
ಹಾವೇರಿ (ಡಿ.18): ಈ ಹಿಂದೆ ಜನರು ಸೌಲಭ್ಯಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡಿ ಅವರ ಚಪ್ಪಲಿ ಸವೆದು ಹೋಗುತ್ತಿತ್ತು. ಆದರೆ, ಈಗ ಗ್ರಾಮ ವಾಸ್ತವ್ಯ ಕಾರ್ಯಕ್ರಮದಿಂದ ಜನರ ಮನೆ ಬಾಗಿಲಿಗೆ ಸರ್ಕಾರಿ ಕಚೇರಿಗಳು ಬರುವಂತಾಗಿದೆ. ಇದು ನನ್ನ 13ನೇ ಗ್ರಾಮ ವಾಸ್ತವ್ಯವಾಗಿದ್ದು, ಈವರೆಗೆ 3,38,876 ಅರ್ಜಿಗಳ ಪರಿಶೀಲನೆ ನಡೆಸಿ, ಪರಿಹಾರ ಕಲ್ಪಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು. ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಮಾಡುತ್ತಿರುವ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹೋದ ಸಿದ್ದ ಬಂದ ಸಿದ್ದ ಅಂತ ಅಲ್ಲ. ಸ್ಥಳದಲ್ಲಿಯೇ ಜನರ ಸಮಸ್ಯೆಆಲಿಸಿ ಪರಿಹಾರ ಕಲ್ಪಿಸಲಾಗುತ್ತಿದೆ. ನಾನು ಸಭೆ ಮಾಡಿ ಓಡಿ ಹೋಗೋಕೆ ಬಂದಿಲ್ಲ, ಇಲ್ಲೇ ಇದ್ದು ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಕೊಡುವುದು ನಮ್ಮ ಉದ್ದೇಶವಾಗಿದೆ ಎಂದರು. ಉಪವಿಭಾಗಾಧಿಕಾರಿ, ತಹಸೀಲ್ದಾರ್, ಮಂತ್ರಿಗಳನ್ನು ಈ ಹಿಂದೆ ಯಾರೂ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಜನರು ಹತ್ತಾರು ಸಲ ಸರ್ಕಾರಿ ಕಚೇರಿಗಳಿಗೆ ಅಲೆದರೂ ಪರಿಹಾರ ಸಿಗುತ್ತಿರಲಿಲ್ಲ. ಅಧಿಕಾರಿಗಳು ಹಳ್ಳಿಗೆ ಬಂದರೆ ಒಳ್ಳೆದಾಗುತ್ತದೆ ಎಂಬ ಉದ್ದೇಶದಿಂದ ಹಾಗೂ ಜನರ ಕಷ್ಟ ಏನು ಎಂಬುದನ್ನು ಅರಿಯಲು ಗ್ರಾಮ ವಾಸ್ತವ್ಯ ಮಾಡುತ್ತಿದ್ದೇನೆ ಎಂದರು.
ಪ್ರಧಾನಿ ಮೋದಿ ಇನ್ನು 15 ದಿನಕ್ಕೊಮ್ಮೆ ರಾಜ್ಯಕ್ಕೆ ಬರುತ್ತಾರೆ: ಸಚಿವ ಅಶೋಕ್
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಥೇಚ್ಛವಾಗಿ ಮಳೆ ಸುರಿದು ನದಿಗಳು, ಡ್ಯಾಂಗಳು ತುಂಬಿ ತುಳುಕುತ್ತಿವೆ. ನಮ್ಮ ಸರ್ಕಾರ ಮನೆ ಕಳೆದುಕೊಂಡವರಿಗೆ, ರೈತರಿಗೆ ಒಂದೇ ತಿಂಗಳಲ್ಲಿ ಪರಿಹಾರ ನೀಡಿದೆ. ಈ ಹಿಂದೆ ಪರಿಹಾರ ನೀಡಲು 8 ತಿಂಗಳು ಸಮಯ ತೆಗೆದುಕೊಳ್ಳುತ್ತಿದ್ದರು. ಈ ಹಿಂದೆ ಮನೆ ಬಿದ್ದರೆ 95 ಸಾವಿರ ರು. ಪರಿಹಾರ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಈಗ 5 ಲಕ್ಷ ರು. ನೀಡುತ್ತಿದೆ. ಆ್ಯಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಹಿಂದೆ ಸರ್ಕಾರ 3 ಸಾವಿರ ರು. ಪರಿಹಾರ ನೀಡುತ್ತಿತ್ತು. ಈಗ ಪ್ರತಿ ತಿಂಗಳು ಹತ್ತು ಸಾವಿರ ರು. ಕೊಡಲಾಗುತ್ತಿದೆ. ಅವರಿಗೆ ನಿವೇಶನ ಕೊಡಲು ಸಹ ಸಿಎಂ ಸೂಚನೆ ನೀಡಿದ್ದಾರೆ. ನಮ್ಮ ಸರ್ಕಾರದ್ದು ಪ್ರಚಾರ ಕಡಿಮೆ, ಕೆಲಸ ಜಾಸ್ತಿ ಎಂದರು.
ಕನಕದಾಸರ ಜನ್ಮಸ್ಥಳಕ್ಕೆ ಬಂದಿದ್ದೇನೆ. ಸಿಎಂ ಬೊಮ್ಮಾಯಿ ಅವರು ನಮಗೆಲ್ಲ ಸಿಎಂ, ನಿಮಗೆ ಶಾಸಕರು. ನೀವು ಪ್ರೀತಿಯಿಂದ ಓಟು ಹಾಕಿ ಆಶೀರ್ವಾದ ಮಾಡಿದ್ದರಿಂದ ಇಂದು ಅವರು ಸಿಎಂ ಆಗಿದ್ದಾರೆ ಎಂದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಮಾಜಿ ಶಾಸಕ ಶಿವರಾಜ ಸಜ್ಜನರ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಮ್ಮದ್ ರೋಷನ್ ಇತರರು ಇದ್ದರು.
ಸರ್ಕಾರದ ಖಜಾನೆ ಖಾಲಿಯಾಗಿಲ್ಲ, ಆರ್ಥಿಕವಾಗಿ ಸದೃಢ: ಸಚಿವ ಅಶೋಕ್
ಭೂಪರಿವರ್ತನೆಗೆ ಅಧಿವೇಶನದಲ್ಲಿ ಕಾಯ್ದೆ: ಈ ಹಿಂದೆ ಭೂಪರಿವರ್ತನೆಗೆ ಬಹಳ ದಿನಗಳು ಹಿಡಿಯುತ್ತಿದ್ದವು. ಈಗ 7 ದಿನಗಳಲ್ಲಿ ಜಮೀನು ನೋಂದಾಯಿಸಿಕೊಂಡು ಖಾತೆ ಮಾಡಿಸಿಕೊಳ್ಳಬಹುದು. ಈ ಹಿಂದೆ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ರೈತರ ಮೇಲೆ ಪ್ರಕರಣ ದಾಖಲಿಸಲಾಗುತ್ತಿತ್ತು. ಈಗ ಒತ್ತುವರಿ ಮಾಡಿದ ರೈತರ ಮೇಲೆ ಪ್ರಕರಣ ದಾಖಲಿಸದಂತೆ ಕಾನೂನು ಮಾಡಿದ್ದೇವೆ. ಭೂ ಪರಿವರ್ತನೆ ಸಂಬಂಧ ಅಧಿವೇಶನದಲ್ಲಿ ಹೊಸ ಕಾಯ್ದೆ ತರಲಿದ್ದೇವೆ ಎಂದು ಸಚಿವ ಅಶೋಕ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ