
ಹುಬ್ಬಳ್ಳಿ (ಜುಲೈ.14): ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದಲ್ಲಿ ಇಬ್ಬರು ರೈತರು, ರವಿರಾಜ್ ಮತ್ತು ಬಸನಗೌಡ, ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರೈತರು ಧೈರ್ಯವಾಗಿರಬೇಕು. ಆತ್ಮಹತ್ಯೆ ಒಂದೇ ಪರಿಹಾರವಲ್ಲ. ನಾನು ದೊಡ್ಡ ಕುಟುಂಬದಿಂದ ಬಂದವನಾಗಿದ್ದರೂ ಕಷ್ಟಗಳನ್ನು ಎದುರಿಸಿದ್ದೇನೆ. ರೈತರ ಕುಟುಂಬಕ್ಕೆ ಪರಿಹಾರ ನೀಡಲು ಮುಖ್ಯಮಂತ್ರಿಯವರ ಜೊತೆ ಚರ್ಚಿಸುತ್ತೇನೆ ಎಂದು ಲಾಡ್ ಭರವಸೆ ನೀಡಿದರು. ಅಲ್ಲದೇ ಬೆಳೆ ವಿಮೆಯಲ್ಲಿ ಯಾವುದೇ ಅನ್ಯಾಯವಾಗಿದ್ದರೆ, ತನಿಖೆಗೆ ಆದೇಶಿಸುವುದಾಗಿ ತಿಳಿಸಿದರು.
ಶಾಸಕರ ಖರೀದಿ ಬಿಜೆಪಿ ಟ್ರಿಕ್ಸ್; ಜೋಶಿಗೆ ತಿರುಗೇಟು:
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಶಾಸಕರ ಖರೀದಿ ಆರೋಪದ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವ ಲಾಡ್, ಶಾಸಕರ ಖರೀದಿ ಬಿಜೆಪಿಯವರ ಟ್ರಿಕ್ಸ್ ಇದು. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಯವರು ಎಷ್ಟು ಶಾಸಕರನ್ನು ಖರೀದಿಸಿದ್ದಾರೆಂದು ಹೇಳಲಿ. ದೇಶದ ವಿಷಯಗಳ ಬಗ್ಗೆ ಕೇಳಿದರೆ ಅವರು ಮಾತನಾಡುವುದಿಲ್ಲ. ಕೇಂದ್ರ ಸಚಿವರು ಕೇವಲ ರಾಜ್ಯವನ್ನು ಟೀಕಿಸಿ ಹೋಗುತ್ತಾರೆ. ಬಿಜೆಪಿಯವರಿಗೆ ಲೆಕ್ಕ-ಬುಕ್ಕ ಇಲ್ಲ, ಕೇವಲ ಮಾತಿನಲ್ಲಿ ಕಾಲ ಕಳೆಯುತ್ತಾರೆ ಎಂದು ಲಾಡ್ ವಾಗ್ದಾಳಿ ನಡೆಸಿದರು.
ನೆರೇಗಾ ಮುಗಿಸುವ ಹುನ್ನಾರ:
ನರೇಗಾ ಯೋಜನೆಯ ಕುರಿತಾಗಿ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ನರೇಗಾದಲ್ಲಿ ಎಷ್ಟು ಕೆಲಸವಾಗಿದೆ, ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಬಿಜೆಪಿಯವರು ಹೇಳಲಿ. ಅವರ ಉದ್ದೇಶವೇ ನರೇಗಾ ಯೋಜನೆಯನ್ನು ಮುಗಿಸುವುದು. ಬಿಜೆಪಿಯವರ ಬಂಡವಾಳ ಬಯಲಾಗಿದೆ ಎಂದು ಆರೋಪಿಸಿದರು.
ಯಾರು ಸಿಎಂ ಆಗುತ್ತಾರೆ, ಯಾರು ಬಿಡುತ್ತಾರೆ ಎಂಬ ಚರ್ಚೆ ಅನಗತ್ಯ. ರಾಜ್ಯದ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ, ಎಂದು ಸಂತೋಷ ಲಾಡ್ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ