ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಲ್ಲಿ ಬಿರುಕು

By Kannadaprabha NewsFirst Published Jun 16, 2021, 7:22 AM IST
Highlights

* ಮುಷ್ಕರದ ವಿಷಯದಲ್ಲಿ ಅಧ್ಯಕ್ಷ ಚಂದ್ರು ನಡೆಗೆ ಬೇಸತ್ತು ಹಲವು ಪದಾಧಿಕಾರಿಗಳ ರಾಜೀನಾಮೆ
* ರಾಜ್ಯ ಸರ್ಕಾರದ ಜತೆ ಮಾತುಕತೆಗೆ ಹೋಗದೆ ನೌಕರರ ಬದುಕು ಅತಂತ್ರ ಮಾಡಿದ್ದಕ್ಕೆ ಸಿಟ್ಟು
* ಸೇವೆಯಿಂದ ವಜಾ ಹಾಗೂ ಅಮಾನತುಗೊಂಡಿರುವ ನೌಕರರ ಬದುಕು ಅತಂತ್ರ
 

ಬೆಂಗಳೂರು(ಜೂ.16): ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದಲ್ಲಿ ಬಿರುಕು ಕಾಣಿಸಿಕೊಡಿದೆ. ಕೂಟದ ಅಧ್ಯಕ್ಷ ಆರ್‌.ಚಂದ್ರಶೇಖರ್‌ (ಚಂದ್ರು) ಅವರ ನಡವಳಿಕೆಯಿಂದ ಬೇಸತ್ತು ಕೂಟದ ಹಲವು ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.

ಸಾರಿಗೆ ನೌಕರರ ಕೂಟದ ರಾಜ್ಯ ಖಜಾಂಚಿ ಜಗದೀಶ್‌, ಪ್ರಧಾನ ಕಾರ್ಯದರ್ಶಿ ಹೆಚ್‌.ಡಿ ನಾಗೇಂದ್ರ, ಪ್ರಚಾರ ಕಾರ್ಯದರ್ಶಿ ಎಸ್‌.ಪಿ ಚೇತನ್‌, ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯ ಕಾರ್ಯದರ್ಶಿ ಶೌಕತ್‌ ಅಲಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಪೆಟ್ರೋಲ್‌, ವಿದ್ಯುತ್‌ ದರ ಏರಿಕೆ ಬಳಿಕ ಮತ್ತೊಂದು ಶಾಕ್‌ ಕೊಡಲು ಸಜ್ಜಾದ ಸರ್ಕಾರ..!

ಸದರಿ ಕೂಟಕ್ಕೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್‌ ಗೌರವಾಧ್ಯಕ್ಷ. ಚಂದ್ರು ಅವರು ಕೂಟದ ಅಧ್ಯಕ್ಷ. ಇತ್ತೀಚೆಗೆ ನಡೆದ ಸಾರಿಗೆ ಮುಷ್ಕರದ ವೇಳೆ ಸಾರಿಗೆ ಸಚಿÊ ಲಕ್ಷ್ಮಣ ಸವದಿ ಮಾತುಕತೆ ಆಹ್ವಾನಿಸಿದ್ದರು. ಇದಾದ ನಂತರ ಬಿಎಂಟಿಸಿ ಅಧ್ಯಕ್ಷರ ಮಾತುಕತೆಗೆ ಆಹ್ವಾನಿಸಿದರೂ ಮಾತುಕತೆಗೆ ತೆರಳಲಿಲ್ಲ. ಮುಷ್ಕರ ಮುಂದುವರೆಸಲಾಯಿತು. ಇದರ ಪರಿಣಾಮ ಸರ್ಕಾರ ಮಾತುಕತೆಗೆ ಆಹ್ವಾನಿಸುವ ಗೋಜಿಗೆ ಹೋಗಲಿಲ್ಲ.
ಜತೆಗೆ, ಹಲವು ಕಾರಣಗಳನ್ನು ಮುಂದು ಮಾಡಿ ನೂರಾರು ಮಂದಿ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಲಾಯಿತು. ಮುಷ್ಕರದಿಂದಾಗಿ ನೌಕರರ ಬದುಕು ಅತಂತ್ರಗೊಂಡಿತು. ಈ ಬಗ್ಗೆ ಸತತವಾಗಿ ಮನವಿ ಮಾಡಿದರು ಚಂದ್ರು ಅವರು ಸಮಸ್ಯೆ ಬಗೆಹರಿಸುವ ದಿಸೆಯಲ್ಲಿ ಗಮನ ನೀಡಲಿಲ್ಲ.

ಕಡೆಗೆ ಕೂಟದಿಂದ ಸರ್ಕಾರವನ್ನು ಮಾತುಕತೆಗೆ ಆಹ್ವಾನಿಸುವಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಹೈಕೋರ್ಟ್‌ ಸೂಚನೆ ಮೇರೆಗೆ ಸತತ 15 ದಿನಗಳ ಮುಷ್ಕರ ಹಿಂಪಡೆಯಲಾಗಿತ್ತು. ಇದೀಗ ಸಾರಿಗೆ ನಿಗಮಗಳು ಹೈಕೋರ್ಟ್‌ ಸೂಚನೆ ಮೇರೆಗೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿವೆ. ಇತ್ತ ಸೇವೆಯಿಂದ ವಜಾ ಹಾಗೂ ಅಮಾನತುಗೊಂಡಿರುವ ನೌಕರರ ಬದುಕು ಅತಂತ್ರವಾಗಿದೆ. ಇದರಿಂದಾಗಿ ಸರ್ಕಾರದೊಂದಿಗೆ ಮಾತುಕತೆಗೆ ಮುಂದಾಗುವಂತೆ ಚಂದ್ರು ಅವರಿಗೆ ಸಲಹೆ ನೀಡ್ದಿದರೂ ಕ್ಯಾರೆ ಅಂದಿರಲಿಲ್ಲ.

ಸರ್ಕಾರದ ಜತೆ ಸಂಧಾನದ ಮಾತುಕತೆ ನಡೆದಿದ್ದರೆ ನೌಕರರ ಬದುಕು ಅತಂತ್ರವಾಗುವುದನ್ನು ತಪ್ಪಿಸಬಹುದಿತ್ತು. ಕೆಲವಾದರೂ ಬೇಡಿಕೆಗಳು ಈಡೇರುವಂತೆ ಮಾಡಬಹುದಾಗಿತ್ತು. ಆದರೆ, ಚಂದ್ರು ಅವರ ಹಠಮಾರಿ ಧೋರಣೆಯಿಂದ ಇದು ಸಾಧ್ಯವಾಗಲಿಲ್ಲ. ಇದೇ ವೇಳೆ ಚಂದ್ರು ಅವರು ತಮ್ಮನ್ನು ಪ್ರಶ್ನಿಸಿದ ಕೂಟದ ಕೆಲ ಪದಾಧಿಕಾರಿಗಳನ್ನು ಉಚ್ಚಾಟನೆ ಮಾಡಿದ್ದರು ಎಂದು ಪದಾಧಿಕಾರಿಗಲು ಆರೋಪಿಸುತ್ತಾರೆ. ಈ ಎಲ್ಲ ಕಾರಣಗಳಿಗಾಗಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಈ ಪದಾಧಿಕಾರಿಗಳು ಆಪ್ತರ ಬಳಿ ಹೇಳಿದ್ದಾರೆ ಎನ್ನಲಾಗಿದೆ.
 

click me!