
ಚಿಕ್ಕಮಗಳೂರು (ಫೆ.10): ಮಲೆನಾಡಿನ ಗಿರಿಶಿಖರಗಳ ನಡುವೆ ಇಂದು ದಿಢೀರನೆ ಕಾಣಿಸಿಕೊಂಡ ಕಿರು ವಿಮಾನವೊಂದು ಜಿಲ್ಲೆಯಾದ್ಯಂತ ಭಾರಿ ಆತಂಕ ಮತ್ತು ಕುತೂಹಲಕ್ಕೆ ಕಾರಣವಾಗಿದೆ. ಕಳಸದಿಂದ ಬಾಳೆಹೊನ್ನೂರು ವರೆಗೆ ಅತ್ಯಂತ ಕೆಳಮಟ್ಟದಲ್ಲಿ ಹಾರಾಟ ನಡೆಸಿದ ಈ ವಿಮಾನ ಮಲೆನಾಡಿಗರ ನಿದ್ದೆಗೆಡಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಎನ್.ಆರ್.ಪುರ ತಾಲೂಕಿನ ಭದ್ರಾ ನದಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಲಘು ವಿಮಾನ ಎರಡು ಬಾರಿ ಹಾರಾಟ ನಡೆಸಿದೆ. ಸಾಮಾನ್ಯವಾಗಿ ವಿಮಾನಗಳು ಎತ್ತರದಲ್ಲಿ ಹಾರುತ್ತವೆ, ಆದರೆ ಈ ಕಿರು ವಿಮಾನವು ಭೂಮಿಗೆ ತೀರಾ ಹತ್ತಿರ ಎನ್ನುವಂತೆ ಕೆಳಭಾಗದಲ್ಲೇ ಸಂಚರಿಸಿರುವುದು ಜನರ ಆತಂಕಕ್ಕೆ ಮುಖ್ಯ ಕಾರಣವಾಗಿದೆ.
ಈ ನಿಗೂಢ ವಿಮಾನ ಎಲ್ಲಿಂದ ಬಂತು? ಇದರೊಳಗೆ ಯಾರಿದ್ದರು? ಮತ್ತು ಇದರ ಉದ್ದೇಶವೇನು ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಸ್ಥಳೀಯ ಪೊಲೀಸ್ ಇಲಾಖೆಯಾಗಲಿ ಅಥವಾ ಅರಣ್ಯ ಇಲಾಖೆಯಾಗಲಿ ಯಾವುದೇ ಪೂರ್ವ ಮಾಹಿತಿ ಹೊಂದಿಲ್ಲದಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಹೆಚ್ಚಿಸಿದೆ. ಅಧಿಕಾರಿಗಳಿಗೇ ಮಾಹಿತಿ ಇಲ್ಲದೆ ಹಾರಾಟ ನಡೆಸಿರುವುದು ಹತ್ತಾರು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.
ಶಿವಮೊಗ್ಗದತ್ತ ಪಯಣ; ಶೋಕಿ ಓಡಾಟವೋ ಅಥವಾ ಸರ್ವೆಯೋ?
ಬಾಳೆಹೊನ್ನೂರಿನಲ್ಲಿ ತೀರಾ ಕೆಳಭಾಗದಲ್ಲಿ ವಿಮಾನ ಹಾರಾಡುತ್ತಿರುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲ್ಗಳಲ್ಲಿ ಸೆರೆಹಿಡಿದಿದ್ದಾರೆ. ಮಲೆನಾಡಿನಾದ್ಯಂತ ಎರಡು ಸುತ್ತು ಹಾಕಿದ ಈ ವಿಮಾನವು ನಂತರ ಶಿವಮೊಗ್ಗ ಭಾಗದತ್ತ ತೆರಳಿದೆ ಎಂದು ತಿಳಿದುಬಂದಿದೆ. ಇದು ಶ್ರೀಮಂತರ ಶೋಕಿ ಓಡಾಟವೋ ಅಥವಾ ಯಾವುದಾದರೂ ಸರ್ಕಾರಿ ಇಲಾಖೆಯ ಗುಪ್ತ ಸರ್ವೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಬ್ಯಾಕ್ಗ್ರೌಂಡ್ ಹುಡುಕಾಟದಲ್ಲಿ ಖಾಕಿ ಪಡೆ
ನಿಗೂಢ ಹಾರಾಟದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಚಿಕ್ಕಮಗಳೂರು ಪೊಲೀಸರು ವಿಮಾನದ ಹಿನ್ನೆಲೆ ಪತ್ತೆಹಚ್ಚಲು ಜಾಲ ಬೀಸಿದ್ದಾರೆ. ವಿಮಾನ ನಿಲ್ದಾಣದ ಪ್ರಾಧಿಕಾರಗಳ ಜೊತೆ ಸಂಪರ್ಕ ಸಾಧಿಸಿ, ಈ ಹಾರಾಟಕ್ಕೆ ಅನುಮತಿ ಇತ್ತೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ