
ಮಂಗಳೂರು: ಈದ್ ಹಬ್ಬದ ದಿನವೇ ಮಂಗಳೂರಿನಲ್ಲಿ ಯುವಕ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಯುವಕ ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಾಯಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಮಂಗಳೂರಿನ ಮೂಡುಶೆಡ್ಡೆಯ ಎದುರುಪದವು ನಿವಾಸಿ 22 ವರ್ಷದ ಮೊಹಮ್ಮದ್ ಆಶಿಕ್ ಮಾರ್ಚ್ 21ರಂದು ಸಾವಿಗೆ ಶರಣಾಗಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಯುವಕನ ಕುಟುಂಬದವರ ದೂರಿನ ಮೇರೆಗೆ ಆತ ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.
ಪ್ರೀತಿಸಿದ ಯುವತಿಯಿಂದ ಅವಮಾನವಾಗಿ ಯುವಕ ಸಾವಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಆತ್ಮ*ಹತ್ಯೆ ಪ್ರಕರಣ ಎಂದು ಭಾವಿಸಲಾಗಿತ್ತು. ಆದ್ರೆ ಆಶಿಕ್ ಮೊಬೈಲ್ ಪರಿಶೀಲಿಸಿದಾಗ ಸಾವಿನ ಹಿಂದಿನ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಸಾವಿಗೂ ಮೊದಲು ಯುವತಿ ಮಾನಸಿಕ ಕಿರುಕುಳ ನೀಡಿದ ವಿಚಾರ ಬೆಳಕಿಗೆ ಬಂದಿದೆ.
ಮೊಹಮ್ಮದ್ ಆಶಿಕ್ ಕಾಲೇಜು ಓದುತ್ತಿರುವಾಗಲೇ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಮಂಗಳೂರಿನ ಉಳ್ಳಾಲ ಮೂಲದ ಆ ಯುವತಿ ಹಾಗೂ ಅಶಿಕ್ ಪ್ರೀತಿಸುತ್ತಿರುವ ವಿಚಾರದ ಬಗ್ಗೆ ಎರಡು ಕುಟುಂಬಕ್ಕೂ ಮಾಹಿತಿ ಇತ್ತು. ಆದರೆ ಕೆಲ ಸಮಯದಿಂದ ಆ ಯುವತಿ ಅಶಿಕ್ನಿಂದ ದೂರವಾಗಿದ್ದಳು ಎಂದು ಅಶಿಕ್ ಕುಟುಂಬದವರು ಆರೋಪಿಸಿದ್ದಾರೆ.
ಸಾವಿಗೂ ಮುನ್ನ ಅಶಿಕ್ ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಯುವತಿ ನೀನು ಎಲ್ಲಿಯಾದರೂ ಸತ್ತು ಹೋಗು ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹದ ಕೂದಲನ್ನು ತೆಗೆಯಲು ಬರುತ್ತೇವೆ ಎಂದು ಅವಾಚ್ಯವಾಗಿ ನಿಂದಿಸಿದ್ದಾಳೆ ಈ ಬಗ್ಗೆ ಸಾವಿಗೂ ಮುನ್ನ ಇಬ್ಬರ ನಡುವೆ ನಡೆದಿರುವ ವಾಟ್ಸಪ್ ಚಾಟ್ನಲ್ಲಿ ಬಹಿರಂಗವಾಗಿದೆ. ಯುವತಿ ಅಶಿಕ್ಗೆ ಅವಾಚ್ಯ ಶಬ್ದಗಳು, ಅಸಹ್ಯ ಮತ್ತು ಹೊಲಸು ಪದಗಳಿಂದ ಬೈದಿರುವ ವಾಟ್ಸಾಪ್ ಚಾಟ್ ಮೊಬೈಲ್ ನಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ವಿಮಾನಕ್ಕೆ ಪಾಕಿಸ್ತಾನದ ಎಫ್16 ವಿಮಾನದ ಬೆಂಗಾವಲು
ಇದರಿಂದ ಆಶಿಕ್ ಮಾನಸಿಕವಾಗಿ ಮನನೊಂದು ಯುವತಿಯ ಪ್ರಚೋದನೆಯಿಂದ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂದು ಯುವಕನ ಕುಟುಂಬದವರು ಆರೋಪಿಸಿದ್ದಾರೆ. ವಾಟ್ಸಾಪ್ನಲ್ಲಿ ವಾಗ್ವಾದದ ನಂತರ ಅದೇ ದಿನ ರಾತ್ರಿ ಅಶಿಕ್ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.
ಯುವತಿ ಪ್ರೀತಿಯ ನಾಟಕವಾಡಿ ಅಶಿಕ್ನಿಂದ ಹಲವಾರು ಉಡುಗೊರೆ ಪಡೆದು ಖರ್ಚು ವೆಚ್ಚ ಮಾಡಿಸಿ ಮಾನಸಿಕವಾಗಿ ಹಿಂಸೆ ನೀಡಿದ್ದಾಳೆ. ಹೀಗಾಗಿ ಯುವತಿ ಹಾಗೂ ಆತ್ಮ*ಹತ್ಯೆಗೆ ಪ್ರಚೋದನೆ ನೀಡಿದವರ ಮೇಲೆ ಕಾನೂನು ಕ್ರಮ ಕೈಗೊಳುವಂತೆ ಯುವಕನ ತಂದೆ ದೂರು ನೀಡಿದ್ದಾರೆ. ಅದರಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಯುವತಿ ಆಕೆಯ ತಾಯಿ ಸೇರಿದಂತೆ ಒಟ್ಟು ಮೂವರ ವಿರುದ್ಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 108, 352,351(3),3(5) ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸೌದಿಗೆ ಪಾಕ್ನಿಂದ 13,000 ಸೈನಿಕರು, 18 ಜೆಟ್ ರವಾನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ