ ರಾಯಭಾರಿ ಕಚೇರಿ(Indian Embassy) ಸಿಬ್ಬಂದಿ ಕೇವಲ ಉಕ್ರೇನ್‌ನ ಪಶ್ಚಿಮ ಭಾಗದವರು, ಗಡಿ ಪ್ರದೇಶದ ನಗರಗಳಲ್ಲಿರುವ ವಿದ್ಯಾರ್ಥಿಗಳನ್ನು ಮಾತ್ರ ಏರ್‌ಲಿಫ್ಟ್‌ ಮಾಡುತ್ತಿದ್ದಾರೆ. ಈವರೆಗೂ ಖಾರ್ಕೀವ್‌ ಸೇರಿದಂತೆ ಯುದ್ಧ ನಡೆಯುತ್ತಿರುವ ಉಕ್ರೇನ್‌ ಪೂರ್ವ ಭಾಗದ ನಗರಗಳಿಗೆ ಕಾಲಿಟ್ಟಿಲ್ಲ. ಅಲ್ಲಿಯೂ ಭಾರತೀಯ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ನಿರಂತರ ಬಾಂಬ್‌(Bomb) ದಾಳಿಗಳಿಂದ ಬಂಕರ್‌ಗಳಲ್ಲಿಯೇ ಬಂಧಿಯಾಗಿದ್ದು, ಊಟ ಸಿಗದೆ ಸಂಕಷ್ಟದಲ್ಲಿದ್ದಾರೆ. ಇಂತಹರ ನೆರವಿಗೆ ಭಾರತೀಯ ರಾಯಭಾರಿ ಅಧಿಕಾರಿಗಳು ಮುಂದಾಗುತ್ತಿಲ್ಲ. ಕರೆ ಮಾಡಿದರೆ ಸ್ಪಂದಿಸುವುದಿಲ್ಲ. ಯುದ್ಧ ನಡೆಯುತ್ತಿರುವ ನಗರಗಳಲ್ಲಿ ರಾಯಭಾರಿ ಅಧಿಕಾರಿಗಳೇ ಇಲ್ಲ ಎಂದು ಸಮಸ್ಯೆಗಳನ್ನು ವಿವರಿಸಿದರು.

‘ರಾಯಭಾರಿ ಕಚೇರಿಗೆ ಸಹಾಯಕ್ಕಾಗಿ ಕರೆ ಮಾಡಿದರೆ ಗಡಿಗೆ ಬನ್ನಿ ಭಾರತಕ್ಕೆ(India) ಕರೆದೊಯ್ಯುತ್ತೇವೆ ಎನ್ನುತ್ತಾರೆ. ಸಾವಿರಾರು ಕಿ.ಮೀ ದೂರ ಬರುವುಕ್ಕೆ ಸಾಕಷ್ಟು ಸಮಸ್ಯೆಗಳಿವೆ. ರೈಲುಗಳಲ್ಲಿ ಭಾರತೀಯರಿಗೆ ಅವಕಾಶ ನಿಡುತ್ತಿಲ್ಲ. ನಾವು ಇರುವ ಸ್ಥಳಗಳಿಂದ ಗಡಿಗೆ 800 ಕಿ.ಮೀ ದೂರ ಇದೆ. ನಾವು ಕೂಡಾ ಭಾರತ ಸರ್ಕಾರ ನೆರವಿಲ್ಲದೇ ಕಷ್ಟಪಟ್ಟು ಗಡಿ ತಲುಪಿದ್ದೇವೆ. ಗಡಿಯಲ್ಲಿಯೂ ರಾಯಭಾರಿ ಅಧಿಕಾರಿಗಳು ಶೀಘ್ರ ಆಗಮಿಸಲಿಲ್ಲ, ನಾವೇ ಸ್ಥಳೀಯರ ನೆರವಿನಿಂದ ವಲಸೆ ಪ್ರಮಾಣ ಪತ್ರ ಪಡೆದುಕೊಂಡೆವು ಗಡಿತಲುಪಿದ ಬಳಿಕ ವಿಮಾನದಲ್ಲಿ ಮಾತ್ರ ನಮ್ಮನ್ನು ಕರೆತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಜತೆಗೆ ಸಾಕಷ್ಟು ಮಂದಿ ಇಂದಿಗೂ ನೆರವಿಗಾಗಿ ಖಾರ್ಕೀವ್‌ನಲ್ಲಿ ಕಾಯುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳಿಗೆ ದಯವಿಟ್ಟು ಸರ್ಕಾರ ರಕ್ಷಿಸಬೇಕು ಎಂದು ಮನವಿ ಮಾಡಿದರು.
 

click me!