ಪಂಚಮಸಾಲಿ 3 ಪೀಠಗಳು ಒಂದೇ, ಎಲ್ಲರಿಗೂ ಮೀಸಲು ಸಿಗಲಿ: ಸಚಿವ ನಿರಾಣಿ

By Govindaraj SFirst Published Dec 4, 2022, 2:20 AM IST
Highlights

ಪಂಚಮಸಾಲಿ ಸಮಾಜದ ಮೂರು ಪೀಠಗಳ ಉದ್ದೇಶವೂ ಒಂದೇ ಆಗಿದ್ದು, ಅವು ಪರಸ್ಪರ ಪೂರಕವೇ ಹೊರತು ಪರ್ಯಾಯ ಅಲ್ಲ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. 

ಕೊಪ್ಪಳ/ಬಾಗಲಕೋಟೆ (ಡಿ.04): ಪಂಚಮಸಾಲಿ ಸಮಾಜದ ಮೂರು ಪೀಠಗಳ ಉದ್ದೇಶವೂ ಒಂದೇ ಆಗಿದ್ದು, ಅವು ಪರಸ್ಪರ ಪೂರಕವೇ ಹೊರತು ಪರ್ಯಾಯ ಅಲ್ಲ ಎಂದು ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 3ಬಿ ಮೀಸಲಾತಿಯನ್ನು ನೀಡಿದ್ದು ಯಡಿಯೂರಪ್ಪ. ಪಂಚಮಸಾಲಿ ಸಮಾಜಕ್ಕೆ 200 ವರ್ಷಗಳ ಇತಿಹಾಸವಿದೆ ಎನ್ನುವ ದಾಖಲೆಯನ್ನು ಕೊಪ್ಪಳದ ಬಿ.ಎಸ್‌.ಪಾಟೀಲ್‌ ಅವರು ಹಿಂದುಳಿದ ವರ್ಗಗಳ ಆಯೋಗದ ಎದುರು ಸಲ್ಲಿಕೆ ಮಾಡಿದ್ದಾರೆ. 

ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲ ಪೀಠಗಳ ಆಶಯವೂ ಅದೇ ಆಗಿದೆ. ವೀರಶೈವ ಲಿಂಗಾಯತ ಸಮುದಾಯದವರೆಲ್ಲ ಮೀಸಲಾತಿ ವ್ಯಾಪ್ತಿಗೆ ಬರಬೇಕು. ವೀರಶೈವ ಹಾಗೂ ಲಿಂಗಾಯತ ಸಮುದಾಯದ ಎಲ್ಲ ಒಳಪಂಗಡಗಳಿಗೆ ಮೀಸಲಾತಿ ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳು ಸಿಗಬೇಕು ಎಂಬುದು ನನ್ನ ಆಶಯ. ವೀರಶೈವ ಮತ್ತು ಲಿಂಗಾಯತ ಎರಡು ಒಂದೇ. ಹೀಗಾಗಿ, ಇವುಗಳ ವಿಭಜನೆಗೆ ಅವಕಾಶವೇ ಇಲ್ಲ. ನಾನಂತು ಲಿಂಗಾಯತ ಸಮುದಾಯದ ಒಂದೇ ಉಪಜಾತಿಗೆ ಮೀಸಲಾತಿ ಸಿಗಬೇಕು ಎಂದು ಬಯಸುವುದಿಲ್ಲ ಎಂದರು.

Ticket Fight: ದಕ್ಷಿಣ ಕನ್ನಡ ಬಿಜೆಪಿ ಕೋಟೆಯಲ್ಲಿ ಕಾಂಗ್ರೆಸ್‌ ಪೈಪೋಟಿ

ನಮ್ಮ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಬರಲ್ಲ: ಬೀಳಗಿ ವಿಧಾನಸಭಾ ಕ್ಷೇತ್ರದಿಂದಲೇ ಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ. ನಮ್ಮ ಕುಟುಂಬದಿಂದ ನಾನು ಮತ್ತು ಸಹೋದರ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ ಮಾತ್ರ ರಾಜಕೀಯದಲ್ಲಿ ಇರುತ್ತೇವೆ. ನಮ್ಮ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಬರಲ್ಲ. ಒಂದೊಮ್ಮೆ ನಮ್ಮ ಕುಟುಂಬದಿಂದ ಮತ್ತೊಬ್ಬರು ರಾಜಕೀಯಕ್ಕೆ ಬರುವುದಾದರೆ ನಾನೇ ರಾಜಕೀಯದಿಂದ ನಿವೃತ್ತಿ ಹೊಂದಿ ಅವರಿಗೆ ಅವಕಾಶ ನೀಡಿ ಕೈಗಾರಿಕೆಗಳನ್ನು ನೋಡಿಕೊಳ್ಳುತ್ತೇನೆ ಎಂದರು.

ಪಂಚಮಸಾಲಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಕೋರಿಕೆ: ಲಕ್ಷ್ಮೇಮಶ್ವರದಲ್ಲಿ ಡಿ. 4ರಂದು ವೀರಶೈವ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಸಮಸ್ತ ಲಿಂಗಾಯಿತರಿಗೆ ಕೇಂದ್ರದಲ್ಲಿ ಒಬಿಸಿ ಸೇರ್ಪಡೆಗೆ ಒತ್ತಾಯಿಸಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಡೆಯುತ್ತಿರುವ ಜನ ಜಾಗೃತಿ ಸಮಾವೇಶಕ್ಕೆ ವಿಜಯನಗರ ಜಿಲ್ಲೆಯ ಪಂಚಮಸಾಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ವಿಜಯನಗರ ಜಿಲ್ಲಾಧ್ಯಕ್ಷ ಪ್ರಕಾಶ ಪಾಟೀಲ್‌ ಹಾಗೂ ಹರಪನಹಳ್ಳಿ ತಾಲೂಕು ಅಧ್ಯಕ್ಷ ಪಟೇಲ್‌ ಬೆಟ್ಟನಗೌಡ ಕೋರಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ವೀರಶೈವ ಲಿಂಗಾಯುತ ಪಂಚಮಸಾಲಿ ಸಮಾಜದ ಮಕ್ಕಳ ಭವಿಷ್ಯಕ್ಕಾಗಿ ನಿರಂತರವಾಗಿ ನಡೆಯುತ್ತಿರುವ ಮೀಸಲಾತಿ ಹೋರಾಟದಲ್ಲಿ ನಾಡಿನ ಸಮಸ್ತ ವೀರಶೈವ ಲಿಂಗಾಯುತ ಪಂಚಮಸಾಲಿಗರು ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಹೇಳಿದ್ದಾರೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್‌ ಧಾರವಾಡ ಭೇಟಿಗೆ ಅವಕಾಶ ನೀಡಿದ ಕೋರ್ಟ್‌

ಹೋರಾಟದಿಂದಲೇ ಸೌಲಭ್ಯ ಪಡೆಯಲು ಸಾಧ್ಯ ಎಂಬುದನ್ನು ಅರಿಯಬೇಕಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಅಂದು ಬೆಳಗ್ಗೆ 10.30ಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್‌ ಉದ್ಘಾಟಿಸುವರು. ಸಚಿವ ಮುರುಗೇಶ ನಿರಾಣಿ ಕಿತ್ತೂರು ರಾಣಿ ಚೆನ್ನಮ್ಮ ಭಾವಚಿತ್ರ ಅನಾವರಣಗೊಳಿಸುವರು. ಸಕ್ಕರೆ ಮತ್ತು ಜವಳಿ ಖಾತೆ ಸಚಿವ ಶಂಕರ ಪಾಟೀಲ್‌ ಮುನೇನಕೊಪ್ಪ ಸ್ಮರಣೆ ಸಂಚಿಕೆ ಬಿಡುಗಡೆ ಮಾಡುವರು. ಸಂಸದ ಕರಡಿ ಸಂಗಣ್ಣ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದ್ದಾರೆ.

click me!