
ಚಿಕ್ಕಬಳ್ಳಾಪುರ(ಮಾ.08): ಬಲಿಜ ಸಮುದಾಯದ ಹಲವು ವರ್ಷಗಳ ಬೇಡಿಕೆಯಾದ ಬಲಿಜ ಅಭಿವೃದ್ಧಿ ನಿಗಮವನ್ನು ಮುಂದಿನ ಒಂದು ವಾರದೊಳಗೆ ಸ್ಥಾಪಿಸಿ, ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಘೋಷಿಸಿದರು.
ನಗರದ ನಂದಿ ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ಕೈವಾರ ತಾತಯ್ಯನವರ ಜಯಂತ್ಯುತ್ಸವದಲ್ಲಿ ಮಾತನಾಡಿ, ಈ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಈ ಸಮುದಾಯಕ್ಕೆ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಎಲ್ಲ ರೀತಿಯ ಸಹಕಾರ ನೀಡಲು ಸರ್ಕಾರ ಸಿದ್ಧ ಎಂದು ತಿಳಿಸಿದರು.
Chikkaballapur: ನೇಕಾರರ ಶ್ರೇಯೋಭಿವೃದ್ಧಿಗೆ ಬಿಜೆಪಿ ಬದ್ಧ: ಸಚಿವ ಸುಧಾಕರ್
ಜೀವನದ ಸತ್ವ ಸಾರಿದ ತಾತಯ್ಯ:
ಕೈವಾರ ತಾತಯ್ಯನವರು ಜಗತ್ತಿಗೇ ಅಜರಾಮರವಾದ ಕೆಲಸ ಮಾಡಿದ್ದಾರೆ. ಮಾನವ ಕುಲಕ್ಕೆ ಅಗತ್ಯವಿರುವ ಕಲಿಯುಗದ ಸತ್ಯ, ಜೀವನದ ಸತ್ವ ಹೇಳಿದ್ದಾರೆ. ಅವರು ಉನ್ನತ ಶಿಕ್ಷಣ ಪಡೆದಿಲ್ಲ, ಶ್ರೀಮಂತ ಕುಟುಂಬದಲ್ಲಿ ಜನಿಸಿಲ್ಲ, ಹುಟ್ಟುತಃ ಬ್ರಹ್ಮಚಾರಿಯೂ ಅಲ್ಲ. ಆದರೂ ಸಮಾಜಕ್ಕೆ ದಾರಿದೀಪವಾಗಿ ಉಳಿದಿರುವ ತಾತಯ್ಯನವರನ್ನು ಸ್ಮರಣೆ ಮಾಡಬೇಕು ಎಂದರು.
ಜಯಂತಿ ಮಾಡಿದ್ದು ಬಿಜೆಪಿ ಸರ್ಕಾರ: 17ನೇ ಶತಮಾನದಿಂದ ನಮ್ಮ ಸರ್ಕಾರ ಬರುವವರೆಗೂ ಕೈವಾರ ತಾತಯ್ಯನವರ ಜಯಂತಿ ಅಧಿಕೃತವಾಗಿ ಮಾಡಲಿಲ್ಲ. ಆದರೆ ನಮ್ಮ ಸರ್ಕಾರ ಮಾಡಿತು. ಈ ಹಿಂದಿನಿಂದಲೂ ಒಗ್ಗಟ್ಟಿನಿಂದ ಕಾರ್ಯಕ್ರಮ ಮಾಡಲಾಗುತ್ತಿದೆ. ಬಲಿಜ ಸಮುದಾಯಕ್ಕೆ ಉದ್ಯೋಗಕ್ಕೂ 2ಎ ಮೀಸಲಾತಿಯನ್ನು ಈ ಅವಧಿಯಲ್ಲೇ ನೀಡಲು ದೃಢಸಂಕಲ್ಪ ಮಾಡಲಾಗಿತ್ತು. ಆದರೆ ಕೆಲ ದೊಡ್ಡ ಸಮುದಾಯಗಳು 2ಎ ಬೇಡಿಕೆ ಇಟ್ಟಿರುವ ಪರಿಣಾಮ ಸರ್ಕಾರ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕಿದೆ. ಹಾಗಾಗಿ ಈ ಅವಧಿಯಲ್ಲಿ 2ಎ ನೀಡಲು ಸಾಧ್ಯವಾಗಲಿಲ್ಲ. ಮುಂದಿನ ಅವಧಿಯಲ್ಲಿ ನಮ್ಮದೇ ಸರ್ಕಾರ ಬರಲಿದ್ದು, ನಾವೇ 2ಎ ಮೀಸಲಾತಿಯನ್ನು ನೀಡಲಾಗುವುದು ಎಂದರು.
ಪ್ರಸ್ತುತ ಗುರುತಿಸಲಾಗಿರುವ ಜಮೀನಿನಲ್ಲಿ ಕೈವಾರ ತಾತಯ್ಯನವರ ಸುಸಜ್ಜಿತವಾದ ಸಮುದಾಯ ಭವನ ನಿರ್ಮಿಸಲಾಗುವುದು. ಇದಕ್ಕಾಗಿ ಸರ್ಕಾರದಿಂದ .1 ಕೋಟಿ ಅನುದಾನ ಮಂಜೂರು ಮಾಡಿಸಲಾಗುವುದು. ಜೊತೆಗೆ ನಾವೆಲ್ಲರೂ ಸೇರಿ .1 ಕೋಟಿ ನೀಡಿ .2 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲು ಶ್ರಮಿಸುವುದಾಗಿ ಸುಧಾಕರ್ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ