ಹಣಕ್ಕಾಗಿ ಆಸ್ಪತ್ರೆ ಪಟ್ಟು: ಮೃತದೇಹ ಕೊಡಿಸಿದ ಸಚಿವ!

By Kannadaprabha NewsFirst Published Aug 4, 2020, 9:27 AM IST
Highlights

ಹಣಕ್ಕಾಗಿ ಆಸ್ಪತ್ರೆ ಪಟ್ಟು: ಮೃತದೇಹ ಕೊಡಿಸಿದ ಸಚಿವ ನೆರವು| ಚಿಕಿತ್ಸಾ ವೆಚ್ಚ 3.60 ಲಕ್ಷ ನೀಡುವಂತೆ ಆಡಳಿತ ಮಂಡಳಿ ಒತ್ತಾಯ| 2 ದಿನ ಮೃತದೇಹ ನೀಡದ ಆಸ್ಪತ್ರೆ, ಅಧಿಕಾರಿಗಳ ಮಧ್ಯಸ್ಥಿಕೆ

ಬೆಂಗಳೂರು(ಆ.04): ಬೆಂಗಳೂರು(ಆ.04): ಕೊರೋನಾ ಸೋಂಕಿನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿ ಎರಡು ದಿನ ಕಳೆದರೂ ಚಿಕಿತ್ಸಾ ವೆಚ್ಚ ಬಾಕಿ ಮೊತ್ತ ಪಾವತಿಸಿದ ನಂತರವೇ ಮೃತದೇಹ ಕೊಡುವುದಾಗಿ ಪಟ್ಟು ಹಿಡಿದಿದ್ದ ಆಸ್ಪತ್ರೆ ಆಡಳಿತ ಮಂಡಳಿ ಜೊತೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ.ಸುಧಾಕರ್‌ ಚರ್ಚಿಸಿ ಮೃತದೇಹವನ್ನು ಮೃತನ ಕುಟುಂಬಸ್ಥರಿಗೆ ನೀಡುವ ವ್ಯವಸ್ಥೆ ಮಾಡಿದ್ದಾರೆ.

ನಗರದ ಸೆಂಟ್‌ ಜಾನ್‌ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮೃತ ದೇಹ ನೀಡುತ್ತಿಲ್ಲ ಎಂದು ಮೃತ ವ್ಯಕ್ತಿಯ ಮಗಳು ಗೋಳಾಡುವ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಮಧ್ಯಪ್ರವೇಶಿಸಿದ ಸಚಿವರು, ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆಡಳಿತ ಮಂಡಳಿ ಜೊತೆ ಚರ್ಚಿಸಿದ ನಂತರ ಆಸ್ಪತ್ರೆಯು ಯಾವುದೇ ಚಿಕಿತ್ಸಾ ಬಾಕಿ ಪಡೆಯದೇ ಮೃತ ದೇಹವನ್ನು ನೀಡಿದೆ.

ಗುಡ್‌ ನ್ಯೂಸ್: ರಾಜ್ಯದಲ್ಲಿ ಕೊರೋನಾ ಸೋಂಕಿತರ ಚೇತರಿಕೆಯ ಪ್ರಮಾಣ ಹೆಚ್ಚಳ

ಉಸಿರಾಟದ ಸಮಸ್ಯೆಯಿಂದಾಗಿ ಬೊಮ್ಮನಹಳ್ಳಿಯ ಬೇಗೂರು ನಿವಾಸಿಯೊಬ್ಬರನ್ನು ಜುಲೈ 21ರಂದು ಮಡಿವಾಳ ಬಳಿಯ ಸೆಂಟ್‌ಜಾನ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಬಾರಿ ನಡೆಸಿದ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್‌ ವರದಿ ಬಂದಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಜುಲೈ 25ರಂದು ಕೊರೋನಾ ಸೋಂಕು ತಗುಲಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದರಲ್ಲದೇ, ಆರೋಗ್ಯ ತೀವ್ರ ಹದಗೆಟ್ಟಿದೆ, ತಕ್ಷಣ ಐಸಿಯುನಲ್ಲಿ ಚಿಕಿತ್ಸೆ ನೀಡಬೇಕು ಸಂಬಂಧಿಕರಿಗೆ ತಿಳಿಸಿ, ಚಿಕಿತ್ಸೆ ಮುಂದುವರಿಸಿದ್ದರು.

ಆದರೆ, ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟಿದ್ದಾರೆ. ಬಾಕಿ ಇರುವ .3.60 ಲಕ್ಷ ಚಿಕಿತ್ಸಾ ವೆಚ್ಚವನ್ನು ಪಾವತಿಸಿ ಮೃತ ದೇಹ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದರು. ತಕ್ಷಣ ಅಷ್ಟುದೊಡ್ಡ ಮೊತ್ತ ಪಾವತಿ ಮಾಡಲು ಸಾಧ್ಯವಾಗದ ಹಿನ್ನೆಲೆ, ಮೃತರ ಪತ್ನಿ ಮತ್ತು ಮಗಳು ಆಸ್ಪತ್ರೆಯ ಮುಂದೆ ಎರಡು ದಿನಗಳ ಕಾಲ ಗೋಳಾಡಿದ್ದರು. ಆದರೂ ಕನಿಕರ ತೋರದ ಆಡಳಿತ ಮಂಡಳಿ ಮೃತ ದೇಹ ನೀಡುವುದಿಲ್ಲ ಎಂದು ತಿಳಿಸಿದ್ದರು.

ಕೋವಿಡ್‌ ಸಂಕಷ್ಟಕ್ಕೆ ಮಿಡಿದ ಸುಧಾ ಮೂರ್ತಿ: ಧನ್ಯವಾದ ತಿಳಿಸಿದ ಸಚಿವ ಸುಧಾಕರ್‌

ಮಗಳು ಮಾಡಿದ್ದ ವಿಡಿಯೋ ವೈರಲ್‌:

ಸೇಂಟ್‌ಜಾನ್‌ ಆಸ್ಪತ್ರೆಯಲ್ಲಿ ನಮ್ಮ ತಂದೆಗೆ ಚಿಕಿತ್ಸೆ ನೀಡಿದ್ದು, ದಾಖಲಾದ ಬಳಿಕ 2 ದಿನಗಳ ಕಾಲ ತಂದೆಯನ್ನು ನೋಡುವುದಕ್ಕೆ ಅವಕಾಶ ನೀಡಿರಲಿಲ್ಲ. ಯಾವ ಚಿಕಿತ್ಸೆ ನೀಡಿದ್ದೇವೆ ಎಂಬುದರ ಬಗ್ಗೆ ಈವರೆಗೂ ಮಾಹಿತಿ ನೀಡಿಲ್ಲ. ಈ ಸಂಬಂಧ ಪೊಲೀಸರಿಗೆ ದೂರು ನೀಡಲು ಮುಂದಾದರೂ ಪ್ರಯೋಜನವಾಗಿಲ್ಲ. ಮೃತದೇಹ ಪಡೆಯುವುದಕ್ಕೆ ಅವಕಾಶ ಮಾಡಿಕೊಡಿ ಎಂದು ಮೃತ ವ್ಯಕ್ತಿಯ ಮಗಳು ವಿಡಿಯೋ ಮಾಡಿದ್ದು, ವೈರಲ್‌ ಆಗಿದೆ.

ಕೋವಿಡ್‌ ಸಂಕಷ್ಟಕ್ಕೆ ಮಿಡಿದ ಸುಧಾ ಮೂರ್ತಿ: ಧನ್ಯವಾದ ತಿಳಿಸಿದ ಸಚಿವ ಸುಧಾಕರ್‌

ಸಚಿವರ ಸೂಚನೆ ಮೇರೆಗೆ ಮೃತದೇಹ ಹಸ್ತಾಂತರ

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಆಸ್ಪತ್ರೆಗೆ ಸೂಚನೆ ಮೇರೆಗೆ ಆಸ್ಪತ್ರೆ ಆಡಳಿತ ಮಂಡಳಿ ತಕ್ಷಣ ಮೃತ ದೇಹ ಹಸ್ತಾಂತರಿಸಿದರು ಎಂದು ಮೃತರ ಸಂಬಂಧಿ ಸಲೀಂ ಪಾಷ ತಿಳಿಸಿದ್ದಾರೆ. ಮಾಧ್ಯಮಗಳು ಮತ್ತು ಸಚಿವರಿಂದಾಗಿ ನಮಗೆ ನೆರವಾಗಿದ್ದು, ಬಾಕಿ ಹಣ ಪಡೆದುಕೊಂಡಿಲ್ಲ. ಸಚಿವರು ಮತ್ತು ಮಾಧ್ಯಮಗಳ ನೆರವಿನಿಂದಾಗಿ ಇದು ಸಾಧ್ಯವಾಗಿದೆ ಎಂದು ಹೇಳಿದರು.

click me!