ತುಳುಕೂಟ, ಕಂಬಳ ಹಿನ್ನೆಲೆ ಬೃಹತ್‌ ಜಾಮ್, 3 ದಿನ ಬೆಂಗಳೂರಿನ ಈ ರಸ್ತೆಗಳಲ್ಲಿ ಓಡಾಡೋದೇ ಬೇಡ!

By Gowthami KFirst Published Nov 23, 2023, 11:47 AM IST
Highlights

ಅರಮನೆ ಮೈದಾನದಲ್ಲಿ ನ.25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ’ ಇದಕ್ಕೂ ಮುನ್ನ ನವೆಂಬರ್ 24ರಂದು ತುಳುಕೂಟ ನಡೆಯಲಿದ್ದು ಈ ಉತ್ಸವದ ಹಿನ್ನೆಲೆ ನಗರದಲ್ಲಿ ಮೂರು ದಿನ ಟ್ರಾಫಿಕ್ ಜಾಮ್ ಆಗಲಿದೆ.

ಬೆಂಗಳೂರು (ನ.23): ಅರಮನೆ ಮೈದಾನದಲ್ಲಿ ನ.25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ’ ಇದಕ್ಕೂ ಮುನ್ನ ನವೆಂಬರ್ 24ರಂದು ತುಳುಕೂಟ ನಡೆಯಲಿದ್ದು ಈ ಉತ್ಸವದ ಹಿನ್ನೆಲೆ ನಗರದಲ್ಲಿ ಮೂರು ದಿನ ಟ್ರಾಫಿಕ್ ಜಾಮ್ ಆಗಲಿದೆ. ಹೀಗಾಗಿ ಈ ಕೆಳಗಿನ ಮಾರ್ಗದಲ್ಲಿ ಟ್ರಾಫಿಕ್‌ ಜಾಮ್ ಆಗಲಿದ್ದು, ಪ್ರಯಾಣಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಕೋರಲಾಗಿದೆ.

ನವೆಂಬರ್ 24, 25 ಮತ್ತು 26 ರಂದು ಬಳ್ಳಾರಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಯಾಣಿಸದೇ ಇರುವುದು ಉತ್ತಮ. ಯಾಕೆಂದರೆ ನವೆಂಬರ್‌ 24ರಂದು ಅರಮನೆ ಮೈದಾನದಲ್ಲಿ ತುಳುಕೂಟ ನಡೆಯಲಿದೆ. ಬೆಂಗಳೂರು 50ರ ಸಂಭ್ರಮ ಅಂಗವಾಗಿ ವಿಶ್ವತುಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನ ನಡೆಯಲಿದ್ದು, ಧರ್ಮಸ್ಥಳ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಈ ಸಮ್ಮೇಳನಕ್ಕೆ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ.

ನಾಡಿದ್ದು ಮೊದಲ ಕಂಬಳಕ್ಕೆ ಬೆಂಗ್ಳೂರು ಸಜ್ಜು: ಸುದೀಪ್, ಶಿವಣ್ಣ, ಉಪ್ಪಿ ಭಾಗಿ

ನವೆಂಬರ್ 25 ಮತ್ತು 26 ರಂದು ಇದೇ ಬೆಂಗಳೂರು ಅರಮನೆ ಮೈದಾನದಲ್ಲಿ ‘ಬೆಂಗಳೂರು ಕಂಬಳ’ ಉತ್ಸವ ನಡೆಯಲಿದ್ದು ಎರಡೂ ದಿನಗಳನ್ನು ಒಟ್ಟುಗೂಡಿಸಿ ಸುಮಾರು 15 ಲಕ್ಷ ಜನರು ಕಂಬಳ ವೀಕ್ಷಿಸುವ ನಿರೀಕ್ಷೆಯಿದೆ.

ಹೀಗಾಗಿ  ಅರಮನೆ ಮೈದಾನದ ಸುತ್ತಮುತ್ತಲಿನ ಪ್ರದೇಶಗಳಾದ ಗುಟ್ಟಹಳ್ಳಿ, ಸದಾಶಿವನಗರ, ವೈಯಾಲಿಕಾವಲ್, ನ್ಯೂ ಬಿಇಎಲ್ ರಸ್ತೆ, ಮೇಖ್ರಿ ವೃತ್ತ, ಜಯಮಹಲ್ ಮುಖ್ಯರಸ್ತೆ, ಕಂಟೋನ್ಮೆಂಟ್ ಸ್ಟೇಷನ್, ಹೆಬ್ಬಾಳ, ಗಂಗೇನಹಳ್ಳಿ, ಬಳ್ಳಾರಿ ರಸ್ತೆ ಇತ್ಯಾದಿ ಕಡೆ  ಭಾರಿ ಟ್ರಾಫಿಕ್ ಜಾಮ್ ಆಗಲಿದೆ. ಆದ್ದರಿಂದ,   ಮೂರು ದಿನ ಅಂದರೆ ನವೆಂಬರ್ 24, 25, 26 ರಂದು ಬಳ್ಳಾರಿ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸದೇ ಇರುವುದು ಉತ್ತಮ.

ಬೆಂಗಳೂರು ಕಂಬಳದಲ್ಲಿ ಅಪ್ಪು ಸ್ಮೃತಿ: ಕಂಬಳ ಸಮಿತಿಯ ನಿರ್ಧಾರಕ್ಕೆ ಪುನೀತ್ ಅಭಿಮಾನಿಗಳು ಫುಲ್‌ ಖುಷಿ..!

200 ಜೊತೆ ಕೋಣಗಳು ಕಂಬಳದಲ್ಲಿ ಭಾಗವಹಿಸಲಿದ್ದು, ಕೋಣಗಳನ್ನು ತರುವ ವಾಹನ ಸೇರಿ 300ಕ್ಕೂ ಹೆಚ್ಚು ವಾಹನಗಳು ಕರಾವಳಿಯಿಂದ ಬೆಂಗಳೂರಿಗೆ ಬರಲಿದೆ. ಕರಾವಳಿಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಹುಲಿ ವೇಷದ ನೃತ್ಯ, ಸಂಸ್ಕೃತಿ, ಕಲೆಗಳ ಪ್ರದರ್ಶನ, ಚಿತ್ರ ಮತ್ತು ಗೊಂಬೆ ಪ್ರದರ್ಶನ, ಇರಲಿದೆ. ಕರಾವಳಿಯ ವಿಶೇಷ ತಿಂಡಿ-ತಿನಿಸುಗಳ 80 ಸ್ಟಾಲ್‌ಗಳು ಇರಲಿವೆ.

ಬೆಂಗಳೂರಿನತ್ತ ಕೋಣಗಳು:
ಇದೇ ವೀಕೆಂಡ್ ನಲ್ಲಿ ಬೆಂಗಳೂರಿನಲ್ಲಿ ಕಂಬಳ ಹಿನ್ನೆಲೆ, ಇಂದು ಕರಾವಳಿ ಭಾಗದಿಂದ ಬೆಂಗಳೂರಿನತ್ತ ಕಂಬಳ ಕೋಣಗಳ ಪ್ರಯಾಣ ಆರಂಭವಾಗಲಿದೆ. ಉಪ್ಪಿನಂಗಡಿಯಿಂದ 10-11 ಗಂಟೆಗೆ ಸುಮಾರು 200 ಜೊತೆ ಕೋಣಗಳು ಪ್ರಯಾಣ ಆರಂಭಿಸಲಿವೆ. ಇದರ ಜೊತೆಗೆ  ಕೋಣಗಳ ಯಜಮಾನರು, ಕೆಲಸಗಾರರು ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 1:30 ಸುಮಾರಿಗೆ ಕೋಣಗಳು ಹಾಸನ ತಲುಪಲಿವೆ. 

ಹಾಸನದಲ್ಲಿ ತಾತ್ಕಾಲಿಕ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ 4-5 ಗಂಟೆಗೆ ಬೆಂಗಳೂರಿನತ್ತ ಬೃಹತ್ ಜಾಥಾದ ಮೂಲಕಕಂಬಳ ಕೋಣಗಳು  ಪ್ರಯಾಣ ಬೆಳೆಸಲಿದೆ. ಹಾಸನ-ಬೆಂಗಳೂರು ಮಾರ್ಗ ಮಧ್ಯೆ ಕರಾವಳಿ ಮೂಲದ ಸಂಘಟನೆಗಳು ಕೋಣಗಳಿಗೆ ಸ್ವಾಗತ ಕೋರಲಿವೆ. ರಾತ್ರಿ 11 ಗಂಟೆ ಸುಮಾರಿಗೆ ಕೋಣಗಳು  ರಾಜಧಾನಿ ಪ್ರವೇಶಿಸಲಿದೆ ಎಂದು ತಿಳಿದುಬಂದಿದೆ.

click me!