
ರಾಯಚೂರು, (ಜು.30): ಕಲಿಯುಗ ಕಾಮಧೇನು ಎಂದೇ ಖ್ಯಾತವಾದ ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಹುಂಡಿಗೆ ಜುಲೈ ತಿಂಗಳಲ್ಲಿ ಭಕ್ತರಿಂದ ದಾಖಲೆಯ ಕಾಣಿಕೆ ಸಂಗ್ರಹವಾಗಿದೆ. ಕೇವಲ 35 ದಿನಗಳಲ್ಲಿ ರಾಯರ ಹುಂಡಿಗೆ 5 ಕೋಟಿ 46 ಲಕ್ಷ 6 ಸಾವಿರ 555 ರೂಪಾಯಿ ಜಮಾ ಆಗಿದ್ದು, ಈ ವರ್ಷದಲ್ಲಿ ಇದುವರೆಗಿನ ಅತೀ ಹೆಚ್ಚು ಕಾಣಿಕೆಯಾಗಿದೆ. ಜೊತೆಗೆ, ಭಕ್ತರು 127 ಗ್ರಾಂ ಚಿನ್ನ ಮತ್ತು 1,820 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ ಎಂದು ಮಂತ್ರಾಲಯ ಮಠದ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.
ಶ್ರೀಮಠದಲ್ಲಿ ಬೆಳಗ್ಗೆಯಿಂದ ಆರಂಭವಾದ ಹುಂಡಿ ಎಣಿಕೆ ಕಾರ್ಯ ಸಂಜೆ 6 ಗಂಟೆಯ ವೇಳೆಗೆ ಮುಕ್ತಾಯಗೊಂಡಿತು. ಈ ಬಾರಿಯ ಕಾಣಿಕೆಯು ಜೂನ್ ತಿಂಗಳ 5 ಕೋಟಿ 28 ಲಕ್ಷ 39,538 ರೂಪಾಯಿಯ ದಾಖಲೆಯನ್ನು ಮುರಿದಿದೆ. ಕರ ಸೇವಕರು, ಭಕ್ತರು ಮತ್ತು ಮಠದ ಸಿಬ್ಬಂದಿ ಈ ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರು.
ತುಂಗಾತೀರದಲ್ಲಿ ನೆಲೆಸಿರುವ ರಾಯರ ದರ್ಶನಕ್ಕಾಗಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಕಾಣಿಕೆಯ ಮೊತ್ತವು ಶ್ರೀಮಠದ ಜನಪ್ರಿಯತೆ ಮತ್ತು ಭಕ್ತರ ಶ್ರದ್ಧೆಯನ್ನು ತೋರಿಸುತ್ತದೆ. ಈ ಕಾಣಿಕೆಯು ಶ್ರೀಮಠದ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ ಎಂದು ರಾಯರ ಮಠದ ಆಡಳಿತ ಮಂಡಳಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ