ನಮ್ಮ RCB ಗೆ KMF ಬ್ರಾಂಡ್ ಅಂಬಾಸಿಡರ್, ನಂದಿನಿ ‌ಬ್ರ್ಯಾಂಡ್ ವಿಶ್ವದಾದ್ಯಂತ ಬೆಳೆಯಲು IPLಗೆ ಪ್ರಾಯೋಜಕತ್ವ

Published : Mar 24, 2026, 05:20 PM IST
Nandini Becomes Official Dairy Partner of RCB

ಸಾರಾಂಶ

ಕರ್ನಾಟಕದ ಹೆಮ್ಮೆಯ ನಂದಿನಿ ಬ್ರ್ಯಾಂಡ್, ಐಪಿಎಲ್ ತಂಡ ಆರ್‌ಸಿಬಿಯ ಅಧಿಕೃತ ಡೈರಿ ಪಾಲುದಾರನಾಗಿದೆ. ಈ ಸಹಭಾಗಿತ್ವದ ಮೂಲಕ ದೇಶಾದ್ಯಂತ ಮತ್ತು ಜಾಗತಿಕವಾಗಿ ಬ್ರ್ಯಾಂಡ್ ವಿಸ್ತರಿಸುವ ಗುರಿ ಹೊಂದಿದ್ದು, ವಿರಾಟ್ ಕೊಹ್ಲಿಯಂತಹ ಆಟಗಾರರ ಚಿತ್ರಗಳನ್ನು ಉತ್ಪನ್ನಗಳ ಮೇಲೆ ಬಳಸಲಿದೆ. ಇದೇ ವೇಳೆ, ಸಿಲಿಂಡರ್ ಅಭಾವದಂತಹ ಸವಾಲುಗಳು ಮತ್ತು ಟಿಟಿಡಿ ತುಪ್ಪ ಪೂರೈಕೆಯಂತಹ ಅವಕಾಶಗಳನ್ನೂ ಕೆಎಂಎಫ್ ಎದುರಿಸುತ್ತಿದೆ.

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕೆಎಂಎಫ್ (ಕರ್ನಾಟಕ ಮಿಲ್ಕ್ ಫೆಡರೇಷನ್) ನಂದಿನಿ ಬ್ರ್ಯಾಂಡ್ ಇದೀಗ ಐಪಿಎಲ್‌ನ ಜನಪ್ರಿಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದೊಂದಿಗೆ ಕೈಜೋಡಿಸಿದ್ದು, ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿಗೆ ಅಧಿಕೃತ ಡೈರಿ ಪಾರ್ಟ್ನರ್ ಆಗಿ ಕಾಣಿಸಿಕೊಳ್ಳಲಿದೆ. ಈ ಒಪ್ಪಂದದ ಮೂಲಕ ನಂದಿನಿ ಬ್ರ್ಯಾಂಡ್ ತನ್ನ ವ್ಯಾಪ್ತಿಯನ್ನು ದೇಶದಾಚೆಗೆ ವಿಸ್ತರಿಸುವ ಮಹತ್ವಾಕಾಂಕ್ಷೆಯ ಹೆಜ್ಜೆ ಇಟ್ಟಿದೆ.

ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಈ ಕುರಿತು ಮಾತನಾಡಿ, ನಂದಿನಿ ಬ್ರ್ಯಾಂಡ್ ಈಗಾಗಲೇ ರಾಜ್ಯದ ಹೊರಗೂ ಉತ್ತಮ ಹೆಸರನ್ನು ಗಳಿಸಿದ್ದು, ಇದೀಗ ಐಪಿಎಲ್‌ ನಂತಹ ಜಾಗತಿಕ ಮಟ್ಟದ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ದೇಶಾದ್ಯಂತ ಹಾಗೂ ವಿಶ್ವದ ಮಟ್ಟದಲ್ಲೂ ತನ್ನ ಗುರುತನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದ್ದಾರೆ. ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಮತ್ತು ಆರೋಗ್ಯಕರ ಹಾಲು ಉತ್ಪನ್ನಗಳನ್ನು ಬಳಸುವ ಅಭ್ಯಾಸ ಬೆಳೆಸಬೇಕು ಎಂಬ ಸಂದೇಶ ನೀಡುವ ನಿಟ್ಟಿನಲ್ಲಿ ಈ ಸಹಭಾಗಿತ್ವ ಕೈಗೊಳ್ಳಲಾಗಿದೆ ಎಂದರು.

ಕೊಹ್ಲಿ, ಪಟೀದಾರ್, ಪಡಿಕಲ್ ಭಾವಚಿತ್ರ ಇರಲಿದೆ

ಈ ಒಪ್ಪಂದದ ಭಾಗವಾಗಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಟೀದಾರ್ ಮತ್ತು ದೇವದತ್ ಪಡಿಕಲ್ ಅವರ ಭಾವಚಿತ್ರಗಳನ್ನು ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ಪ್ಯಾಕೇಜಿಂಗ್‌ಗಳಲ್ಲಿ ಬಳಸಲಾಗುತ್ತದೆ. ಆದರೆ, ತಂಡದ ಜೆರ್ಸಿ ಅಥವಾ ಕ್ಯಾಪ್‌ಗಳ ಮೇಲೆ ಕೆಎಂಎಫ್ ಲೋಗೋ ಪ್ರದರ್ಶನ ಇರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಐಪಿಎಲ್ ಪಂದ್ಯಗಳು ನಡೆಯುವ ಎಲ್ಲಾ ಮೈದಾನಗಳಲ್ಲಿ, ಕೇವಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವಷ್ಟೇ ಅಲ್ಲದೆ, ಆರ್‌ಸಿಬಿ ಆಡಲಿರುವ ಇತರೆ ಸ್ಥಳಗಳಲ್ಲಿಯೂ ನಂದಿನಿ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಸುಮಾರು ₹4 ಕೋಟಿ 80 ಲಕ್ಷ ಮೊತ್ತದ ಟೆಂಡರ್ ಮೂಲಕ ಈ ಪ್ರಾಯೋಜಕತ್ವವನ್ನು ಕೆಎಂಎಫ್ ಪಡೆದಿದ್ದು, ಈ ಒಪ್ಪಂದವು ಒಂದು ವರ್ಷದ ಅವಧಿಗೆ ಮಾನ್ಯವಾಗಿರಲಿದೆ. ಮಾರ್ಚ್ 28ರಿಂದ ಆರಂಭವಾಗುವ ಐಪಿಎಲ್ ಸೀಸನ್‌ನೊಂದಿಗೆ ಈ ಸಹಭಾಗಿತ್ವ ಜಾರಿಗೆ ಬರಲಿದೆ. ಈ ಮೂಲಕ ಉತ್ತರ ಭಾರತ ಸೇರಿದಂತೆ ಇತರ ರಾಜ್ಯಗಳಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಹೆಚ್ಚುವ ನಿರೀಕ್ಷೆಯಿದೆ. ಅಮೂಲ್‌ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳಿಗೆ ಸ್ಪರ್ಧೆ ನೀಡುವ ಉದ್ದೇಶವೂ ಕೆಎಂಎಫ್ ಹೊಂದಿದೆ.

ಸಿಲಿಂಡರ್ ಅಭಾವ, ಹಾಲು ಉತ್ಪಾದನೆ ಮೇಲೆ ಹೊಡೆತ!

ಇದೇ ವೇಳೆ, ಸಿಲಿಂಡರ್ ಅಭಾವವು ಹಾಲು ಉತ್ಪಾದನೆ ಮತ್ತು ಮಾರಾಟದ ಮೇಲೆ ಪರಿಣಾಮ ಬೀರಿರುವುದನ್ನೂ ಶಿವಸ್ವಾಮಿ ತಿಳಿಸಿದ್ದಾರೆ. ಸದ್ಯ ಹಾಲಿನ ಮಾರಾಟದಲ್ಲಿ ಸುಮಾರು 2 ಶೇಕಡಾ ಇಳಿಕೆ ಕಂಡುಬಂದಿದ್ದು, ಪ್ರತಿದಿನ 5 ರಿಂದ 6 ಲಕ್ಷ ಲೀಟರ್ ಮಟ್ಟಿಗೆ ಕುಸಿತವಾಗಿದೆ. ವಿಶೇಷವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಇದರ ಪರಿಣಾಮ ಹೆಚ್ಚು ಗೋಚರಿಸುತ್ತಿದೆ.

ನಂದಿನಿ ಹಾಲು ಉತ್ಪನ್ನಗಳ ತಯಾರಿಕೆಯಲ್ಲಿ ಸಿಲಿಂಡರ್ ಬಳಕೆ ಹೆಚ್ಚಿರುವುದರಿಂದ, ದಿನಕ್ಕೆ ಸುಮಾರು 15 ಸಿಲಿಂಡರ್ ಅಗತ್ಯವಿದ್ದರೂ, ಪ್ರಸ್ತುತ ಕೇವಲ 7 ರಿಂದ 8 ಸಿಲಿಂಡರ್‌ಗಳಷ್ಟೇ ಪೂರೈಕೆಯಾಗುತ್ತಿದೆ. ಈ ಪರಿಸ್ಥಿತಿ ಮುಂದುವರೆದರೆ ಉತ್ಪಾದನೆ ಕಡಿಮೆ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂದು ಎಚ್ಚರಿಸಿದ್ದಾರೆ.

TTD ಕ್ಕೆ ತುಪ್ಪ ಪೂರೈಕೆ ಟೆಂಡರ್ ಅಂತಿಮ ನಿರ್ಧಾರ ಬಾಕಿ

ಇನ್ನೊಂದೆಡೆ, ತಿರುಮಲ ತಿರುಪತಿ ದೇವಸ್ಥಾನ (TTD)ಕ್ಕೆ ತುಪ್ಪ ಪೂರೈಕೆ ಮಾಡುವ ಸಂಬಂಧ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಅಂತಿಮ ನಿರ್ಧಾರ ಇನ್ನಷ್ಟೇ ಬಾಕಿಯಿದೆ. ಕೆಎಂಎಫ್ ಬಳಿ ಸಾಕಷ್ಟು ಉತ್ಪಾದನಾ ಸಾಮರ್ಥ್ಯ ಇರುವುದರಿಂದ, ಟಿಟಿಡಿಗೆ ಬೇಕಾದಷ್ಟು ತುಪ್ಪವನ್ನು ಪೂರೈಸಲು ನಾವು ಸಿದ್ಧವಿದ್ದೇವೆ ಎಂದು ಶಿವಸ್ವಾಮಿ ತಿಳಿಸಿದ್ದಾರೆ.

ಮಾರುಕಟ್ಟೆ ದೃಷ್ಟಿಯಿಂದ ನೋಡಿದರೆ, ರಂಜಾನ್ ಸಂದರ್ಭದಲ್ಲಿ ಹಾಲಿನ ಬೇಡಿಕೆ ಹೆಚ್ಚಾಗಿದ್ದು, ಒಂದೇ ದಿನದಲ್ಲಿ 51 ಲಕ್ಷ 26 ಸಾವಿರ ಲೀಟರ್ ಹಾಲು ಮಾರಾಟವಾಗಿದೆ. ಸಾಮಾನ್ಯ ದಿನಗಳಲ್ಲಿ ಸುಮಾರು 46 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಅಲ್ಲದೇ, ದುಬೈ ಮತ್ತು ಸೌದಿ ಅರೇಬಿಯಾ ಸೇರಿದಂತೆ ವಿದೇಶಗಳಿಗೆ ನಂದಿನಿ ಉತ್ಪನ್ನಗಳ ರಫ್ತು ಕೂಡ ನಡೆಯುತ್ತಿದ್ದು, ಇತ್ತೀಚೆಗೆ ಕಳುಹಿಸಿದ ತುಪ್ಪ ಕಳೆದ ವಾರ ಗುರಿ ತಲುಪಿದೆ.

ಒಟ್ಟಾರೆ, ಆರ್‌ಸಿಬಿಯೊಂದಿಗೆ ಕೈಜೋಡಿಸುವ ಮೂಲಕ ನಂದಿನಿ ಬ್ರ್ಯಾಂಡ್ ತನ್ನ ವ್ಯಾಪಾರವನ್ನು ವಿಸ್ತರಿಸುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದು, ಸವಾಲುಗಳ ನಡುವೆಯೂ ಹೊಸ ಅವಕಾಶಗಳನ್ನು ಅನ್ವೇಷಿಸುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರವಾಡ: ಮಾಜಿ ಶಾಸಕರ ಪುತ್ರನನ್ನು ಕಾರಿನಲ್ಲೇ ಸುಟ್ಟು ಹಾಕಿದ ದುಷ್ಕರ್ಮಿಗಳು!
ಶಾಲೆಗಳಲ್ಲಿ ಇನ್ನುಮುಂದೆ ‘ವಾಟ್ಸಾಪ್ ಹೋಂವರ್ಕ್’ ಬಂದ್! ಶಿಕ್ಷಣ ಇಲಾಖೆಗೆ ‘ಮಕ್ಕಳ ಹಕ್ಕುಗಳ ಆಯೋಗ’ದ ಖಡಕ್ ಸೂಚನೆ