
ಬೆಂಗಳೂರು (ಫೆ.18): ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕರಾಗಿದ್ದಾಗ (ಸಾರ್ವಜನಿಕ ಮಾಹಿತಿ ಅಧಿಕಾರಿ) ಮಾಹಿತಿಯೊಂದನ್ನು ನೀಡಲು ನಿರಾಕರಿಸಿದ್ದಕ್ಕೆ ಕೇಂದ್ರ ಮಾಹಿತಿ ಹಕ್ಕುಗಳ ಆಯೋಗ ತಮಗೆ 25 ಸಾವಿರ ರು. ದಂಡ ವಿಧಿಸಿದ್ದ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಸಲ್ಲಿಸಿದ್ದ ಮೇಲ್ಮನವಿಯನ್ನು ಕಸಾಪ ಹಾಲಿ ಅಧ್ಯಕ್ಷ ಮಹೇಶ್ ಜೋಶಿ ಮಂಗಳವಾರ ಹಿಂಪಡೆದುಕೊಂಡಿದ್ದಾರೆ.
ಕೇಂದ್ರ ಮಾಹಿತಿ ಹಕ್ಕು ಆಯೋಗದ ಆದೇಶ ಮತ್ತು ಅದನ್ನು ಪುರಸ್ಕರಿಸಿದ ಹೈಕೋರ್ಟ್ ಏಕ ಸದಸ್ಯ ಪೀಠದ ತೀರ್ಪು ಪ್ರಶ್ನಿಸಿ ಮಹೇಶ್ ಜೋಶಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ನ್ಯಾಯಮೂರ್ತಿ ಅನು ಶಿವರಾಮನ್ ಮತ್ತು ನ್ಯಾಯಮೂರ್ತಿ ವಿಜಯ ಕುಮಾರ ಎ.ಪಾಟೀಲ ಅವರಿದ್ದ ವಿಭಾಗೀಯ ಪೀಠದ ಮುಂದೆ ಮಂಗಳವಾರ ವಿಚಾರಣೆಗೆ ಬಂದಿತ್ತು.
ಮೇಲ್ಮನವಿ ಪರಿಶೀಲಿಸಿದ ನ್ಯಾಯಪೀಠವು ಮಹೇಶ್ ಜೋಶಿ ಅವರ ಪರ ವಕೀಲರನ್ನು ಉದ್ದೇಶಿಸಿ, ‘ನಿಮ್ಮ ಈ ಮೇಲ್ಮನವಿ ವಿಚಾರಣೆಗೆ ಯೋಗ್ಯವಾಗಿಲ್ಲ. ಹಾಗಾಗಿ, ಮೇಲ್ಮನವಿ ಹಿಂಪಡೆಯಲು ಅವಕಾಶ ನೀಡುತ್ತಿದ್ದೇವೆ. ಒಂದೊಮ್ಮೆ ವಾದ ಮುಂದುವರಿಸಲು ಬಯಸಿದರೆ, ಅದಕ್ಕೆ ಅವಕಾಶ ನೀಡಲಾಗುವುದು. ವಿಚಾರಣೆ ವೇಳೆ ಮೇಲ್ಮನವಿ ಕುಲ್ಲಕ ಎಂಬುದಾಗಿ ಕಂಡುಬಂದರೆ, ಒಂದು ಲಕ್ಷ ರು. ದಂಡ ವಿಧಿಸಲಾಗುವುದು’ ಎಂಬ ಮೌಖಿಕ ಎಚ್ಚರಿಸಿತು.
ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಮಹೇಶ್ ಜೋಶಿ ಪರ ವಕೀಲರು, ಮೇಲ್ಮನವಿ ಹಿಂಪಡೆಯುವುದಾಗಿ ತಿಳಿಸಿದರು. ಇದರಿಂದ ಮೇಲ್ಮನವಿ ವಜಾಗೊಳಿಸಿ ವಿಭಾಗೀಯ ಪೀಠ ಆದೇಶಿಸಿತು. ಹಾಗಾಗಿ, 25 ಸಾವಿ ರು. ದಂಡ ಪಾವತಿಸುವ ಅನಿವಾರ್ಯತೆ ಮಹೇಶ್ ಜೋಶಿ ಅವರಿಗೆ ಎದುರಾಗಿದೆ.
ಬೆಂಗಳೂರು ದೂರದರ್ಶನಕ್ಕೆ ಸಂಬಂಧಿಸಿ ಕೆಲ ಮಾಹಿತಿ ಕೋರಿ ಬಿ.ಅಶೋಕ್ ಮತ್ತು ಎನ್.ಕೆ.ಮೋಹನ್ ರಾಮ್ ಎಂಬುವವರು 2008-09ರ ಅವಧಿಯಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ದೂರದರ್ಶನ ಕೇಂದ್ರದ ಅಂದಿನ ಸಾರ್ವಜನಿಕ ಮಾಹಿತಿ ಅಧಿಕಾರಿ/ಉಪ ಮಹಾ ನಿರ್ದೇಶಕರಾಗಿದ್ದ ಮಹೇಶ್ ಜೋಶಿ, ಮಾಹಿತಿ ನೀಡಲು ನಿರಾಕರಿಸಿದ್ದರು. ಜೊತೆಗೆ, ಮಾಹಿತಿ ಒದಗಿಸಲು 50,160 ರು. ಪಾವತಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದರು. ಅದನ್ನು ಅರ್ಜಿದಾರರು ಕೇಂದ್ರ ಮಾಹಿತಿ ಹಕ್ಕು ಆಯೋಗದಲ್ಲಿ ಪ್ರಶ್ನಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ