
ಬೆಂಗಳೂರು: ಅಮೆರಿಕವು ಭಾರತೀಯ ಔಷಧಗಳ ಮೇಲೆ 100% ತೆರಿಗೆ ವಿಧಿಸಿರುವುದರ ಕುರಿತು ಪ್ರತಿಕ್ರಿಯಿಸಿದ ಸಚಿವ ಎಂಬಿ ಪಾಟೀಲ್, ಈ ನಿರ್ಧಾರದಿಂದ ಭಾರತದ ಐಟಿ ವಲಯ ಹಾಗೂ ಔಷಧ ತಯಾರಿಕಾ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ನೇರ ಕಾರಣ. ಟ್ರಂಪ್ನ್ನು ಒಲಿಸಿಕೊಳ್ಳಲು, ಅವರ ಚುನಾವಣಾ ಪ್ರಚಾರಕ್ಕೂ ಹೋಗಿ ಬೆಂಬಲ ನೀಡಿದ ಮೋದಿ ಈಗ ದೇಶವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಉತ್ಪಾದನಾ ವಲಯಕ್ಕೆ ಇದು ಭಾರೀ ಹೊಡೆತವಾಗಲಿದೆ. ಆದರೆ ದೇಶ ಎದುರಿಸುವ ಶಕ್ತಿ ಹೊಂದಿದೆ, ನಾವು ಒಟ್ಟಾಗಿ ಈ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಭೀಮಾ ನದಿಯಲ್ಲಿ ಭಾರೀ ಪ್ರಮಾಣದಲ್ಲಿ 3.5 ಲಕ್ಷ ಕ್ಯೂಸೆಕ್ಸ್ ನೀರು ಹರಿದು ಬಂದಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ಅವರು ತಿಳಿಸಿದರು. ಸಿಎಂ ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ನಿರ್ವಹಣಾ ಕ್ರಮಗಳನ್ನು ರೂಪಿಸಲಾಗಿದೆ. ಡಿಸಿ ಮತ್ತು ನೀರಾವರಿ ಇಲಾಖೆಯ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸುವತ್ತ ತೊಡಗಿದ್ದಾರೆ. ಅಗತ್ಯವಿದ್ದರೆ ನಾನು ಸ್ವತಃ ಪ್ರವಾಸ ಕೈಗೊಳ್ಳುತ್ತೇನೆ. ಪ್ರಕೃತಿಯ ಮುಂದೆ ನಾವು ಚಿಕ್ಕವರು, ಜಾಗರೂಕತೆಯೇ ಪರಿಹಾರ ಎಂದರು. ಪ್ರವಾಹದಿಂದ ಸಾಕಷ್ಟು ಬೆಳೆ ಹಾಗೂ ರಸ್ತೆ ಹಾನಿ ಉಂಟಾಗಿದೆ, ಆದರೆ ನಷ್ಟದ ಅಂದಾಜು ಇನ್ನೂ ಮಾಡಲಾಗಿಲ್ಲ ಎಂದು ಹೇಳಿದರು.
ಜಾತಿ ಸಮೀಕ್ಷೆಯ ಗೊಂದಲದ ಕುರಿತು ಮಾತನಾಡಿದ ಅವರು, ಇನ್ನೆರಡು ದಿನಗಳಲ್ಲಿ ಎಲ್ಲಾ ತಾಂತ್ರಿಕ ಸಮಸ್ಯೆಗಳು ಬಗೆಹರಿಯಲಿವೆ. ಸರ್ವರ್ ಹಾಗೂ ಆ್ಯಪ್ ಸಮಸ್ಯೆ, ಶಿಕ್ಷಕರ ಸಂಬಂಧಿತ ಅಡಚಣೆಗಳು ನಿವಾರಣೆಯಾಗುತ್ತವೆ. ಅಗತ್ಯವಿದ್ದರೆ ಗಡುವು ವಿಸ್ತರಣೆ ಮಾಡುವ ಬಗ್ಗೆ ಚರ್ಚೆ ನಡೆಸುತ್ತೇವೆ. ಆದರೆ ಗಡುವಿನೊಳಗೆ ಸಮೀಕ್ಷೆ ಪೂರ್ಣಗೊಳಿಸಲು ಪ್ರಯತ್ನಿಸುತ್ತೇವೆ. ಕೋರ್ಟ್ ಸಮೀಕ್ಷೆ ಕಡ್ಡಾಯವಲ್ಲ ಎಂದು ಹೇಳಿದೆ. ಆದರೂ ಜನರು ಸಮೀಕ್ಷೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರತಾಪ್ ಸಿಂಹ ನೀಡಿದ ಹೇಳಿಕೆಗಳಿಗೆ ತಿರುಗೇಟು ನೀಡಿದ ಎಂಬಿ ಪಾಟೀಲ್, ಪ್ರತಾಪ್ ಸಿಂಹ ಮೊದಲು ತಮ್ಮ ವಿಷಯಗಳನ್ನು ನೋಡಿಕೊಳ್ಳಲಿ. ಬಸವ ಧರ್ಮವನ್ನು ಯಾಕೆ ಬಸವಣ್ಣ ಸ್ಥಾಪಿಸಿದರು ಎಂಬುದನ್ನು ಅರ್ಥ ಮಾಡಿಕೊಂಡು ನಂತರ ಮಾತಾಡಲಿ” ಎಂದು ಕಿಡಿಕಾರಿದರು.
ಧಾರವಾಡದಲ್ಲಿ ಪೊಲೀಸ್ ಹುದ್ದೆಗಳ ನೇಮಕಾತಿ ವಿಳಂಬದ ಕುರಿತು ಮಾತನಾಡಿದ ಅವರು, “ಒಳಮೀಸಲಾತಿ ಸಂಬಂಧಿತ ಗೊಂದಲದಿಂದ ಸಮಸ್ಯೆ ಉಂಟಾಗಿದೆ. ಆದರೆ ಸರ್ಕಾರ ಶೀಘ್ರದಲ್ಲೇ ಬಗೆಹರಿಸಿ ನೇಮಕಾತಿ ಪ್ರಕ್ರಿಯೆ ನಡೆಸಲಿದೆ” ಎಂದು ಭರವಸೆ ನೀಡಿದರು.
50% ಸಚಿವರ ಬದಲಾವಣೆ ಕುರಿತ ಎಂಎಲ್ಸಿ ಸಲೀಂ ಅಹಮದ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ನಮ್ಮದು ಹೈಕಮಾಂಡ್ ಸಂಸ್ಕೃತಿ. ಇದರ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹೈಕಮಾಂಡ್ ಹಕ್ಕು. ನಾವು ಹೈಕಮಾಂಡ್ ತೀರ್ಮಾನಕ್ಕೆ ಬದ್ಧ” ಎಂದು ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ