ಧಮ್ಕಿ ಹಾಕಬೇಡಿ, ಬೆಳಗಾವಿಗೆ ಬಂದೇ ಬರ್ತೇವೆ!: ಗಡಿ ಸಚಿವ ಚಂದ್ರಕಾಂತ ಪಾಟೀಲ್

By Govindaraj SFirst Published Dec 4, 2022, 3:40 AM IST
Highlights

ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲಾ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿದರೂ ನಾವು ಡಿ.6 ರಂದು ಬೆಳಗಾವಿಗೆ ಭೇಟಿ ನೀಡಿಯೇ ತೀರುತ್ತೇವೆ. ನನಗೆ ಧಮ್ಕಿ ನೀಡಬೇಡಿ, ಸುಮ್ಮನಾಗುವ ವ್ಯಕ್ತಿ ನಾನಲ್ಲ. ಯಾವುದೇ ಸಂಘರ್ಷ ಮಾಡಲು ನಾವು ಕರ್ನಾಟಕಕ್ಕೆ ಬರುತ್ತಿಲ್ಲ, ಎಚ್ಚರಿಕೆ ನೀಡಲೂ ಹೋಗುತ್ತಿಲ್ಲ!

ಬೆಳಗಾವಿ (ಡಿ.04): ಕರ್ನಾಟಕ ಸರ್ಕಾರ ಬೆಳಗಾವಿ ಜಿಲ್ಲಾ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿದರೂ ನಾವು ಡಿ.6 ರಂದು ಬೆಳಗಾವಿಗೆ ಭೇಟಿ ನೀಡಿಯೇ ತೀರುತ್ತೇವೆ. ನನಗೆ ಧಮ್ಕಿ ನೀಡಬೇಡಿ, ಸುಮ್ಮನಾಗುವ ವ್ಯಕ್ತಿ ನಾನಲ್ಲ. ಯಾವುದೇ ಸಂಘರ್ಷ ಮಾಡಲು ನಾವು ಕರ್ನಾಟಕಕ್ಕೆ ಬರುತ್ತಿಲ್ಲ, ಎಚ್ಚರಿಕೆ ನೀಡಲೂ ಹೋಗುತ್ತಿಲ್ಲ! ಇದು ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್‌ ಅವರು ನೀಡಿದ ಉದ್ಧಟತನದ ಹೇಳಿಕೆ. ಸದ್ಯ ಗಡಿಯಲ್ಲಿ ಪರಿಸ್ಥಿತಿ ಚೆನ್ನಾಗಿಲ್ಲ, ಇಂಥ ಪರಿಸ್ಥಿತಿಯಲ್ಲಿ ಬೆಳಗಾವಿಗೆ ಭೇಟಿ ನೀಡಬೇಡಿ. ಒಂದು ವೇಳೆ ರಾಜ್ಯದ ಸಲಹೆಯನ್ನೂ ಮೀರಿ ಭೇಟಿ ನೀಡಿದರೆ ಅದನ್ನು ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ನೀಡಿದ ಹೇಳಿದ್ದರು. 

ಈ ಕುರಿತು ಮುಂಬೈನಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಭೇಟಿ ನೀಡದಂತೆ ಸಂದೇಶ ರವಾನಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಆದರೆ, ನನಗೆ ಈ ಕುರಿತ ಫ್ಯಾಕ್ಸ್‌ ಆಗಲಿ, ಪತ್ರವಾಗಲಿ ತಲುಪಿಲ್ಲ. ನಾನು ಡಿ.3ರಂದು ಬೆಳಗಾವಿಗೆ ಭೇಟಿ ನೀಡಬೇಕಿತ್ತು. ಆದರೆ, ಡಿ.6ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಮಹಾಪರಿನಿರ್ವಾಣ ದಿನ ಇದೆ. ಎಲ್ಲರೂ ಅಂದೇ ಬೆಳಗಾವಿಗೆ ಆಗಮಿಸಿ ಎಂದು ಮನವಿ ಮಾಡಿದ್ದಾರೆ. ಹಾಗಾಗಿ ಆ ದಿನವೇ ನಾನು ಬೆಳಗಾವಿಗೆ ಭೇಟಿ ನೀಡುತ್ತೇನೆ. ನನಗೆ ಧಮ್ಕಿ ನೀಡಬೇಡಿ, ಸುಮ್ಮನೆ ಕೂರುವ ವ್ಯಕ್ತಿ ನಾನಲ್ಲ.

ಯೋಗೇಶ್ ಗೌಡ ಹತ್ಯೆ ಪ್ರಕರಣ: ಧಾರವಾಡ ಜಿಲ್ಲೆಗೆ ಬರಲು ವಿನಯ್‌ಗೆ 3 ಗಂಟೆ ಅವಕಾಶ

ನಾವು ಬೆಳಗಾವಿಗೆ ಭೇಟಿ ನೀಡಿಯೇ ತೀರುತ್ತೇವೆ ಎಂದು ಧಾಷ್ಟ್ರ್ಯ ಮೆರೆದಿದ್ದಾರೆ. ಅಂದು ಗಡಿ ಭಾಗದ ಜನ, ಗಡಿ ಹೋರಾಟದಲ್ಲಿ ಮೃತಪಟ್ಟಹುತಾತ್ಮರ ನಿವಾಸಕ್ಕೆ ಭೇಟಿ ನೀಡಲಾಗುವುದು, 865 ಮರಾಠಿ ಭಾಷಿಕ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಸೌಲಭ್ಯ ನೀಡುವ ಕುರಿತು ಚರ್ಚಿಸಲಾಗುವುದು. ಈ ಹಳ್ಳಿಗಳಿಗೆ ಕರ್ನಾಟಕದಿಂದ ಸೌಲಭ್ಯಗಳನ್ನು ನೀಡದಿದ್ದರೆ ಮಹಾರಾಷ್ಟ್ರ ಸರ್ಕಾರದ ವತಿಯಿಂದ ನಾವು ನೀಡುತ್ತೇವೆ. ನಾವು ಜನರ ಮನಸ್ಥಿತಿ ತಿಳಿದು ಅವರಿಗೆ ಮಹಾರಾಷ್ಟ್ರ ಸರ್ಕಾರದ ನಿಲುವು ತಿಳಿಸಲು ತೆರಳುತ್ತಿದ್ದೇವೆ ಅಷ್ಟೆಎಂದು ತಿಳಿಸಿದ್ದಾರೆ.

ಬೆಳಗಾವಿಗೆ ಮಹಾಸಚಿವರು ಬರೋದು ಬೇಡ: ರಾಜ್ಯ ಸರ್ಕಾರದ ಸಲಹೆಯ ಹೊರತಾಗಿಯೂ ಗಡಿ ಬಿಕ್ಕಟ್ಟು ಭುಗಿಲೆದ್ದಿರುವ ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಸಚಿವರಿಬ್ಬರು ಡಿ.6ರಂದು ಬೆಳಗಾವಿಗೆ ಭೇಟಿ ನೀಡಿದರೆ ಅದನ್ನು ತಡೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಸಚಿವರ ಭೇಟಿಗೆ ನಿರ್ಬಂಧ ಹೇರುವ ಸುಳಿವನ್ನು ಬೊಮ್ಮಾಯಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ದೊಡಮಂಗಡಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎರಡೂ ರಾಜ್ಯಗಳ ಮಧ್ಯೆ ಪ್ರಕ್ಷುಬ್ಧ ಪರಿಸ್ಥಿತಿ ಇರುವಾಗ ಮಹಾರಾಷ್ಟ್ರ ಸಚಿವರು ಬೆಳಗಾವಿಗೆ ಭೇಟಿ ನೀಡುವುದು ಸೂಕ್ತ ಅಲ್ಲ. ಈ ಸಂಬಂಧ ಬೆಳಗಾವಿಗೆ ಭೇಟಿ ನೀಡಬೇಡಿ ಎಂದು ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯಿಂದ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್‌ ಮೂಲಕ ಸಂದೇಶ ರವಾನಿಸಲಾಗಿದೆ. 

Chikkamagaluru: ಕಾಫಿನಾಡು ವಿವಾದಿತ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ

ಆದರೂ ಅವರು ಭೇಟಿ ನೀಡಲು ಮುಂದಾದರೆ ಇಂಥ ಪರಿಸ್ಥಿತಿಯಲ್ಲಿ ಈ ಹಿಂದೆ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿದೆಯೋ? ಅದೇ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು. ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕದಡುತ್ತಾ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಾಯಕರ ಆಹ್ವಾನದ ಮೇರೆಗೆ ಡಿ.6ರಂದು ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ್‌ ಹಾಗೂ ಶಂಭುರಾಜೆ ಅವರು ಬೆಳಗಾವಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಈ ವೇಳೆ ಅವರು ಬೆಳಗಾವಿಯಲ್ಲಿ ಮರಾಠಿಗರ ಜತೆಗೆ ಸರಣಿ ಸಭೆ ನಡೆಸಲೂ ಉದ್ದೇಶಿಸಿದ್ದಾರೆ. ಈ ಕುರಿತು ಕನ್ನಡಪರ ಸಂಘಟನೆಗಳಿಂದ ಈಗಾಗಲೇ ತೀವ್ರ ಆಕ್ರೋಶವೂ ವ್ಯಕ್ತವಾಗಿದೆ. ಕಳೆದ ವರ್ಷ ಕನ್ನಡಧ್ವಜದ ಗಲಾಟೆ ಸಂದರ್ಭದಲ್ಲೂ ಶಿವಸೇನೆ ಸಚಿವರು, ಮುಖಂಡರು ಇದೇ ರೀತಿ ಬೆಳಗಾವಿಗೆ ಭೇಟಿ ನೀಡಲು ಮುಂದಾಗಿದ್ದರು. ಆಗ ಬೆಳಗಾವಿ ಜಿಲ್ಲಾಧಿಕಾರಿ ಮೂಲಕ ಸರ್ಕಾರ ಅವರ ಭೇಟಿಗೆ ನಿಷೇಧ ಹೇರಿತ್ತು.

click me!