ನಿನ್ನೀ ನಗುವಿಗೆ ಕಾರಣವೇನೇ.. ಅಂತಾ ಸೂರ್ಯಕಾಂತಿಗೆ ಮುಗಿಬಿದ್ದ ಪ್ರವಾಸಿಗರು!

By Kannadaprabha NewsFirst Published Oct 23, 2023, 8:56 AM IST
Highlights

ತಾಲೂಕಿನಲ್ಲಿ ಬರಗಾಲ ಎದುರಾಗಿರುವ ಸಮಯದಲ್ಲಿ ಮಳೆ ಇಲ್ಲದೆ ಫಸಲು ಒಣಗಿ ಅಳಿದುಳಿದ ಸೂರ್ಯಕಾಂತಿ ಹೂವಿಗೆ ಮಾರು ಹೋದ ಪ್ರವಾಸಿಗರು ಫೋಟೋಗೆ ಮುಗಿ ಬೀಳುವ ಕಾರಣ ರೈತನ ಕಿಸೆ ʼಬರʼದಲ್ಲೂ ತುಂಬುತ್ತಿದೆ.

ಗುಂಡ್ಲುಪೇಟೆ (ಅ.23): ತಾಲೂಕಿನಲ್ಲಿ ಬರಗಾಲ ಎದುರಾಗಿರುವ ಸಮಯದಲ್ಲಿ ಮಳೆ ಇಲ್ಲದೆ ಫಸಲು ಒಣಗಿ ಅಳಿದುಳಿದ ಸೂರ್ಯಕಾಂತಿ ಹೂವಿಗೆ ಮಾರು ಹೋದ ಪ್ರವಾಸಿಗರು ಫೋಟೋಗೆ ಮುಗಿ ಬೀಳುವ ಕಾರಣ ರೈತನ ಕಿಸೆ ʼಬರʼದಲ್ಲೂ ತುಂಬುತ್ತಿದೆ.

ದಸರಾ ಹಬ್ಬದ ಹಿನ್ನಲೆ ಭಾನುವಾರ ರಜೆಯ ಜೊತೆಗೆ ಸೋಮವಾರ (ಆಯುಧ ಪೂಜೆ),ಮಂಗಳವಾರ (ವಿಜಯ ದಶಮಿ) ಸಾಲು ಸಾಲು ರಜೆ ಬಂದ ಕಾರಣ ಪ್ರವಾಸಿಗರು ಮೈಸೂರು-ಊಟಿ ಹೆದ್ದಾರಿಯಲ್ಲಿ ತೆರಳುವಾಗ ತಾಲೂಕಿನ ಬೆಂಡಗಳ್ಳಿ-ಅಗತಗೌಡನಹಳ್ಳಿ ಗೇಟ್‌ ನಡುವೆ ಇರುವ ಸೂರ್ಯಕಾಂತಿ ಜಮೀನಿಗೆ ಲಗ್ಗೆ ಇಟ್ಟಿದ್ದಾರೆ.

ಬಂಟ್ವಾಳದಲ್ಲಿ ಗಮನ ಸೆಳೆಯುತ್ತಿದೆ ಮೈಸೂರು ಮೂಲದ ದಂಪತಿಯ ಬೊಂಬೆ ದಸರಾ

ಮಳೆ ಕೊರತೆಗೆ ತಾಲೂಕು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದೆ. ಮುಂಗಾರು ಬಿತ್ತನೆಯಾದ ಬಳಿಕ ಮಳೆರಾಯ ಕೈ ಕೊಟ್ಟಿರುವ ಬೆನ್ನಲ್ಲೇ ಸೂರ್ಯಕಾಂತಿ ಗಿಡಗಳು ಆಳೆತ್ತರ ಬೆಳೆದಿಲ್ಲ. ಆದ್ದರಿಂದ ಪ್ರವಾಸಿಗರು ಸೂರ್ಯಕಾಂತಿ ಹೂ ಕಂಡು ಕಾರು ನಿಲ್ಲಿಸಿ ಜಮೀನಿಗೆ ತೆರಳಬೇಕಾದರೆ ರೈತನಿಗೆ ಹಣ ಕೊಟ್ಟ ಬಳಿಕವೇ ಸೂರ್ಯಕಾಂತಿ ಹೂವಿನೊಂದಿಗೆ ಸೆಲ್ಫೀ ಹಾಗು ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶ ನೀಡುತ್ತಿದ್ದಾನೆ. ಮೈಸೂರು-ಊಟಿ ಹೆದ್ದಾರಿಯಲ್ಲಿ ಹತ್ತಾರು ಕಾರುಗಳು ನಿಂತಿರುವುದನ್ನು ಕಂಡ ಪ್ರವಾಸಿಗರು ತಮ್ಮ ಕಾರನ್ನು ನಿಲ್ಲಿಸಿ ಸೂರ್ಯಕಾಂತಿ ಹೊಲದ ತುಂಬೆಲ್ಲ ಫೋಟೋ ಕ್ಲಿಕ್ಕಿಸಿಕೊಂಡು ತೆರಳುತ್ತಿದ್ದಾರೆ.

ಮೈಸೂರು ದಸರಾ: ಜಂಬೂಸವಾರಿ ಮೆರವಣಿಗೆಯಲ್ಲಿ ಈ ಬಾರಿ 49 ಸ್ತಬ್ಧಚಿತ್ರ

ರೈತನಿಗೆ ಸೂರ್ಯಕಾಂತಿ ಬೆಳೆದ ಖರ್ಚು ಕೂಡ ಫಸಲು ಬಂದಿದ್ದರೆ ಬರುತ್ತಿರಲಿಲ್ಲವೇನೋ? ಆದರೀಗ ಪ್ರವಾಸಿಗರು ಸೂರ್ಯಕಾಂತಿ ಹೂವಿಗೆ ಮಾರು ಹೋಗಿ ದುಡ್ಡು ಕೊಟ್ಟು ಫೋಟೋ ತೆಗೆದುಕೊಳ್ಳುವುದರಿಂದ ರೈತನಿಗೆ ಸೂರ್ಯಕಾಂತಿಯಿಂದ ಡಬ್ಬಲ್‌ ಆದಾಯ ಬಂದಂತಾಗಿದೆ.ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ ಸೂರ್ಯಕಾಂತಿ ಹೂವು ಕಂಡು ಮನಸೋತು ಕಾರು ನಿಲ್ಲಿಸಿದೆ. ಆದರೆ ನಂತರ ನೂರಾರು ಮಂದಿ ಪ್ರವಾಸಿಗರು ಮುಗಿ ಬಿದ್ದರು.ರೈತನಿಗೂ ಹಣ ಸಿಗುತ್ತಿದೆ ಎಂದ. ಅಳಿದುಳಿದ ಸೂರ್ಯಕಾಂತಿ ಜಮೀನಿನಲ್ಲಿ ಬಿಟ್ಟ ಹೂವಿಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಮುಗಿಬಿದ್ದು ಹಣ ಕೊಟ್ಟು ಫೋಟೊ ತೆಗೆದುಕೊಂಡು ತೆರಳುತ್ತಿದ್ದಾರೆ.ಕಿಸೆ ತುಂಬ ದುಡ್ಡು ಬರುತ್ತಿರುವುದನ್ನು ಕಂಡ ರೈತ ಖುಷಿಯಾಗಿದ್ದಾನೆ.

click me!