
ಬೆಂಗಳೂರು(ಡಿ.24): ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ವಿಶ್ವದರ್ಜೆಯ ಬ್ರಾಂಡಿಕ್ಸ್ ಇಂಡಿಯಾ ಅಪೇರಲ್ ಸಿಟಿ (ಬಿಐಎಸಿ) ಜವಳಿ ಉತ್ಪನ್ನಗಳ ಕೈಗಾರಿಕಾ ಪ್ರದೇಶದ ರೀತಿ ಉತ್ತರ ಕರ್ನಾಟಕದಲ್ಲೂ ಹೊಸ ಜವಳಿ ಕೈಗಾರಿಕಾ ಕೇಂದ್ರ ಸ್ಥಾಪಿಸಲು ಚಿಂತನೆ ನಡೆಸಿದ್ದೇವೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.
ಜವಳಿ ಕೈಗಾರಿಕಾ ಕೇಂದ್ರ ಸ್ಥಾಪನೆ ಸಂಬಂಧ ಡಿ.29ರಂದು ತಜ್ಞ ಅಧಿಕಾರಿಗಳ ತಂಡದೊಂದಿಗೆ ವಿಶಾಖಪಟ್ಟಣಕ್ಕೆ ತೆರಳಲಿದ್ದೇನೆ. ಅಲ್ಲಿನ ಜವಳಿ ಉತ್ಪನ್ನಗಳ ಕೈಗಾರಿಕಾ ಪ್ರದೇಶವನ್ನು ವೀಕ್ಷಿಸಿ, ನಮ್ಮ ರಾಜ್ಯದಲ್ಲೂ ಆ ರೀತಿಯ ಯೋಜನೆ ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ. ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಕೈಮಗ್ಗ ಹಾಗೂ ಜವಳಿ ಕ್ಷೇತ್ರವನ್ನು ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿಗೊಳಿಸಿ, ಯುವಜನತೆಗಾಗಿ ಉದ್ಯೋಗ ಸೃಷ್ಟಿಸಲಾಗುವುದು ಎಂದಿದ್ದಾರೆ.
ಬೆಳಗಾವಿಯಲ್ಲಿ ಸಚಿವ ಶ್ರೀಮಂತ್ ಪಾಟೀಲ್ ಮರಾಠಿ ಭಾಷಣ!
ನಗರದ ಚಂದಾಪುರದಲ್ಲಿರುವ ಮಧುರಾ ಟೆಕ್ಟ್ಟೈಲ್ಸ್ಗೆ ಬುಧವಾರ ಭೇಟಿ ನೀಡಿದ ಅವರು, ಅಲ್ಲಿನ ಕಾರ್ಯವೈಖರಿ ವೀಕ್ಷಿಸುವ ಜತೆಗೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದರು.
ಮುಂದಿನ ದಿನಗಳಲ್ಲಿ ಗಾರ್ಮೆಂಟ್ಸ್ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಮೂಲಕ ಅವರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುವುದು. ಇದರೊಂದಿಗೆ ಕೌಶಲ ಅಭಿವೃದ್ಧಿ, ನೀತಿ-ನಿಯಮಗಳ ಬದಲಾವಣೆ, ಮೂಲ ಸೌಕರ್ಯ, ಉದ್ಯಮ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೃಹತ್ ಮಟ್ಟದ ಜವಳಿ ಕಾರ್ಖಾನೆಯೊಂದಿಗೆ, ಸ್ಥಳೀಯ ಮಟ್ಟದ ಕಾರ್ಖಾನೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಮೂಲಕ ರಾಜ್ಯದಲ್ಲಿರುವ ಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಿ, ಅವರ ಏಳಿಗೆಗೆ ಶ್ರಮಿಸಲಾಗುವುದು. ಸ್ಥಳೀಯ ಮಟ್ಟದ ಜವಳಿ ಕಾರ್ಖಾನೆಗಳು ಅಭಿವೃದ್ಧಿಯಾದಾಗ ಮಾತ್ರ ಈ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನನ್ನ ಶ್ರಮ ಅವಿರತ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ