ಸಿದ್ದಗಂಗಾ ಶಿಕ್ಷಣ ಸಂಸ್ಥೆ, ಮಠಕ್ಕೆ 2021ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ

By Suvarna NewsFirst Published Sep 29, 2021, 6:42 PM IST
Highlights

* 2020 ಮತ್ತು 2021ನೇ ಸಾಲಿನ  ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ
* ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನೀಡುವ ಪ್ರಶಸ್ತಿ
* ಕೋವಿಡ್- 19ರ ಹಿನ್ನಲೆಯಲ್ಲಿ ಕಳೆದ ವರ್ಷದ ಪ್ರಶಸ್ತಿಯನ್ನು ಸರ್ಕಾರ ಪ್ರಕಟಿಸಿರಲಿಲ್ಲ..

ಬೆಂಗಳೂರು, (ಸೆ.29): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ 2020 ಮತ್ತು 2021 ಎರಡೂ ವರ್ಷದ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಯನ್ನು (Mahatma Gandhi Seva Award) ಪ್ರಕಟಿಸಿದೆ. 

ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಮೀರಾಬಾಯಿ ಕೊಪ್ಪಿಕರ್​ಗೆ 2020ನೇ ಸಾಲಿನ ಪ್ರಶಸ್ತಿ ಲಭಿಸಲಿದ್ರೆ, ಸಿದ್ದಗಂಗಾ(siddaganga) ಶಿಕ್ಷಣ ಸಂಸ್ಥೆ, ಮಠ 2021ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆಯಾಗಿದೆ.  ಕೊರೋನಾ ಹಿನ್ನೆಲೆ ಕಳೆದ ವರ್ಷ ಪ್ರಶಸ್ತಿಯನ್ನು ನೀಡಿರಲಿಲ್ಲ. ಹೀಗಾಗಿ ಈ ಬಾರಿ ಎರಡು ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ.

ರಾಜ್ಯೋತ್ಸವ ಪ್ರಶಸ್ತಿಗೆ ಈ ಸಲ ಜನರಿಂದಲೇ ಸಾಧಕರ ಹೆಸರು

ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪುರಸ್ಕೃತರಿಗೆ ತಲಾ 5 ಲಕ್ಷ ರೂಪಾಯಿ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುತ್ತದೆ.

ಕರ್ನಾಟಕ ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಅಶೋಕ್ ಬಂಗಾರಪ್ಪ ಹಿಂಚಿಗೇರಿ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು. ಆಯ್ಕೆ ಸಮಿತಿಯು 2020ರ ಸಾಲಿಗೆ ಬಾಗಲಕೋಟೆ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ಮೀರಾಬಾಯಿ ಕೊಪ್ಪಿಕರ್ ಹಾಗೂ 2021 ನೇ ಸಾಲಿಗೆ ಶ್ರೀ ಸಿದ್ಧಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ಧಗಂಗಾ ಮಠವನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಕನ್ನಡ ಪ್ರಭ, ಸುವರ್ಣ ನ್ಯೂಸ್ ಸಂಪಾದಕ ರವಿ ಹೆಗಡೆಗೆ ಡಿವಿಜಿ ಪ್ರಶಸ್ತಿ

ಮೀರಾಬಾಯಿ ಕೊಪ್ಪಿಕರ್ ಪರಿಚಯ

ಶ್ರೀಮತಿ ಮೀರಾಬಾಯಿ ಕೊಪ್ಪಿಕರ್, ಹುಬ್ಬಳ್ಳಿಯ ಅತ್ಯಂತ ಶ್ರೀಮಂತರಾಗಿದ್ದ ಕೊಪ್ಪಿಕರ ವಂಶದ ಕುಡಿ.  ಸದ್ಯ ಇವರಿಗೆ 96 ವರ್ಷ.  ಸದ್ಯ ಮುಧೋಳದಲ್ಲಿರುವ ವಾತ್ಸಲ್ಯ ಧಾಮದಲ್ಲಿ ವಾಸ್ತವ್ಯ ಮಾಡುತ್ತಿದ್ದಾರೆ.  ಪಕ್ಕಾ ಗಾಂಧಿವಾದಿಯಾಗಿದ್ದ ಇವರು ಇತ್ತೀಚಿನವರೆಗೂ ತಾವೇ ನೂಲು ನೇಯ್ದು ಅದರಲ್ಲಿ ವಸ್ತ್ರವನ್ನು ಮಾಡಿಕೊಳ್ಳುತ್ತಿದ್ದರು.  ಈಗ ವಯಸ್ಸಾದ ನಿಮಿತ್ತ ನೇಯ್ಗೆ ಮಾಡುತ್ತಿಲ್ಲ.

ಗಾಂಧಿವಾದಿಗಳಾಗಿದ್ದ ಶ್ರೀಮತಿ ಮೀರಾಬಾಯಿ ಕೊಪ್ಪಿಕರ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದರು.  ಸಬರಮತಿ ಆಶ್ರಮದಲ್ಲಿ ಇದ್ದರು. ವಿನೋಬಾ ಭಾವೆಯವರ ಜೊತೆಗೂಡಿ ಭೂದಾನ ಚಳವಳಿಯಲ್ಲಿ ಪಾಲ್ಗೊಂಡು, ಕರ್ನಾಟಕದಿಂದ ಒಟ್ಟು 40 ಸಾವಿರ ಎಕರೆ ಭೂಮಿಯನ್ನು ದಾನ ಮಾಡಿಸುವಲ್ಲಿ ಯಶಸ್ವಿಯಾದವರು.

ಯಾರಿಂದಲೂ ಏನನ್ನೂ ಅಪೇಕ್ಷೆ ಇಲ್ಲ. ಇವರ ಮೂಲ ಧ್ಯೇಯ “ಸಮಾಜಕ್ಕೆ ಏನನ್ನಾದರೂ ಕೊಡಬೇಕು.  ಏನನ್ನೂ ಬಯಸಬಾರದು” ಎಂಬುದು.  ಸಾವಯವ ಕೃಷಿ ಮಾಡುತ್ತಿದ್ದ ಇವರು ತಾವೇ ಬೆಳೆದ ವಸ್ತುಗಳನ್ನು ಮಾರಿ ಅದರಲ್ಲಿ ಬಂದ ಆದಾಯದಿಂದ ಜೀವನ ಮಾಡುತ್ತಿದ್ದಾರೆ.

“ವಾತ್ಸಲ್ಯ ಧಾಮ” ವಿನೋಬಾ ಭಾವೆಯವರ ತಾಯಿ ಮೂಲ ಜಮಖಂಡಿಯವರಾದ ರುಕ್ಮಿಣಿ ಭಾವೆಯವರದ್ದು.  ಮುಧೋದಲ್ಲಿ ಅವರು 2.5 ಎಕರೆ ಜಾಗವನ್ನು ಕೊಂಡು ಅದರಲ್ಲಿ ಆಶ್ರಮ ನಿರ್ಮಿಸಲಾಗಿದೆ.  ಆರಂಭದಲ್ಲಿ 20 ಜನರಿದ್ದರು.  ಈಗ ಮೂರು ಜನರಷ್ಟೇ ವಾಸ ಮಾಡುತ್ತಾರೆ.  ಶ್ರೀಮತಿ ಮೀರಾಬಾಯಿ ಕೊಪ್ಪಿಕರ್ ಅವರನ್ನು ಸಂದರ್ಶಿಸಲು ಅತಿಥಿಗಳು ಆಗಾಗ್ಗೆ ಬರುತ್ತಿರುತ್ತಾರೆ.  ಜಾತ್ಯಾತೀತ ಮನೋಭಾವದವರಾಗಿದ್ದಾರೆ.

2008 ರಲ್ಲಿ ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.  ಪ್ರಶಸ್ತಿಯನ್ನು ಇವರಿಗೆ ಕೊಡಲು ಆಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ ಆಶ್ರಮಕ್ಕೆ ಆಗಮಿಸಿ, ಚೆಕ್ ಹಾಗೂ ಮೂರು ಗ್ರಾಂ ಬಂಗಾರದ ಪದಕವನ್ನು ಕೊಟ್ಟಿದ್ದರು.  ಅವರು ನೀಡಿ ಚೆಕ್ ಹಣ ಇನ್ನೂ ಬ್ಯಾಂಕ್‍ನಲ್ಲಿದ್ದು, ಅದನ್ನು ಜನತೆಯ ಕಲ್ಯಾಣಕ್ಕೆ ಬಳಸಲು ಹೇಳಿದ್ದಾರೆ.  ಬಂಗಾರದ ಪದಕವನ್ನು ಬಡವರಿಗೆ ದಾನ ಮಾಡಿದ್ದಾರೆ.

ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀಸಿದ್ದಗಂಗಾ ಮಠ
“ನಡೆದಾಡುವ ದೇವರು” ಎಂದೇ ಖ್ಯಾತರಾದ ಪರಮಪೂಜ್ಯ ಡಾ: ಶಿವಕುಮಾರ ಸ್ವಾಮೀಜಿಯವರ ಮಹದಾಶಯದಂತೆ ಸತತವಾಗಿ 80 ವರ್ಷಗಳ ಕಾಲ ಅನ್ನದಾಸೋಹ ಹಾಗೂ ಅಕ್ಷರ ದಾಸೋಹದ ತವರಾಗಿ ಜಾತಿ-ಧರ್ಮ ಬೇಧವಿಲ್ಲದೇ, ಪ್ರಾಂತ್ಯ-ಪ್ರದೇಶ ತಾರತಮ್ಯ ಮಾಡದೇ ಲಕ್ಷಾಂತರ ಮಕ್ಕಳಿಗೆ ಅನ್ನ, ಆಶ್ರಯ ಮತ್ತು ವಿದ್ಯೆಯನ್ನು ದಾನ ಮಾಡಿದ, ರಾಷ್ಟ್ರದಲ್ಲೇ ಪ್ರತಿಷ್ಠಿತ ಸಂಸ್ಥೆ ಎಂದು ಹೆಸರಾದ ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಹಾಗೂ ಶ್ರೀ ಸಿದ್ದಗಂಗಾ ಮಠ, ಕ್ಯಾತಸಂದ್ರ, ತುಮಕೂರು, ಸಾಧನೆಗಳ ತವರು.

click me!