
ಬೆಂಗಳೂರು (ಅ.23): ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ನ.11ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸುವ ಹಿನ್ನೆಲೆಯಲ್ಲಿ ಮೂವರು ಸಚಿವರು ಕಾರ್ಯಕ್ರಮದ ಸಿದ್ಧತೆ ಮತ್ತು ಸ್ಥಳ ಪರಿಶೀಲನೆ ನಡೆಸಿದರು. ಶನಿವಾರ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣಕ್ಕೆ ತೆರಳಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಕಂದಾಯ ಸಚಿವ ಆರ್.ಅಶೋಕ್ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸಾರ್ವಜನಿಕ ಸಭೆಗೆ ನಡೆಯುತ್ತಿರುವ ಸಿದ್ಧತೆಯನ್ನು ವೀಕ್ಷಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಲಹೆಯಂತೆ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿದ ಅವರು, ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿರುವ ಜಾಗವನ್ನು ಸಹ ಪರಿಶೀಲನೆ ನಡೆಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕ ಸಭೆಯನ್ನು ಎಲ್ಲಿ ನಡೆಸಿದರೆ ಸೂಕ್ತ ಎನ್ನುವ ಉದ್ದೇಶದಿಂದ ಪರಿಶೀಲನೆ ನಡೆಸಲಾಯಿತು. ಪ್ರತಿಮೆಯ ಸಮೀಪದಲ್ಲಿಯೇ ಇರುವ 40 ಎಕರೆ ವಿಸ್ತೀರ್ಣದ ಅರೇನಾ ಪಿಸರ ಮತ್ತು ಏರ್ಪೋರ್ಚ್ ರೈಲು ನಿಲ್ದಾಣದ ಬಳಿ ಇರುವ ಸ್ಥಳಗಳೆರಡನ್ನೂ ಅವಲೋಕಿಸಿದರು. ರೈಲು ನಿಲ್ದಾಣ ಇರುವ ಪ್ರದೇಶವು ಪ್ರತಿಮೆಗೆ ತುಂಬಾ ದೂರದಲ್ಲಿದ್ದು, ಅಲ್ಲಿಗೆ ಪ್ರತಿಮೆ ಸಹ ಕಾಣುವುದಿಲ್ಲ. ಆದರೆ, ಅರೇನಾ ಜಾಗಕ್ಕೆ ಪ್ರತಿಮೆ ಕಾಣಿಸುತ್ತದೆ. ಹೀಗಾಗಿ ಅದೇ ಸೂಕ್ತ ಎನ್ನುವ ಅಭಿಪ್ರಾಯವನ್ನು ಮೂವರು ಸಚಿವರು ವ್ಯಕ್ತಪಡಿಸಿದರು. ಈ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರಲು ಸಚಿವರು ತೀರ್ಮಾನಿಸಿದರು.
ಶತಮಾನ ಕಳೆದರೂ ಕೆಂಪೇಗೌಡ ಅಜರಾಮರ: ಸಿಎಂ ಬೊಮ್ಮಾಯಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ನ.11ರಂದು ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಅಲ್ಲದೇ, ಕೆಂಪೇಗೌಡ ಥೀಮ್ಪಾರ್ಕ್ಗೆ ಬಳಸುವ ಉದ್ದೇಶದಿಂದ ‘ಪವಿತ್ರ ಮೃತ್ತಿಕಾ (ಮಣ್ಣು) ಸಂಗ್ರಹಣಾ ಅಭಿಯಾನ’ಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ. ರಾಜ್ಯದ ವಿವಿಧೆಡೆ ಮಣ್ಣು ಸಂಗ್ರಹಕ್ಕಾಗಿ 20 ನಾಡಪ್ರಭು ಕೆಂಪೇಗೌಡ ರಥಗಳು ಪ್ರಯಾಣ ಬೆಳೆಸಿದ್ದು, ನ.7ರವರೆಗೆ ಪವಿತ್ರ ಮಣ್ಣನ್ನು ಸಂಗ್ರಹಿಸಲಾಗುತ್ತದೆ.
ಕೆಂಪೇಗೌಡ ಪುತ್ಥಳಿ ಯಾತ್ರೆ: ಕೋಲಾರ ಜಿಲ್ಲೆಯಲ್ಲಿ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿ ರಥಯಾತ್ರೆ ಅ.27 ರಿಂದ ನವೆಂಬರ್ 7 ರವರೆಗೂ 12 ದಿನಗಳ ಕಾಲ ಸಾಗಿ ಬರುವ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನಲ್ಲಿ ರಥಯಾತ್ರೆಯ ಉಸ್ತುವಾರಿಯನ್ನು ಮಾಜಿ ಸಚಿವ ವರ್ತೂರು ಪ್ರಕಾಶ್ ವಹಿಸಿಕೊಳ್ಳುವಂತೆ ಸಚಿವ ಮುನಿರತ್ನ ಸೂಚಿಸಿದರು. ಬೆಂಗಳೂರಿನ ಸಚಿವರ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತಾನಾಡಿದ ಮುನಿರತ್ನ, ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ 12 ದಿನಗಳ ಕಾಲ ಸಂಚರಿಸುವ ರಥಯಾತ್ರೆ ದಿನಕ್ಕೆ 15 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಲಿದ್ದು, ಆ ವ್ಯಾಪ್ತಿಯ ಪ್ರಸಿದ್ದ ಕ್ಷೇತ್ರಗಳ ಮೃತ್ತಿಗೆ ಹಿಡಿಮಣ್ಣನ್ನು ಸಂಗ್ರಹಿಸಿ ರಥದಲ್ಲಿ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.
ಕೆಂಪೇಗೌಡ ಥೀಮ್ ಪಾರ್ಕ್ಗೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ
ಕೋಲಾರ ತಾಲ್ಲೂಕಿನಲ್ಲಿ ಅ.27 ರಂದು ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪುತ್ಥಳಿಯ ರಥಯಾತ್ರೆ ಸರ್ಕಾರಿ ರಥವಾಗಿ ಆಗಮಿಸಿದ್ದು, ಸಚಿವ ಮುನಿರತ್ನ, ಸಂಸದ ಎಸ್.ಮುನಿಸ್ವಾಮಿ, ಸರ್ಕಾರದ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಅಧ್ಯಕ್ಷರಾದ ಎಸ್.ಕೃಷ್ಣಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ.ಕೃಷ್ಣಮೂರ್ತಿ ಯಾತ್ರೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ