'ಒಂದು ವಿಶ್ವ ಒಂದು ಕುಟುಂಬ' ಮಿಷನ್ ವತಿಯಿಂದ ವಿಶ್ವ ಸಾಂಸ್ಕೃತಿಕ ಉತ್ಸವ ಆಯೋಜನೆ: ಎಲ್ಲಿ ಗೊತ್ತಾ?

Published : Aug 11, 2025, 02:26 PM ISTUpdated : Aug 11, 2025, 02:28 PM IST
World Cultural Festival

ಸಾರಾಂಶ

ಒಂದು ವಿಶ್ವ ಒಂದು ಕುಟುಂಬ ಮಿಷನ್ ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ 100 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ.

ಮುದ್ದೇನಹಳ್ಳಿ (ಆ.11): ವಿಶ್ವದ 100 ದೇಶಗಳಲ್ಲಿ ಸಕ್ರಿಯವಾಗಿರುವ ‘ಒಂದು ವಿಶ್ವ ಒಂದು ಕುಟುಂಬ’ ಮಿಷನ್ (One World One Family Mission) ಚಿಕ್ಕಬಳ್ಳಾಪುರ ತಾಲ್ಲೂಕು ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿ 100 ದಿನಗಳ ವಿಶ್ವ ಸಾಂಸ್ಕೃತಿಕ ಉತ್ಸವವನ್ನು (World Cultural Festival) ಆಯೋಜಿಸಿದೆ. ಈ ದಶಕದ ವಿಶಿಷ್ಟ ಸಾಂಸ್ಕೃತಿಕ ಸಡಗರ ಎನಿಸಿಕೊಂಡಿರುವ ಈ ಉತ್ಸವ ಆಗಸ್ಟ್‌ 16ರಿಂದ ನವೆಂಬರ್ 23 ರ ವರೆಗೆ ನಡೆಯಲಿದೆ. ನೂರು ದಿನಗಳಲ್ಲಿ ನೂರು ದೇಶಗಳನ್ನು ಒಗ್ಗೂಡಿಸುವ ಉದ್ದೇಶವನ್ನು ಈ ಸಾಂಸ್ಕೃತಿಕ ಉತ್ಸವ ಹೊಂದಿದೆ.

ಇದೇ ಸಂದರ್ಭದಲ್ಲಿ ಕಲೆ, ಸಂಗೀತ, ಅಧ್ಯಾತ್ಮ ಮತ್ತು ಸೇವೆಯ ಮೂಲಕ ವಿಶ್ವಮಾನವ ಸಂದೇಶ ನೀಡಲಾಗುವುದು. ವಿವಿಧತೆಯಲ್ಲಿ ಏಕತೆ ಮತ್ತು ಗಡಿಗಳನ್ನು ಮೀರಿ ನಮ್ಮನ್ನು ಬೆಸೆಯುವ ಮೌಲ್ಯಗಳನ್ನು ಎಲ್ಲರೂ ಸಂಭ್ರಮಿಸಲು ಈ ಉತ್ಸವವು ಒಂದು ಅದ್ಭುತ ಕಾರಣವಾಗಿಯೂ ಒದಗಿ ಬರುತ್ತದೆ. ಪ್ರತಿದಿನವೂ ಒಂದೊಂದು ದೇಶಗಳನ್ನು ಒಳಗೊಳ್ಳುವ ರೀತಿಯಲ್ಲಿ ಉತ್ಸವವನ್ನು ಯೋಜಿಸಲಾಗಿದೆ. ಪ್ರಸಿದ್ಧ ವಾಗ್ಮಿಗಳು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಬೇರುಗಳ ಒಳನೋಟಗಳನ್ನು ಈ ಸಂದರ್ಭದಲ್ಲಿ ಹಂಚಿಕೊಳ್ಳಲಿದ್ದಾರೆ. ‘ಒಂದು ವಿಶ್ವ ಒಂದು ಕುಟುಂಬ’ ಮಿಷನ್‌ನ ಸಂಸ್ಥಾಪಕರಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸಾರ್ವತ್ರಿಕ ಸತ್ಯಗಳು ಮತ್ತು ವಿಶ್ವಮೌಲ್ಯಗಳ ಕುರಿತು ಪ್ರವಚನ ಮಾಡಲಿದ್ದಾರೆ.

ಆಯಾ ದೇಶಗಳ ಅತ್ಯುತ್ತಮ ಮಾನವೀಯ ಕಾರ್ಯಗಳನ್ನು ಗೌರವಿಸುವ ಕಾರ್ಯಕ್ರಮಗಳು ಪ್ರತಿ ಸಂಜೆ ನಡೆಯಲಿವೆ. ರೋಮಾಂಚಕ ಸಾಂಸ್ಕೃತಿಕ ಪ್ರಸ್ತುತಿಗಳು ಪ್ರತಿದಿನವನ್ನೂ ಬೆಳಗಲಿವೆ. ಈ ನೂರು ದಿನಗಳ ಅವಧಿಯಲ್ಲಿ ಪವಿತ್ರ ನವರಾತ್ರಿಯೂ ಇರುವುದರಿಂದ ದೇವಿ ಆರಾಧನೆಗೆ ಸಂಬಂಧಿಸಿದ ಹಲವು ಆಚರಣೆಗಳನ್ನೂ ಆಯೋಜಿಸಲಾಗಿದೆ. ಅತಿರುದ್ರಮಹಾಯಜ್ಞವು ಸಾಂಸ್ಕೃತಿಕ ಉತ್ಸವದ ಮೆರುಗು ಹೆಚ್ಚಿಸಲಿದೆ. ವಿಶ್ವ ಸಾಮರಸ್ಯವನ್ನು ಸಂಭ್ರಮಿಸುವ ಈ ಆಧ್ಯಾತ್ಮಿಕ ಉಪಕ್ರಮಗಳು ದೇವಿ ಉಪಾಸನೆಯ ಹಲವು ಆಯಾಮಗಳನ್ನು ಅನಾವರಣಗೊಳಿಸಲಿವೆ.

ಇದೇ ಅವಧಿಯಲ್ಲಿ ವಿಶ್ವದ ಅತಿದೊಡ್ಡ ಉಚಿತ ಖಾಸಗಿ ಗ್ರಾಮೀಣ ಆಸ್ಪತ್ರೆಯು ಉದ್ಘಾಟನೆಯಾಗಲಿದೆ. ಆರೋಗ್ಯ ಸೇವೆಗಳು ಸಮರ್ಪಕವಾಗಿ ಲಭ್ಯವಿರದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಇದು ಮಹತ್ವದ ಪ್ರಯತ್ನವಾಗಲಿದೆ. ನೂರು ದಿನಗಳ ವಿಶ್ವ ಸಾಂಸ್ಕೃತಿಕ ಸಂಭ್ರಮದ ಸಂದರ್ಭದಲ್ಲಿಯೇ “ದಿ ಸಾಯಿ ಸಿಂಫನಿ ವರ್ಲ್ಡ್ ಆರ್ಕೆಸ್ಟ್ರಾ” (ಸಾಯಿ ವಿಶ್ವ ಸಮನ್ವಯ ವಾದ್ಯಗೋಷ್ಠಿ) 40 ದೇಶಗಳ 4000 ಕಲಾವಿದರು ನಡೆಸಿಕೊಡುವ ಸಂಗೀತ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದೆ. ಇದರಲ್ಲಿ 170 ಮಕ್ಕಳು ಸಹ ಪಾಲ್ಗೊಳ್ಳುತ್ತಿದ್ದಾರೆ.

ವಿಶ್ವ ಸಾಮರಸ್ಯ ಮತ್ತು ಭವಿಷ್ಯದ ಭರವಸೆಯ ಆಶಯಗಳನ್ನು ವಾದ್ಯಗೋಷ್ಠಿಯು ಪ್ರಸ್ತುತಪಡಿಸಲಿದೆ. ಇದೇ ವೇಳೆ ನಡೆಯಲಿರುವ ‘ವಿಶ್ವ ಧಾರ್ಮಿಕ ಶೃಂಗಸಭೆ’ಯಲ್ಲಿ ಅರ್ಥಪೂರ್ಣ ಸಂವಾದಗಳು ಜಿಜ್ಞಾಸುಗಳ ಗಮನ ಸೆಳೆಯಲಿದೆ. ವಿವಿಧ ಧರ್ಮಗಳನ್ನು ಆಳವಾಗಿ ಅಭ್ಯಾಸ ಮಾಡಿರುವ ಆಧ್ಯಾತ್ಮಿಕ ನಾಯಕರು ಈ ಸಂವಾದಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಸರ್ವಧರ್ಮ ಸಂವಾದದಲ್ಲಿ ಸಾರ್ವಕಾಲಿಕ ಮೌಲ್ಯಗಳ ಶಕ್ತಿ ಮತ್ತು ಪರಸ್ಪರರನ್ನು ಗೌರವಿಸುವ ಅಗತ್ಯದ ಬಗ್ಗೆ ವಿದ್ವಾಂಸರು ಬೆಳಕು ಚೆಲ್ಲಲಿದ್ದಾರೆ. ಭಗವಾನ್ ಶ್ರೀ ಸತ್ಯಸಾಯಿ ಬಾಬಾ ಅವರ ಜನ್ಮ ಶತಮಾನೋತ್ಸವ ಆಚರಣೆಯೊಂದಿಗೆ ಉತ್ಸವವು ಸಂಪನ್ನವಾಗಲಿದೆ.

ಸಾಯಿಬಾಬಾ ಅವರ ಜೀವನ, ಪ್ರೀತಿ ಮತ್ತು ಸೇವೆಯ ಸಂದೇಶವು ಲಕ್ಷಾಂತರ ಜನರನ್ನು ಇಂದಿಗೂ ಒಳಿತಿನ ಹಾದಿಯಲ್ಲಿ ಮುನ್ನಡೆಯುವಂತೆ ಪ್ರೇರೇಪಿಸುತ್ತಿದೆ. ‘ವಿಶ್ವ ಸಾಂಸ್ಕೃತಿಕ ಉತ್ಸವ’ವು ಪರಿಶುದ್ಧ ಮಾನವೀಯತೆಯು ನಿಸ್ವಾರ್ಥ ಪ್ರೀತಿ ಮತ್ತು ಪವಿತ್ರ ಉದ್ದೇಶದೊಂದಿಗೆ ಸಮ್ಮಿಲನಗೊಳ್ಳುವ ಅಪರೂಪದ ಸಂದರ್ಭವಾಗಿದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ಕಾಣಬಹುದಾದ ಈ ವಿಶಿಷ್ಟ ಜಾಗತಿಕ ಸಮ್ಮಿಲನದಲ್ಲಿ ಪಾಲ್ಗೊಳ್ಳಲು ಎಲ್ಲರಿಗೂ ಸ್ವಾಗತ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸೇವೆಯಲ್ಲಿಯೇ ಸಾರ್ಥಕತೆ ಪಡೆಯುವ ಗೃಹ ರಕ್ಷಕರು
ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್