ಖಾಸಗಿ ಸಾರಿಗೆ ಸಂಘಟನೆಗಳ ಜೊತೆ ಇಂದು ಸಚಿವ ರಾಮಲಿಂಗಾರೆಡ್ಡಿ 2ನೇ ಸುತ್ತಿನ ಸಭೆ

By Kannadaprabha NewsFirst Published Jul 31, 2023, 5:25 AM IST
Highlights

‘ಶಕ್ತಿ’ ಯೋಜನೆಯಿಂದ ಸಂಕಷ್ಟಕ್ಕೆ ಒಳಗಾಗಿ ಮುಷ್ಕರಕ್ಕೆ ಕರೆಕೊಟ್ಟಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಮನವೊಲಿಸಿ ಹೋರಾಟ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಎರಡನೇ ಸುತ್ತಿನ ಸಭೆ ನಡೆಸಲಿದ್ದಾರೆ. ಬೇಡಿಕೆ ಈಡೇರಿಕೆ ಸಂಬಂಧ ಆಟೋರಿಕ್ಷಾ, ಟ್ಯಾಕ್ಸಿ ಹಾಗು ಖಾಸಗಿ ಬಸ್‌ ಸಂಘಟನೆಗಳ ಜೊತೆ ಪ್ರತ್ಯೇಕವಾಗಿ ಮಾತನಾಡಲಿದ್ದಾರೆ.

ಬೆಂಗಳೂರು (ಜು.31) :  ‘ಶಕ್ತಿ’ ಯೋಜನೆಯಿಂದ ಸಂಕಷ್ಟಕ್ಕೆ ಒಳಗಾಗಿ ಮುಷ್ಕರಕ್ಕೆ ಕರೆಕೊಟ್ಟಿದ್ದ ಖಾಸಗಿ ಸಾರಿಗೆ ಸಂಘಟನೆಗಳ ಮನವೊಲಿಸಿ ಹೋರಾಟ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೋಮವಾರ ಎರಡನೇ ಸುತ್ತಿನ ಸಭೆ ನಡೆಸಲಿದ್ದಾರೆ. ಬೇಡಿಕೆ ಈಡೇರಿಕೆ ಸಂಬಂಧ ಆಟೋರಿಕ್ಷಾ, ಟ್ಯಾಕ್ಸಿ ಹಾಗು ಖಾಸಗಿ ಬಸ್‌ ಸಂಘಟನೆಗಳ ಜೊತೆ ಪ್ರತ್ಯೇಕವಾಗಿ ಮಾತನಾಡಲಿದ್ದಾರೆ.

ಸೋಮವಾರ ಬೆಳಗ್ಗೆ ಶಾಂತಿನಗರದಲ್ಲಿನ ಸಾರಿಗೆ ಆಯುಕ್ತರ ಕಚೇರಿಯಲ್ಲಿ 11ರಿಂದ 12ಗಂಟೆವರೆಗೆ ಆಟೋರಿಕ್ಷಾ ವಾಹನಗಳ ಸಂಘ, 12ರಿಂದ 1 ಗಂಟೆವರೆಗೆ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ ಹಾಗೂ 1ರಿಂದ 2 ಗಂಟೆವರೆಗೆ ಖಾಸಗಿ ಬಸ್‌ ಸಂಸ್ಥೆಗಳ ಜೊತೆಗೆ ಸಚಿವರ ಸಭೆ ನಿಗದಿಯಾಗಿದೆ. ಒಟ್ಟು 43 ಸಂಘಟನೆಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಮೊದಲ ಸುತ್ತಿನ ಸಭೆಯಲ್ಲಿ ನೀಡಿದ್ದ ಭರವಸೆಯಂತೆ 28 ಬೇಡಿಕೆಗಳಲ್ಲಿ ಯಾವುದನ್ನು ಯಾವ ಕಾಲಮಿತಿಯಲ್ಲಿ ಈಡೇರಿಸುತ್ತೇವೆ, ಅದಕ್ಕೆ ಸಂಘಟನೆಗಳ ಸಹಕಾರ ಕೋರುವುದು ಸೇರಿ ಇತರೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ಶಕ್ತಿ ಯೋಜನೆ ವಿರೋಧಿಸಿ ಜು.27ರಂದು ಆಟೋ, ಟ್ಯಾಕ್ಸಿ, ಖಾಸಗಿ ಬಸ್ ಮಾಲೀಕರ ಮುಷ್ಕರ: ಜಂಟಿ ಸಭೆಗೆ ಸಚಿವರಿಂದ ಆಹ್ವಾನ

ಸಂಕಷ್ಟಕ್ಕೆ ಒಳಗಾದ ಚಾಲಕರಿಗೆ ಮಾಸಿಕ .10 ಸಾವಿರ ಪರಿಹಾರ ಧನ ನೀಡಬೇಕು. ಸರ್ಕಾರಿ ಸ್ವಾಮ್ಯದ ಬಸ್‌ ಸಾರಿಗೆ ಸಂಸ್ಥೆಗಳಂತೆ ಶಕ್ತಿ ಯೋಜನೆಯನ್ನು ಖಾಸಗಿ ಬಸ್ಸು ಸಾರಿಗೆ ಸಂಸ್ಥೆಗಳಿಗೂ ವಿಸ್ತರಿಸುವ ವಿಚಾರ ಹಾಗೂ ಟ್ಯಾಕ್ಸಿಗಳ ನೋಂದಣಿ ಶುಲ್ಕವನ್ನು ಕಡಿತಗೊಳಿಸುವ ವಿಚಾರವನ್ನು ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ತೀರ್ಮಾನಿಸುವುದಾಗಿ ಸಚಿವರು ಹಿಂದಿನ ಸಭೆಯಲ್ಲಿ ತಿಳಿಸಿದ್ದರು. ಅದರ ಬಗೆಗೂ ಇಂದು ಪ್ರಸ್ತಾಪಿಸಲಿದ್ದೇವೆ. ಮುಖ್ಯಮಂತ್ರಿಗಳ ಜೊತೆಗೂ ಶೀಘ್ರ ಸಭೆ ನಡೆಸುವಂತೆ ಆಗ್ರಹಿಸಲಿದ್ದೇವೆ. ಉಳಿದಂತೆ ಬೇಡಿಕೆಗಳನ್ನು ಆದಷ್ಟುಬೇಗ ಈಡೇರಿಸುವಂತೆ ಕೋರಲಾಗುವುದು ಎಂದು ಸಾರಿಗೆ ಸಂಘಟನೆಗಳ ಮುಖಂಡ ನಟರಾಜ ಶರ್ಮಾ ತಿಳಿಸಿದರು.

ಹಾಲು, ಅಲ್ಕೋಹಾಲ್ ಆಯ್ತು, ಇದೀಗ ಸರಕು ವಾಹನಗಳ ಮೇಲಿನ ತೆರಿಗೆ ಡಬಲ್‌!

‘ಶಕ್ತಿ’ ಯೋಜನೆ ಹಿನ್ನೆಲೆಯಲ್ಲಿ ಸ್ತ್ರೀಯರು ಖಾಸಗಿ ವಾಹನಗಳತ್ತ ಬರದೇ ತೀರಾ ನಷ್ಟಕ್ಕೆ ಒಳಗಾಗಿದ್ದೇವೆ. ಸರ್ಕಾರ ಪರಿಹಾರ ನೀಡಬೇಕು ಎಂದು ಖಾಸಗೀ ವಾಹನಗಳ ಚಾಲಕ, ಮಾಲೀಕರು ಕಳೆದ ಜು.27ರಂದು ಮುಷ್ಕರಕ್ಕೆ ಕರೆ ಕೊಟ್ಟಿದ್ದರು. ಎರಡು ದಿನ ಮೊದಲು ಸಂಘಟನೆಗಳ ಮುಖಂಡರನ್ನು ಕರೆಸಿ ಮಾತನಾಡಿದ್ದ ಸಚಿವರು 28 ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಮುಖಂಡರು ಹಿಂಪಡೆದಿದ್ದರು.

click me!