ಕರ್ನಾಟಕದ ಮತ್ತೆ 2 ಕಡೆ ಚಿರತೆ, ಆತಂಕ ತೀವ್ರ

By Govindaraj SFirst Published Dec 4, 2022, 1:00 AM IST
Highlights

ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಎಸ್‌.ಕೆಬ್ಬೆಹುಂಡಿ ಗ್ರಾಮದಲ್ಲಿ ಕಳೆದ ಗುರುವಾರ ಸಂಜೆ ಮೇಘನಾ (22) ಎಂಬ ಯುವತಿ ಚಿರತೆ ದಾಳಿಗೆ ಬಲಿಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಾಲಿಗ್ರಾಮ/ ಹೊನ್ನಾವರ (ಡಿ.04): ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಎಸ್‌.ಕೆಬ್ಬೆಹುಂಡಿ ಗ್ರಾಮದಲ್ಲಿ ಕಳೆದ ಗುರುವಾರ ಸಂಜೆ ಮೇಘನಾ (22) ಎಂಬ ಯುವತಿ ಚಿರತೆ ದಾಳಿಗೆ ಬಲಿಯಾಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಇದರ ಬೆನ್ನ ಹಿಂದೆಯೇ ರಾಜಧಾನಿ ಬೆಂಗಳೂರಿನಲ್ಲಿ ಕೆಂಗೇರಿ ಹಾಗೂ ಚಿಕ್ಕಜಾಲ ಸುತ್ತಮುತ್ತ ಎರಡು ಚಿರತೆಗಳು ಕಾಣಿಸಿಕೊಂಡಿದ್ದು, ಆತಂಕವನ್ನು ಮತ್ತಷ್ಟುಹೆಚ್ಚಿಸಿತ್ತು. ಈ ಚಿರತೆಗಳ ಸೆರೆಗೆ ಕಾರ್ಯಾಚರಣೆ ಮುಂದುವರಿದ ಬೆನ್ನ ಹಿಂದೆಯೇ ಶನಿವಾರ ಮತ್ತೆರಡು ಕಡೆ ಚಿರತೆಗಳು ಕಾಣಿಸಿಕೊಂಡಿವೆ. ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಗ್ರಾಮದ ಹರೀಶ್‌ ಎಂಬುವರ ತೋಟದಲ್ಲಿ ಶನಿವಾರ ಚಿರತೆ ಕಾಣಿಸಿಕೊಂಡಿದೆ. ಜೊತೆಗೆ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ ಮನೆಯೊಂದರ ಅಂಗಳದಲ್ಲಿ ಕಟ್ಟಿಹಾಕಲಾಗಿದ್ದ ನಾಯಿಯ ಮೇಲೆ ಚಿರತೆ ದಾಳಿ ನಡೆಸಿದೆ.

ತೋಟಕ್ಕೆ ಬಂತು ಚಿರತೆ: ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಚಿಕ್ಕಹನಸೋಗೆ ಗ್ರಾಮದ ಹರೀಶ್‌ ಎಂಬುವರ ತೋಟದಲ್ಲಿ ಶನಿವಾರ ಚಿರತೆ ಕಾಣಿಸಿಕೊಂಡಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಚಿರತೆ ಕಾಣಿಸಿತು. ಇದರಿಂದ ಗಾಬರಿಗೊಂಡು ಓಡಿದ ಹರೀಶ್‌, ಗ್ರಾಮದ ಜನರಿಗೆ ವಿಷಯ ತಿಳಿಸಿದರು. ಗ್ರಾಮಸ್ಥರು ಶಾಸಕ ಸಾ.ರಾ.ಮಹೇಶ್‌ ಅವರಿಗೆ ವಿಷಯ ತಿಳಿಸಿದರು. ಶಾಸಕರು ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೋಡಿ, ಚಿರತೆ ಸೆರೆ ಹಿಡಿಯಲು ಸೂಚಿಸಿದರು. ಶಾಸಕರ ಸೂಚನೆ ಮೇರೆಗೆ ಅಧಿಕಾರಿಗಳು ಬೋನು ಇಟ್ಟು ಕಾದು ಕುಳಿತಿದ್ದಾರೆ. ಚಿರತೆ ರಾತ್ರಿ ವೇಳೆ ರೈತರ ಭತ್ತ, ಗದ್ದೆ, ತೋಟಗಳಲ್ಲಿ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿದೆ.

ಚಿರತೆ ದಾಳಿಗೆ ಮೃತಪಟ್ಟವರ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ: ಸಿಎಂ ಬೊಮ್ಮಾಯಿ

ನಾಯಿ ಮೇಲೆ ದಾಳಿ: ರಾಜ್ಯದೆಲ್ಲೆಡೆ ತೀವ್ರ ಆತಂಕ ಸೃಷ್ಟಿಸಿ ಪ್ರಾಣ ಹಾನಿಗೂ ಕಾರಣವಾದ ಚಿರತೆ ಇದೀಗ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲೂ ಕಾಣಿಸಿಕೊಂಡಿದ್ದು, ಭಯ ಉಂಟು ಮಾಡಿದೆ. ಶನಿವಾರ ಬೆಳಗಿನಜಾವ ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾಮದ ಮನೆಯೊಂದರ ಅಂಗಳದಲ್ಲಿ ಕಟ್ಟಿದ್ದ ನಾಯಿಯ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಹೊಸಾಕುಳಿಯ ಗೊಳಿಬೈಲ್‌ ಸಮೀಪದ ಗಣಪು ಪಿ. ಹೆಗಡೆ ಎಂಬವರು ತಮ್ಮ ಮನೆಯ ಅಂಗಳಕ್ಕೆ ಶನಿವಾರ ಬೆಳಗಿನ ಜಾವ 4.50 ರ ಸುಮಾರಿಗೆ ಚಿರತೆಯೊಂದು ಬಂದಿದೆ. ಮನೆಯಂಗಳದಲ್ಲಿ ಇದ್ದ ನಾಯಿಯನ್ನು ಹಿಡಿಯಲು ನಿಧಾನವಾಗಿ ಹೆಜ್ಜೆ ಹಾಕುತ್ತಾ ಚಿರತೆ ಬಂದು, ದಾಳಿಗೆ ಯತ್ನಿಸಿದೆ. ಆದರೆ ನಾಯಿ ಕೂಗಿಕೊಂಡು ತಪ್ಪಿಸಿಕೊಳ್ಳುವಾಗ ನಾಯಿ ಹಾಗೂ ಚಿರತೆ ಎರಡೂ ಸಹ ಕಟ್ಟೆಯ ಮೇಲಿಂದ ಕೆಳಗೆ ಬಿದ್ದಿವೆ.

ಬೆಂಗ್ಳೂರಲ್ಲಿ ಇನ್ನೂ ಸಿಗದ ಚಿರತೆಗಳು: ಗಾರ್ಡನ್‌ ಸಿಟಿಯಲ್ಲಿ ಹೆಚ್ಚಿದ ಆತಂಕ

ವೇಳೆ ಬೇಟೆ ತಪ್ಪಿದ ಹಿನ್ನೆಲೆಯಲ್ಲಿ ನಾಯಿ ಕೂಗಾಡಿದ್ದು ಇದೇ ಸಮಯಕ್ಕೆ ಮನೆಯವರು ಲೈಟ್‌ ಆನ್‌ ಮಾಡಿದ್ದಾರೆ. ತಕ್ಷಣ ಚಿರತೆ ಅಲ್ಲಿಂದ ಓಡಿ ಹೋಗಿದೆ. ದೃಶ್ಯಾವಳಿಯ ತುಣುಕು ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಘಟನೆಯ ಮಾಹಿತಿ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಸಿದ್ದಾರೆ. ನವಿಲುಗೋಣ ಗ್ರಾಮದಲ್ಲಿ ಚಿರತೆ ಸೆರೆಗೆ ಬೋನು ಸಹ ಇಡಲಾಗಿದೆ. ಇತ್ತೀಚೆಗೆ ಚಿರತೆ ಕಾಟ ಹೆಚ್ಚಿರುವುದು ಹೊಸಾಕುಳಿ ಸಾಲ್ಕೋಡ್‌ ಗ್ರಾಮದಲ್ಲಿ ಆತಂಕ ಮೂಡಿಸುತ್ತಿದೆ. ಈ ಹಿಂದೆ ಅರಣ್ಯ ಇಲಾಖೆಯವರು ಬೋನಿನ ವ್ಯವಸ್ಥೆ ಕಲ್ಪಿಸಿದ್ದರು. ಬೋನ್‌ ಒಳಗೆ ಚಿರತೆ ಹೋಗದೇ ತಪ್ಪಿಸಿಕೊಂಡಿತ್ತು. ಗ್ರಾಪಂ ಉಪಾಧ್ಯಕ್ಷ ಕಿರಣ ಹೆಗಡೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

click me!