ಶಾಸಕರ ಫಾರಿನ್ ಟೂರ್ ಖಾಸಗಿ ಎಂದ ಯತೀಂದ್ರ; ಇಲ್ಲ ಕಣಣ್ಣೋ ಇದು ಸರ್ಕಾರದ ಇಲಾಖಾ ಅಧ್ಯಯನ ಎಂದ ಪ್ರದೀಪ್ ಈಶ್ವರ!

Published : Feb 17, 2026, 03:27 PM IST
Yathindra Siddaramaiah and Pradeep Eshwar

ಸಾರಾಂಶ

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಗೊಂದಲ ಸೃಷ್ಟಿಯಾಗಿದೆ. ಇದು ವೈಯಕ್ತಿಕ ಪ್ರವಾಸ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರೆ, ಇದು ಮಜಾ ಮಾಡುವುದಕ್ಕಲ್ಲ, ಇಲಾಖೆಯ ಅಧ್ಯಯನ ಪ್ರವಾಸ ಎಂದು ಶಾಸಕ ಪ್ರದೀಪ್ ಈಶ್ವರ್ ಸಮರ್ಥಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ (ಫೆ.17): ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ವಿಚಾರ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ, ಇದೊಂದು ವೈಯಕ್ತಿಕ ಪ್ರವಾಸವೆಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ನಾವ್ಯಾರೂ ಮಜಾ ಮಾಡೋದಕ್ಕೆ ವಿದೇಶಕ್ಕೆ ಹೋಗ್ತಿಲ್ಲ, ಸರ್ಕಾರದ ಇಲಾಖೆಯ ಅಧ್ಯಯನ ಪ್ರವಾಸಕ್ಕೆಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದ್ದಾರೆ. ಇಲ್ಲಿ ಯಾರ ಮಾತನ್ನು ನಂಬಬೇಕೋ, ಯಾರ ಮಾತನ್ನು ಬಿಡಬೇಕು ಎಂಬುದೇ ಓಟು ಹಾಕಿ ಗೆಲ್ಲಿಸಿದ ಹಾಗೂ ಟ್ಯಾಕ್ಸ್ ಮೂಲಕ ಹಣ ಪಾವತಿಸುತ್ತಿರುವ ರಾಜ್ಯದ ಜನತೆಗೆ ಅರ್ಥವಾಗುತ್ತಿಲ್ಲ.

ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, 'ಶಾಸಕರು ವಿದೇಶಕ್ಕೆ ತೆರಳುತ್ತಿರುವುದು ಕೇವಲ ಮಜಾ ಮಾಡುವುದಕ್ಕಲ್ಲ, ಬದಲಾಗಿ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಧ್ಯಯನ ಪ್ರವಾಸಕ್ಕಾಗಿ' ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. ವಿಪಕ್ಷ ನಾಯಕರು ವಿದೇಶ ಪ್ರವಾಸದ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದ್ದಾರೆ. ಇದು ಇಲಾಖೆಯಿಂದ ಅಧಿಕೃತವಾಗಿ ನಡೆಯುತ್ತಿರುವ ಅಧ್ಯಯನ ಪ್ರವಾಸ. ಈ ಪ್ರವಾಸಕ್ಕೆ ಯಾರು ಬೇಕಾದರೂ ಹೋಗಬಹುದಿತ್ತು, ಇಲ್ಲಿ ಯಾವುದೇ ನಿರ್ಬಂಧವಿರಲಿಲ್ಲ. ಮುಖ್ಯವಾಗಿ ಇಲ್ಲಿ 'ಆ ಗುಂಪು', 'ಈ ಗುಂಪು' ಎನ್ನುವ ಭೇದಭಾವವಿಲ್ಲ. ಎಲ್ಲರೂ ಒಗ್ಗಟ್ಟಿನಿಂದಲೇ ತೆರಳುತ್ತಿದ್ದಾರೆ' ಎಂದು ಹೇಳಿದರು.

ನಾಯಕತ್ವ ಬದಲಾವಣೆ ಬಗ್ಗೆ ಮೌನ ಮುರಿದ ಶಾಸಕ:

ಕಳೆದ ಕೆಲವು ದಿನಗಳಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಕೇಳಿಬರುತ್ತಿರುವ 'ನಾಯಕತ್ವ ಬದಲಾವಣೆ' ಅಥವಾ 'ಪವರ್ ಶೇರಿಂಗ್' ವಿಚಾರದ ಬಗ್ಗೆಯೂ ಪ್ರದೀಪ್ ಈಶ್ವರ್ ಮಾತನಾಡಿ, 'ನಾಯಕತ್ವ ಬದಲಾವಣೆಯ ಬಗ್ಗೆ ಸಣ್ಣಮಟ್ಟದ ಚರ್ಚೆಗಳು ನಡೆಯುತ್ತಿರುವುದು ನಿಜ. ಒಂದು ದೊಡ್ಡ ಪಕ್ಷ ಎಂದ ಮೇಲೆ ಅಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಇದನ್ನು ದೊಡ್ಡ ಹಗರಣ ಎನ್ನುವಂತೆ ಬಿಂಬಿಸುವುದು ತಪ್ಪು. ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತ್ಯಂತ ಅನ್ಯೋನ್ಯವಾಗಿದ್ದಾರೆ. ಅವರ ನಡುವೆ ಯಾವುದೇ ದೊಡ್ಡ ಮಟ್ಟದ ವೈಮನಸ್ಸಿಲ್ಲ. ಇಬ್ಬರೂ ಜೊತೆಯಾಗಿ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ನಮ್ಮ ಹೈಕಮಾಂಡ್. ದೆಹಲಿ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅದಕ್ಕೆ ನಾವೆಲ್ಲರೂ ಬದ್ಧರಾಗಿರುತ್ತೇವೆ' ಎಂದು ಹೈಕಮಾಂಡ್ ಮೇಲಿರುವ ವಿಶ್ವಾಸವನ್ನು ಪುನರುಚ್ಚರಿಸಿದರು.

ವಿರೋಧ ಪಕ್ಷಗಳಿಗೆ ಟಾಂಗ್:

ಬಿಜೆಪಿ ಮತ್ತು ಜೆಡಿಎಸ್ ನಾಯಕರ ಟೀಕೆಗಳಿಗೆ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, 'ವಿರೋಧ ಪಕ್ಷದವರಿಗೆ ಮಾಡಲು ಕೆಲಸವಿಲ್ಲದೆ ನಮ್ಮ ಶಾಸಕರ ವೈಯಕ್ತಿಕ ಮತ್ತು ಅಧಿಕೃತ ಪ್ರವಾಸಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ. ಸರ್ಕಾರ ಸುಭದ್ರವಾಗಿದೆ ಮತ್ತು ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನಗೆದ್ದಿದೆ. ಇದನ್ನು ಸಹಿಸಲಾಗದೆ ಇಂತಹ ಚರ್ಚೆಗಳನ್ನು ಮುನ್ನೆಲೆಗೆ ತರುತ್ತಿದ್ದಾರೆ' ಎಂದು ಕಿಡಿಕಾರಿದರು.

ಯಾವುದನ್ನು ನಂಬಬೇಕೋ ಸಿದ್ದರಾಮೇಶ್ವರ!

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, 'ರಾಜ್ಯದಲ್ಲಿ ಸಚಿವರು ಮತ್ತು ಶಾಸಕರು ತಮ್ಮ ಸ್ವಂತ ಹಣದಲ್ಲಿ ವಿದೇಶಕ್ಕೆ ಹೋಗುತ್ತಿದ್ದಾರೆ. ವೈಯಕ್ತಿಕ ಪ್ರವಾಸ ಎಂದ ಮೇಲೆ ಅದನ್ನು ಹೋಗಬೇಡಿ ಎಂದು ಹೇಳುವುದಕ್ಕೆ ಹೇಗೆ ಸಾಧ್ಯ? ಪ್ರವಾಸಕ್ಕೂ ಪ್ರಸ್ತುತ ರಾಜಕೀಯ ಬೆಳವಣಿಗೆಗಳಿಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಯಾರೂ ಪ್ರವಾಸಕ್ಕೆ ಕರೆದಿಲ್ಲ, ನಾನು ಹೋಗುತ್ತಲೂ ಇಲ್ಲ' ಎಂದು ಹೇಳಿದ್ದರು. ಆದರೆ, ಇದೀಗ ಶಾಸಕ ಪ್ರದೀಪ್ ಈಶ್ವರ್ ಅವರು, ಸರ್ಕಾರದ ಇಲಾಖಾ ಅಧ್ಯಯನಕ್ಕೆ ಪ್ರವಾಸ ಹೋಗುತ್ತಿರುವುದಾಗಿ ಹೇಳುವ ಮೂಲಕ ರಾಜ್ಯ ಸರ್ಕಾರದ ನಾಯಕರ ಪ್ರವಾಸದ ಬಗ್ಗೆ ಗೊಂದಲ ಹುಟ್ಟುವಂತೆ ಮಾಡಿದ್ದಾರೆ.

ಒಟ್ಟಾರೆಯಾಗಿ, ಕಾಂಗ್ರೆಸ್ ಶಾಸಕರ ವಿದೇಶ ಯಾತ್ರೆ ಮತ್ತು ರಾಜ್ಯದ ನಾಯಕತ್ವದ ಕುರಿತು ಹರಡಿರುವ ಗೊಂದಲಗಳಿಗೆ ಪ್ರದೀಪ್ ಈಶ್ವರ್ ಅವರು ತಮ್ಮದೇ ಶೈಲಿಯಲ್ಲಿ ಉತ್ತರಿಸುವ ಮೂಲಕ ಕಾರ್ಯಕರ್ತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಜ್ಯದ ಕೈ ಶಾಸಕರು ಹಾಗೂ ಸಚಿವರ ವಿದೇಶ ಪ್ರವಾಸ: ಎಲ್ಲರ ಗುಟ್ಟು ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ!
ಬೆಂಗಳೂರಿನ ಹಲವೆಡೆ 50 ಕೋಟಿಯ ಡ್ರಗ್ಸ್ ಬೇಟೆ: ವಿದೇಶಿ ಫುಟ್ಬಾಲ್ ಆಟಗಾರ ಸೇರಿ ಕೇರಳಿಗರು ಅರೆಸ್ಟ್!