ರಾಜ್ಯದಲ್ಲಿ ನೈಟ್​ ಕರ್ಫ್ಯೂ ಕ್ಯಾನ್ಸಲ್: ಸಿಎಂ ಮಹತ್ವದ ಘೋಷಣೆ

By Suvarna NewsFirst Published Dec 24, 2020, 5:39 PM IST
Highlights

ಹೊಸ ಕೊರೋನಾ ವೈರಸ್ ತಳಿ ಭೀತಿ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಘೋಷಣೆ ಮಾಡಲಾಗಿದ್ದ ನೈಟ್‌ ಕರ್ಫ್ಯೂ ಅನ್ನು ಸರ್ಕಾರ ವಾಪಸ್ ಪಡೆದುಕೊಂಡಿದೆ.
 

ಬೆಂಗಳೂರು, (ಡಿ.24): ಬ್ರಿಟನ್​ನಲ್ಲಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಘೋಷಣೆ ಮಾಡಲಾಗಿದ್ದ ನೈಟ್ ಕರ್ಪ್ಯೂ ಆದೇಶವನ್ನು ಸರ್ಕಾರ ವಾಪಾಸ್ ಪಡೆದಿದೆ.

"

ಈ ಬಗ್ಗೆ ಇಂದು (ಗುರುವಾರ) ಖುದ್ದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ಖಚಿತಪಡಿಸಿದ್ದಾರೆ.

ಮೊದಲು ಡಿ.23ರಿಂದ ಜಾರಿ ಎಂದಿತ್ತು. ಬಳಿಕ ಡಿ.24ರಿಂದ ಜನವರಿ 2ರ ವರೆಗೆ ನೈಟ್ ಕರ್ಫ್ಯೂ ಎಂದು ಸರ್ಕಾರ ಘೋಷಿಸಿತ್ತು. ಇದೀಗ ಇಂದು (ಗುರುವಾರ) ಮತ್ತೆ ರಾಜ್ಯ ಸರ್ಕಾರ, ನೈಟ್​ ಕರ್ಫ್ಯೂ ಇರಲ್ಲ ಎಂದು ಸ್ಪಷ್ಟಪಡಿಸಿದೆ.

ಕಾಟಾಚಾರಕ್ಕೆ ನೈಟ್‌ ಕರ್ಫ್ಯೂ: ಆತುರದ ನಿರ್ಧಾರದಿಂದ ಸರ್ಕಾರದ ಯಡವಟ್ಟು..?

ಕೊರೋನಾ ಸೋಂಕಿನ ಭೀತಿಯ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ನೈಟ್ ಕರ್ಪ್ಯೂ ಜಾರಿಗೆ ಸಿದ್ಧತೆ ನಡೆಸಿತ್ತು. ಇಂತಹ ನೈಟ್ ಕರ್ಪ್ಯೂಗೆ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನೈಟ್ ಕರ್ಪ್ಯೂ ಆದೇಶ ವಾಪಸ್ ಪಡೆದಿದ್ಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿವೆ.

ಸಿಎಂ ಮಾಧ್ಯಮ ಪ್ರಕಟಣೆ ಇಂತಿದೆ
ಬ್ರಿಟನ್ ಹಾಗೂ ಇತರ ದೇಶಗಳಲ್ಲಿ ಪತ್ತೆಯಾದ ರೂಪಾಂತರ ಹೊಂದಿದ ಕೋವಿಡ್ ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ತಜ್ಞರ ಸಲಹೆಯ ಮೇರೆಗೆ ರಾತ್ರಿ ಕರ್ಫ್ಯೂವನ್ನು ಜಾರಿಗೆ ತರಲು ತೀರ್ಮಾನಿಸಲಾಗಿತ್ತು. ಸರ್ಕಾರದ ಈ ತೀರ್ಮಾನದ ಕುರಿತಾಗಿ ಸಾರ್ವಜನಿಕ ವಲಯದಲ್ಲಿ ರಾತ್ರಿ ಕಫ್ರ್ಯೂವಿನ ಅಗತ್ಯವಿಲ್ಲವೆಂಬಂತಹ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಮರು ಪರಿಶೀಲಿಸಿ, ಸಂಪುಟ ಸಹೋದ್ಯೋಗಿಗಳ ಹಾಗೂ ಹಿರಿಯ ಅಧಿಕಾರಿಗಳ ಅಭಿಪ್ರಾಯದ ಮೇರೆಗೆ ರಾತ್ರಿ ಕಫ್ರ್ಯೂವನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.

ಸಾರ್ವಜನಿಕರು ಸ್ವಯಂ ನಿರ್ಭಂಧ ವಿಧಿಸಿಕೊಂಡು, ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು, ಅನಗತ್ಯವಾಗಿ ಸಂಚರಿಸದಂತೆ ಹಾಗೂ ಸರ್ಕಾರ ವಿಧಿಸಿದ ಕೋವಿಡ್ ನಿಯಂತ್ರಣ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಮೂಲಕ ಈ ವೈರಾಣುವಿನ ಹರಡುವಿಕೆ ತಡೆಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿದ್ದಾರೆ.

click me!