Covid 19 Threat: ರ‍್ಯಾಲಿಗಳಿಗೆ ಅವಕಾಶವಿಲ್ಲ, ನಿರ್ಧಾರದ ಹಿಂದೆ ರಾಜಕೀಯ ಉದ್ದೇಶವಿಲ್ಲ: ಸುಧಾಕರ್‌!

By Kannadaprabha NewsFirst Published Jan 5, 2022, 5:10 AM IST
Highlights

*ಸೋಂಕು ಕಡಿವಾಣಕ್ಕೆ ಕಠಿಣ ಕ್ರಮ: ಕೆ.ಸುಧಾಕರ್‌
*4 ದಿನಗಳಿಂದ ಸೋಂಕು ಭಾರೀ ಏರಿಕೆ
*ಪಾಸಿಟಿವಿಟಿ ಶೇ.0.16ರಿಂದ ಶೇ.3ಕ್ಕೆ ಹೆಚ್ಚಳ
*ರಾಜಕೀಯ ರಾರ‍ಯಲಿಗಳಿಗೆ ಅವಕಾಶವಿಲ್ಲ, 
*ನಿರ್ಧಾರದ ಹಿಂದೆ ರಾಜಕೀಯ ಉದ್ದೇಶವಿಲ್ಲ

ಬೆಂಗಳೂರು (ಜ.5): ನಾಲ್ಕು ದಿನಗಳಿಂದ ಕೊರೋನಾ ಸೋಂಕು (Covid 19) ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕೆ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಆರೋಗ್ಯ ಸಚಿವರ ಡಾ.ಕೆ.ಸುಧಾಕರ್‌ (Dr. K Sudhakar) ತಿಳಿಸಿದ್ದಾರೆ. ಸಿಎಂ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಸೆಂಬರ್‌ನಿಂದ ನಿಯಂತ್ರಣದಲ್ಲಿದ್ದ ಸೋಂಕು, ಕಳೆದ ನಾಲ್ಕು ದಿನಗಳಲ್ಲಿ ಭಾರೀ ಪ್ರಯಾಣದಲ್ಲಿ ಹೆಚ್ಚಳವಾಗಿದೆ ಎಂದು ತಿಳಸಿದ್ದಾರೆ

ಸೋಂಕು ಪರೀಕ್ಷೆಗಳ ಪಾಸಿಟಿವಿಟಿ ದರ ಶೇ.0.16 ನಿಂದ ಶೇ.3ಕ್ಕೆ ಹೆಚ್ಚಳವಾಗಿದೆ. ಈ ಹಿನ್ನೆಲೆ ಸರ್ಕಾರ ವಾರಾಂತ್ಯದ  ಕರ್ಫ್ಯೂ ಸೇರಿದಂತೆ ಕಠಿಣ ನಿಲುವುಗಳಿಗೆ ಮುಂದಾಗಿದೆ. ಈಗಾಗಲೇ ಮಹಾರಾಷ್ಟ್ರ, ದೆಹಲಿ, ತೆಲಂಗಾಣ, ದೆಹಲಿಯಲ್ಲಿ ಈ ಕ್ರಮಗಳನ್ನು ಕೈಗೊಂಡಿದ್ದಾರೆ. ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ ಈ ತೀರ್ಮಾನಕ್ಕೆ ಬರಲಾಗಿದೆ. ವಿದೇಶ, ಸೋಂಕು ಹೆಚ್ಚಿರುವ ಹೊರರಾಜ್ಯಗಳಿಂದ ಬಂದವರನ್ನು ಕಡ್ಡಾಯ ಪರೀಕ್ಷೆ ಮಾಡಿ ಮನೆಗೆ ಕಳುಹಿಸಲಾಗುತ್ತದೆ. ಸೋಂಕು ದೃಢಪಟ್ಟರೆ ಕಡ್ಡಾಯ ಐಸೋಲೇಷನ್‌ ಆಗಬೇಕಿದೆ ಎಂದು ತಿಳಿಸಿದರು.

ರಾಜಕೀಯ ರ‍್ಯಾಲಿಗಳಿಗೆ ಅವಕಾಶವಿಲ್ಲ:

ರಾಜಕೀಯ ಸೇರಿದಂತೆ ಯಾವುದೇ ರ‍್ಯಾಲಿಗಳಿಗೆ, ಪ್ರತಿಭಟನೆಗೆ ಅವಕಾಶ ಇಲ್ಲ. ಸೋಂಕು ನಿಯಂತ್ರಣ ಹೊರತು ಪಡಿಸಿ ಯಾವುದೇ ರಾಜಕೀಯ ಉದ್ದೇಶದಿಂದ ಈ ನಿಯಮ ಮಾಡಿಲ್ಲ. ನಿಯಮ ಎಲ್ಲ ರಾಜಕೀಯ ಪಕ್ಷಗಳಿಗೂ, ಸಂಘ ಸಂಸ್ಥೆಗಳಿಗೆ ಅನ್ವಯವಾಗುತ್ತದೆ ಎಂದು ಸ್ವಷ್ಟಪಡಿಸಿದರು.

ಗೋವಾದಿಂದ ಬಂದವರ ಪರೀಕ್ಷೆ:

ಗೋವಾ, ಮಹಾರಾಷ್ಟ್ರ, ಕೇರಳ ರಾಜ್ಯದಿಂದ ಯಾವ ಮಾರ್ಗವಾಗಿ ಬಂದರೂ ಕಡ್ಡಾಯ ನಿಗಾಕ್ಕೆ ಸೂಚಿಸಲಾಗಿದೆ. ಆರ್‌ಟಿಪಿಸಿಆರ್‌ ಪರೀಕ್ಷೆ ವರದಿ ಇಲ್ಲದಿದ್ದರೆ ರಾಜ್ಯ ಪ್ರವೇಶಕ್ಕೆ ಬಿಡುವುದಿಲ್ಲ. ಹೊಸ ವರ್ಷವನ್ನು ಗೋವಾದಲ್ಲಿ ಆಚರಿಸಿ ಬಂದವರಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಹೀಗಾಗಿ, ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಿಂದ ಗೋವಾಕ್ಕೆ ತೆರಳಿ ಹೊಸ ವರ್ಷ ಆಚರಿಸಿ ಬಂದವರನ್ನು ಪತ್ತೆ ಮಾಡಿ ಸೋಂಕು ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದರು.

ನಗರದಲ್ಲಿ ಕೊರೋನಾ ಸ್ಫೋಟ: 201 ದಿನದ ಬಳಿಕ 2053 ಕೇಸ್‌

ರಾಜಧಾನಿಯಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು, ಬರೋಬ್ಬರಿ 201 ದಿನಗಳ ಬಳಿಕ ಕೊರೋನಾ ಸೋಂಕಿನ ಪ್ರಕರಣ ಎರಡು ಸಾವಿರದ ಗಡಿ ದಾಟಿದೆ. ಮಂಗಳವಾರ 2053 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ನಗರದಲ್ಲಿ ಸಕ್ರಿಯ ಸೋಂಕಿತ ಪ್ರಕರಣಗಳ ಸಂಖ್ಯೆ 11,423ಕ್ಕೆ ಏರಿಕೆಯಾಗಿದೆ. ಸೋಂಕಿಗೆ ಮೂವರು ಬಲಿಯಾಗಿದ್ದಾರೆ. ಜೂ.12ರಂದು 2454 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ಅತ್ಯಧಿಕ ಗರಿಷ್ಠ ಸಂಖ್ಯೆಯಾಗಿತ್ತು. ನಂತರದ ದಿನಗಳಲ್ಲಿ ಸೋಂಕು ಇಳಿಕೆಯಾಗಿದ್ದು, 201 ದಿನಗಳಲ್ಲಿ ಯಾವತ್ತೂ ಎರಡು ಸಾವಿರದ ಗಡಿ ದಾಟಿರಲಿಲ್ಲ.

ಇದನ್ನೂ ಓದಿ: Covid 19 Threat: ಕೊರೋನಾ ಕೇಸ್‌ ಏರಿಕೆಯಾದರೆ 1-2 ವಾರದಲ್ಲಿ ಶಾಲೆ ಬಂದ್‌?

ಹೊಸ ಪ್ರಕರಣಗಳ ಪತ್ತೆಯಿಂದ ಈವರೆಗಿನ ಸೋಂಕಿತರ ಸಂಖ್ಯೆ 12,68,445ಕ್ಕೆ ಏರಿಕೆಯಾಗಿದೆ. 202 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಯಾದವರ ಸಂಖ್ಯೆ 12,40,610ಕ್ಕೆ ಏರಿಕೆಯಾಗಿದೆ. ಮೂವರು ಮೃತಪಟ್ಟಿದ್ದು, ಈವರೆಗೆ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 16,412ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಹಿತಿ ನೀಡಿದೆ.

ಪಾಲಿಕೆ ವ್ಯಾಪ್ತಿಯ 10 ವಾರ್ಡ್‌ಗಳಲ್ಲಿ 8ಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಬೆಳ್ಳಂದೂರು ವಾರ್ಡ್‌ ಒಂದರಲ್ಲಿಯೇ 40 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಉಳಿದಂತೆ ದೊಡ್ಡನೆಕ್ಕುಂದಿ 17, ಹಗದೂರು 15, ಎಚ್‌ಎಸ್‌ಆರ್‌ ಲೇಔಟ್‌ 14, ಅರಕೆರೆ 13, ವರ್ತೂರು 13, ಹೊರಮಾವು 12, ನ್ಯೂತಿಪ್ಪಸಂದ್ರ 11, ಕೋರಮಂಗಲ 10, ಹೊಯ್ಸಳ ನಗರ ವಾರ್ಡ್‌ನಲ್ಲಿ 9 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

click me!