ವೀರಮರಣ ಹೊಂದಿದ ಅರ್ಜುನ ಆನೆ ಸಮಾಧಿಗೆ ಪೂಜೆ ಸಲ್ಲಿಸಿದ ಮೈಸೂರು ಒಡೆಯರ್ ದಂಪತಿ: ಕೊನೆಗೂ ಸಿಕ್ತು ರಾಜಮರ್ಯಾದೆ !

By Sathish Kumar KHFirst Published Dec 7, 2023, 7:40 PM IST
Highlights

ಅರ್ಜುನ ಆನೆಯ ಸಮಾಧಿಗೆ ತೆರಳಿ ಪೂಜೆ ನೆರವೇರಿಸಿದ ಮೈಸೂರು ರಾಜ ಮನೆತನದ ಯದುವೀರ ಕೃಷ್ಣದತ್ತ ಒಡೆಯರ್ ದಂಪತಿ.

ಹಾಸನ (ಡಿ.07): ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಕಾಡಾನೆ ಕಾರ್ಯಾಚರಣೆಗೆ ತೆರಳಿದ್ದ 8 ಬಾರಿ ಮೈಸೂರು ದಸರಾ ಅಂಬಾರಿಯನ್ನು ಹೊತ್ತು ನಿವೃತ್ತಿ ಹೊಂದಿದ್ದ ಅರ್ಜುನ ಆನೆಯು ಕಾದಾಟದಲ್ಲಿ ಸಾವನ್ನಪ್ಪಿದ್ದು, ಹಾಸನದ ಕಾಡಿನಲ್ಲಿ ಸಮಾಧಿ ಮಾಡಲಾಗಿದೆ. ಹುತಾತ್ಮ ಅರ್ಜುನನ ಸಮಾಧಿಗೆ ಮೈಸೂರಿನ ರಾಜಮನೆತನದ ಯದುವೀರ್ ಒಡೆಯರ್ ದಂಪತಿ ಪೂಜೆ ಸಲ್ಲಿಸಿದರು.

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ 8 ಬಾರಿ ಅಂಬಾರಿಯನ್ನು ಹೊತ್ತಿದ್ದ ಅರ್ಜುನ ಆನೆ ಜನಮನ್ನಣೆ ಗಳಿಸಿತ್ತು. ಆದರೆ, ಸೋಮವಾರ ಕಾಡಾನೆ ಕಾರ್ಯಾಚರಣೆ ವೇಳೆ ಮದವೇರಿದ ಒಂಟಿ ಸಲಗದೊಂದಿಗೆ ಕಾದಾಟದ ಸಮಯದಲ್ಲಿ ಹೊಟ್ಟೆಗೆ ಪೆಟ್ಟು ಬಿದ್ದು ವೀರಮರಣ ಹೊಂದಿತ್ತು. ಆದರೆ, ಆನೆಯ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆ ವೇಳೆ ಮೈಸೂರು ರಾಜಮನೆತನದ ಸದಸ್ಯರು ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅರಮನೆಯಿಂದ ಪುರೋಹಿತರನ್ನು ಕಳಿಸಿ ಅಂತ್ಯಕ್ರಿಯೆಯ ಅಂತಿಮ ವಿಧಿ ವಿಧಾನವನ್ನು ನೆರವೇರಿಸಲಾಗಿತ್ತು.

ಅರ್ಜುನನ ಕೊಂದ ಕಾಡಾನೆಯ ಸೆರೆ ಹಿಡಿದು ಜನರ ಮುಂದೆ ನಿಲ್ಲಿಸ್ತೇವೆ: ಶಪಥ ಮಾಡಿದ ಮಾವುತ

ಹಾಸನ ಜಿಲ್ಲೆ ಸಕಲೇಶಪುರದ ದಬ್ಬಳ್ಳಿ ವ್ಯಾಪ್ತಿಯ ಅರಣ್ಯದಲ್ಲಿರುವ ಅರ್ಜುನ ಸಮಾಧಿಗೆ 3ನೇ ದಿನಕ್ಕೆ ಆಗಮಿಸಿದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಅವರ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಅವರಿ ದಂಪತಿ ಸಮೇತರಾಗಿ ಅರ್ಜುನ ಆನೆಯ ಸಮಾಧಿಗೆ ಪೂಜೆ ನೆರವೇರಿಸಿದರು. ಈ ಮೂಲಕ ಅಂಬಾರಿ ಹೊತ್ತು ಮೈಸೂರು ರಾಜಮನೆತನದ ಹಾಗೂ ಕನ್ನಡ ನಾಡಿನ ಕೀರ್ತಿಯನ್ನು ಜಗತ್ತಿಗೆ ಸಾರಲು ನೆರವಾಗಿದ್ದ ಆನೆಗೆ ರಾಜಮನೆತನದಿಂದಲೂ ಈಗ ಗೌರ ಸಿಕ್ಕಂತಾಗಿದೆ. ರಾಜ ದಂಪತಿಗೆ ಹಾಸನ ಡಿಎಫ್ ಒ ಮೋಹನ್ ಸಾಥ್ ನೀಡಿದ್ದರು.

ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಮುಖ್ಯಮಂತ್ರಿ ಚಂದ್ರು ಆರೋಪ

ರಾಜ ಮರ್ಯಾದೆ ಸಿಗಲಿಲ್ಲವೆಂದು ಆಕ್ರೋಶ: ಮೈಸೂರು ರಾಜ ವಂಶಸ್ಥರ ಆಚರಣೆ ಹಾಗೂ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ದಸರಾದ 750 ಕೆ.ಜಿ. ತೂಕದ ಅಂಬಾರಿ ಹೊರಲು ಅರ್ಜುನ ಆನೆ ಬೇಕಿತ್ತು. ಆದರೆ, ಅಂಬಾರಿ ಹೊತ್ತು ನಿವೃತ್ತಿ ಹೊಂದಿ ಕಾದಾಟದಲ್ಲಿ ಸಾವನ್ನಪ್ಪಿದ ಅರ್ಜುನನ್ನು ನೋಡುವುದಕ್ಕೂ ರಾಜಮನೆತನದವರು ಬರಲಿಲ್ಲ. ಅಂಬಾರಿ ಹೋರಲು ಬೇಕಾದ ಆನೆಗೆ ರಾಜಮನೆತನದಿಂದ ಕನಿಷ್ಠ ಗೌರವ ಸಿಗಲಿಲ್ಲ. ರಾಜಮನೆತನದವರು ಇಲ್ಲಿಗೆ ಆಗಮಿಸಬೇಕಿತ್ತು ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಹಾಗೂ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲಿಯೇ ರಾಜ ಮನೆತನದ ಯದುವೀರ್ ದಂಪತಿ ಆನೆಯ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದೆ ಎಂದು ಹೇಳಲಾಗುತ್ತಿದೆ.

click me!