
ಬೆಂಗಳೂರು (ಸೆ.08): ನಗರದಲ್ಲಿ ಮಳೆ ನೀರಿನ ಹರಿವಿನ ಬಗ್ಗೆ ವಿಸ್ತೃತ ಯೋಜನಾ ವರದಿ ಇಟ್ಟುಕೊಂಡು ಶಾಶ್ವತ ಪರಿಹಾರಕ್ಕಾಗಿ ಮಾಸ್ಟರ್ ಪ್ಲಾನ್ ರಚಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ಮಳೆಗೂ ಪ್ರವಾಹ ಪರಿಸ್ಥಿತಿ ಉಂಟಾಗುವುದನ್ನು ತಡೆಯಲು ಚಿಂತನೆ ನಡೆಸಲಾಗಿದೆ. ಮಳೆ ನಿಂತ ಬಳಿಕ ಬೆಂಗಳೂರಿನ ನೀರು ಹೇಗೆ ಹರಿಯುತ್ತದೆ. ನೀರಿನ ಪ್ರವೇಶ ಮತ್ತು ನಿರ್ಗಮನದ ಸ್ಥಳ ಗುರುತಿಸುತ್ತೇವೆ. ಜೊತೆಗೆ ಕಾಲುವೆಗಳ ಹರಿವು, ಒತ್ತುವರಿ ಇತ್ಯಾದಿಗಳನ್ನು ಪತ್ತೆ ಮಾಡಿ, ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಎಲ್ಲ ವ್ಯಾಲಿಗಳ ಮತ್ತು ಎಂಟು ವಲಯಗಳ ವಿಸ್ತೃತ ಯೋಜನಾ ವರದಿ(ಡಿಪಿಆರ್) ಆಧಾರವಾಗಿಟ್ಟುಕೊಂಡು ವಿಶೇಷ ಯೋಜನೆ ರೂಪಿಸುತ್ತೇವೆ ಎಂದು ಭರವಸೆ ನೀಡಿದರು.
ಮಳೆ ಹಾನಿ ನಿಯಂತ್ರಣಕ್ಕೆ ಬಿಬಿಎಂಪಿಯ ಮುಖ್ಯ ಆಯುಕ್ತರು, ಎಲ್ಲ ಎಂಜಿನಿಯರ್, ಸಿಬ್ಬಂದಿ 24/7 ಕೆಲಸ ಮಾಡುತ್ತಿದ್ದಾರೆ. 106 ಪ್ರವಾಹ ಪೀಡಿತ ಪ್ರದೇಶಗಳಿಗೆ ಶಾಸಕ ಅರವಿಂದ ಲಿಂಬಾವಳಿ ಹೋಗಿ ಪರಿಸ್ಥಿತಿ ನಿರ್ವಹಣೆ ಮಾಡಿದ್ದಾರೆ. ನಿರಂತರವಾಗಿ ಜೆಸಿಬಿ, ಹಿಟಾಚಿ ಬಳಕೆ ಮಾಡಿಕೊಂಡು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಬಿಬಿಎಂಪಿ ಅಧಿಕಾರಿ, ಸಿಬ್ಬಂದಿ ಸಮಾರೋಪಾದಿಯಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಬೆಂಗಳೂರಿನ ಮಳೆ ಪರಿಸ್ಥಿತಿ ಹಾಗೂ ಮೂಲ ಸೌಲಭ್ಯ ನಿರ್ವಹಣೆಗೆ ಈಗಾಗಲೇ .300 ಕೋಟಿ ಬಿಡುಗಡೆ ಮಾಡಿದ್ದು, ಅವಶ್ಯಕತೆ ಇದ್ದರೆ ಇನ್ನೂ ಹೆಚ್ಚು ಅನುದಾನ ಬಿಡುಗಡೆ ಮಾಡುತ್ತೇವೆ. ಮಹದೇವಪುರ ಭಾಗದಲ್ಲಿ ಹೆಚ್ಚು ಮಳೆ ಹಾನಿಯಾಗಿದ್ದು, ಅತಿ ಹೆಚ್ಚು ಹಣವನ್ನು ಒದಗಿಸುತ್ತೇನೆ ಎಂದರು.
Karnataka Rains: ವಿಶೇಷ ನೆರೆ ಪರಿಹಾರಕ್ಕೆ ಕೇಂದ್ರಕ್ಕೆ ರಾಜ್ಯ ಮನವಿ: ಸಿಎಂ ಬೊಮ್ಮಾಯಿ
ನಗರದಲ್ಲಿ ಸ್ವಲ್ಪ ಸಮಯದಲ್ಲಿ ಹೆಚ್ಚು ಮಳೆಯಾಗಿದೆ. ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಎಲ್ಲ 164 ಕೆರೆಗಳು ತುಂಬಿ ಹರಿಯುತ್ತಿದ್ದು, ಕೆಲವು ಕೆರೆಗಳು ಕೋಡಿ ಬಿದ್ದಿವೆ. ಈ ತರಹದ ಪರಿಸ್ಥಿತಿ ಇತಿಹಾಸದಲ್ಲಿ ಎಂದಿಗೂ ಆಗಿಲ್ಲ. ಯಾವುದೇ ಕೆರೆಗಳಿಗೆ ನೀರಿನ ಮಟ್ಟವನ್ನು ನಿಯಂತ್ರಿಸುವ ಬಾಗಿಲುಗಳು ಇಲ್ಲ (ಸ್ಲೂಸ್ ಗೇಟ್). ನಿರಂತರ ಮಳೆಯಿಂದ ಅಂತರ್ಜಲ ಮಟ್ಟಸುಧಾರಿಸಿದ್ದು ಈಗಿನ ಮಳೆಯಿಂದ ಎಲ್ಲ ಕೆರೆಗಳು ತುಂಬಿ ಹರಿಯುತ್ತಿವೆ. ಇಲ್ಲಿನ ಚರಂಡಿಗಳನ್ನು ಈ ಹಿಂದೆ ದೊಡ್ಡ ಪ್ರಮಾಣದ ನೀರು ಹರಿಯುವಷ್ಟುಸಾಮರ್ಥ್ಯದಲ್ಲಿ ವಿನ್ಯಾಸಗೊಳಿಸಿಲ್ಲ. ಹೀಗಾಗಿ ಇಂತಹ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.
ವಿಜಯಪುರ: ಸೆ. 9ರಂದು 1000 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಚಾಲನೆ, ಯತ್ನಾಳ
ನಗರದ ರಾಜಕಾಲುವೆ ಹಿಗ್ಗಾಮುಗ್ಗ ಒತ್ತುವರಿ: ರಾಜಕಾಲುವೆ ಹಲವಾರು ಕಡೆ ಅತಿಕ್ರಮಣಕ್ಕೆ ಒಳಗಾಗಿದೆ. 30 ಮೀಟರ್ ಇರಬೇಕಾದ ಕಡೆಗಳಲ್ಲಿ ಕೆಲವೆಡೆ 8 ಮೀಟರ್, ಇನ್ನು ಹಲವೆಡೆ 3 ಮೀಟರ್ಗೆ ಬಂದಿದೆ. ಮಹದೇವಪುರದ ಡಿಎನ್ಎ ಅಪಾರ್ಚ್ಮೆಂಟ್ ಸಮೀಪ 30 ಮೀಟರ್ ಇದ್ದ ರಾಜಕಾಲುವೆ ಮುಂದೆ 3 ಮೀಟರ್ ಆಗಿದೆ. ಪರಿಸ್ಥಿತಿ ಹೀಗಿರುವಾಗ ನೀರು ಸಮರ್ಪಕವಾಗಿ ಹರಿಯದೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದು, ಮಳೆ ನಿಂತ ಕೂಡಲೇ ಇದೆಲ್ಲಕ್ಕೂ ಶಾಶ್ವತ ಪರಿಹಾರ ಒದಗಿಸುವ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ