ಆಗಲೇ ಆತ್ಮನಿರ್ಭರ ಭಾರತದ ಕನಸು ಕಂಡಿದ್ದ ವೀರ ಸನ್ಯಾಸಿ

By Kannadaprabha NewsFirst Published Jan 12, 2021, 9:47 AM IST
Highlights

ತನ್ನ ದೇಶ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಿಸಮಾನ ಗೌರವ ಹೊಂದಿ, ತನ್ನ ಆಂತರಿಕ ತತ್ವ, ಆದರ್ಶ, ಆಧ್ಯಾತ್ಮಿಕ ಶಕ್ತಿಯಿಂದ ಇತರ ದೇಶಗಳನ್ನು ಮುನ್ನಡೆಸಬೇಕು ಎಂದು ಅವರು ಬಯಸಿದ್ದರು. ಭಾರತ ವಿಶ್ವಗುರುವಾಗಿ, ಆಚಾರಶೀಲ ರಾಷ್ಟ್ರವಾಗಿ ಜಗತ್ತಿನ ಮುಂದೆ ನಿಲ್ಲಬೇಕು ಎಂಬ ಮಹದಾಸೆ ಹೊಂದಿದವರಾಗಿದ್ದರು.

ಸನಾತನ ಧರ್ಮದ ನವೋನ್ಯತೆಯನ್ನು ಜಗದುದ್ದಗಲಕ್ಕೆ ಪಸರಿಸಿದ, ಭಾರತ ಉಪಖಂಡದ ಯುವಚೈತನ್ಯ, ಆಧ್ಯಾತ್ಮಿಕ ಶಕ್ತಿಯನ್ನು ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮ ದಿನ ಇಂದು. ಈ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ. ಭರತಖಂಡದ ಪುಣ್ಯನೆಲದಲ್ಲಿ ಸ್ವಾಮಿ ವಿವೇಕಾನಂದರೆಂಬ ಸಂತ ಜನಿಸಿ ಇಂದಿಗೆ 157 ವರ್ಷಗಳು ಸಂದಿವೆ.

ಚಿಕಾಗೋ ವಿಶ್ವಧರ್ಮ ಸಮ್ಮೇಳನ

ವಿವೇಕಾನಂದರ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದ ಭಾಷಣ ಭಾರತದ ಪುನರುಜ್ಜೀವನಕ್ಕೇ ಕಾರಣವಾಯಿತು. ಮುಂದೆ 1902ರಲ್ಲಿ ಅವರು ಕಾಲವಾಗುವವರೆಗೂ ಈ ದೇಶದ ಜನರ ಉನ್ನತಿಗಾಗಿ ಶ್ರಮಿಸಿದರು. ಅಪಾರ ರಾಷ್ಟ್ರಪ್ರೇಮ, ವಿಶ್ವ ಭ್ರಾತೃತ್ವ, ಪ್ರಾಯೋಗಿಕ ವೇದಾಂತ ಅವರಲ್ಲಿ ಅಡಕವಾಗಿತ್ತು. ತನ್ನ ದೇಶ ಸ್ವತಂತ್ರವಾಗಬೇಕೆಂದು ಬಯಸಿದ ಮಹಾತ್ಮ ಗಾಂಧಿ, ಸುಭಾಶ್ಚಂದ್ರ ಬೋಸ್‌, ಅರವಿಂದ ಘೋಷ್‌ ಮೊದಲಾದ ನಾಯಕರ ಮೇಲೆ ಪ್ರಭಾವ ಬೀರಿದವರು ಸ್ವಾಮಿ ವಿವೇಕಾನಂದರು. ಅವರ ದೇಶಪ್ರೇಮ, ಸ್ವಾತಂತ್ರ್ಯ ಗಳಿಕೆಯ ಕೇಂದ್ರಿತವಾಗಿತ್ತೇ ಹೊರತು ಅದು ಆಕ್ರಮಣಶೀಲ, ಪ್ರತಿಗಾಮಿ ಚಿಂತನೆಯಾಗಿರಲಿಲ್ಲ. ತನ್ನ ದೇಶ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಸರಿಸಮಾನ ಗೌರವ ಹೊಂದಿ, ತನ್ನ ಆಂತರಿಕ ತತ್ವ, ಆದರ್ಶ, ಆಧ್ಯಾತ್ಮಿಕ ಶಕ್ತಿಯಿಂದ ಇತರ ದೇಶಗಳನ್ನು ಮುನ್ನಡೆಸಬೇಕು ಎಂದು ಅವರು ಬಯಸಿದ್ದರು. ನನ್ನ ದೇಶ ಯಾವತ್ತೂ ಯಾರ ಮುಂದೆಯೂ ತಲೆ ಬಾಗಿ ನಿಲ್ಲಬಾರದು, ಬದಲಿಗೆ ವಿಶ್ವಗುರುವಾಗಬೇಕು ಎಂಬ ಮಹದಾಸೆ ಹೊಂದಿದ್ದರು.

ಆತ್ಮನಿರ್ಭರ ಭಾರತ ಕಲ್ಪನೆ

ಆತ್ಮನಿರ್ಭರ ಭಾರತದ ಕುರಿತಾಗಿ ವಿವೇಕಾನಂದರು ಆಗಲೇ ಹೇಳಿದ್ದರು. ನೀವು ಯಾವ ವಿದೇಶದ ಸಹಾಯವನ್ನೂ ಅವಲಂಬಿಸಕೂಡದು. ವ್ಯಕ್ತಿಗಳಂತೆ ರಾಷ್ಟ್ರಗಳೂ ನಮಗೆ ನಾವೇ ನೆರವಾಗಬೇಕು. ಇದೇ ನಿಜವಾದ ದೇಶಪ್ರೇಮ ಎಂದಿದ್ದರು. ವಿವೇಕಾನಂತರ ಮಾತಿಗೆ ಈಗ ಕಾಲ ಕೂಡಿ ಬಂದಿದೆ.

ಹಾಗೆಯೇ ಯುವಜನತೆಯು ಮೊಟ್ಟಮೊದಲಿಗೆ ತಮ್ಮನ್ನು ಕಾಡುತ್ತಿರುವ ನಿಷೇಧಾತ್ಮಕ ಹಾಗೂ ನಕಾರಾತ್ಮಕ ಚಿಂತನೆ ಮತ್ತು ಯೋಚನೆಗಳಿಂದ ಹೊರಬರಬೇಕು. ಸ್ವಾವಲಂಬನೆಯ ಕನಸುಗಳನ್ನು ಕಾಣಬೇಕು. ಎಲ್ಲ ಕಳೆದು ಹೋದರೂ ಇನ್ನೂ ನಾನು ಇದ್ದೇನೆ ಎನ್ನುವ ಅದಮ್ಯ ಉತ್ಸಾಹ, ನಂಬಿಕೆಯೇ ಜೀವನ, ಯಾವುದೇ ಕೆಲಸ ಅಥವಾ ಆಲೋಚನೆ ಮಾಡುವಾಗ ಇದನ್ನು ಸಾಧಿಸಿಯೇ ತೀರುತ್ತೇನೆಂಬ ದೃಢವಿಶ್ವಾಸದಿಂದ ಮುನ್ನುಗ್ಗಿದರೆ ಖಂಡಿತವಾಗಿಯೂ ಯಶಸ್ಸು ಕಾಣಲು ಸಾಧ್ಯ ಎಂಬ ಸಂದೇಶವನ್ನು ಸ್ವಾಮಿ ವಿವೇಕಾನಂದರು ಯುವಕರಿಗೆ ಯಾವಾಗಲೂ ನೀಡುತ್ತಿದ್ದರು.

ಯಶಸ್ಸಿಗೆ ದಾರಿ ಏನು?

ಯಶಸ್ಸಿನ ದಾರಿಯೆಡೆಗೆ ಯುವಜನರು ಹೇಗೆ ಹೋಗಬೇಕೆಂದು ಸಹ ವಿವೇಕಾನಂದರು ಹೇಳಿದ್ದಾರೆ. ‘ಸಹೋದರರೇ, ಒಂದು ಭಾವನೆಯನ್ನು ತೆಗೆದುಕೊಳ್ಳಿ, ಅದನ್ನು ನಿಮ್ಮ ಜೀವನದಲ್ಲಿ ಅಭ್ಯಾಸ ಮಾಡಿ. ಅದನ್ನೇ ಆಲೋಚನೆ ಮಾಡಿ, ಅದನ್ನೇ ಕನಸು ಕಾಣಿ. ಆ ಒಂದು ಭಾವನೆಗಾಗಿ ನಿಮ್ಮ ಬಾಳನ್ನೆಲ್ಲ ಸವೆಸಿ. ನಿಮ್ಮ ದೇಹದ ಪ್ರತಿಯೊಂದು ಭಾಗವೂ ಈ ಭಾವನೆಯಿಂದ ತುಂಬಿ ತುಳುಕಲಿ. ಉಳಿದ ಆಲೋಚನೆಗಳನ್ನೆಲ್ಲ ಅವುಗಳ ಪಾಲಿಗೆ ಬಿಡಿ. ಜಯ ಪಡೆಯುವುದಕ್ಕೆ ಇದೊಂದೇ ದಾರಿ’ ಈ ನುಡಿಗಳನ್ನು ಅರ್ಥಮಾಡಿಕೊಂಡು ಅಕ್ಷರಶಃ ಪಾಲಿಸುವಂತಾದರೆ ನಮ್ಮ ಯಶಸ್ಸಿಗಾಗಿ ಇತರರೆಡೆಗೆ ಎಡತಾಕುವ ಅವಶ್ಯಕತೆಯೇ ಇರುವುವುದಿಲ್ಲ.

2023ರ ಚುನಾವಣೆ ನನ್ನ ಕೊನೇ ಹೋರಾಟ: ಕುಮಾರಸ್ವಾಮಿ

ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ಯುವಕರನ್ನು ಹೊಂದಿದ ಏಕ ಮಾತ್ರ ದೇಶ ಭಾರತ. ಯುವಕರು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಲ್ಲ ಮಹಾ ಸಾಧಕರಾಗಬಹುದು. ಯುವಕರು ಹೆಚ್ಚು ಪ್ರಜ್ಞಾವಂತರಾಗಿ ದೇಶದ ಉಜ್ವಲ ಭವಿಷ್ಯಕ್ಕೆ ದೃಢ ಸಂಕಲ್ಪ ಮಾಡಬೇಕಿದೆ. ಬನ್ನಿ ನಾವೆಲ್ಲ ಒಂದಾಗಿ ಸ್ವಾಮಿ ವಿವೇಕಾನಂದರ ಆಶಯದಂತೆ ವಿಶ್ವಗುರು ಭಾರತವನ್ನು ನಿರ್ಮಾಣ ಮಾಡೋಣ. ಅವರ ಚಿಂತನೆಯ ಬೆಳಕಿನಲ್ಲಿ ಹೊಸಭಾರತವನ್ನು ರೂಪಿಸೋಣ. ಆಗಷ್ಟೇ ಸ್ವಾಮಿ ವಿವೇಕಾನಂದರ ಜನ್ಮದಿನಕ್ಕೆ ಅರ್ಥ ಬರುವುದು.

click me!