
ಮುಂಬೈ (ಡಿ.21): ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಗಡಿ ವಿವಾದ ತೀವ್ರವಾಗುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಸರ್ಕಾರ ಗಡಿ ಭಾಗದಲ್ಲಿ ಮರಾಠಿ ಭಾಷೆ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳಿಗೆ ಹಣಕಾಸು ಒದಗಿಸುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮಹಾರಾಷ್ಟ್ರ-ಕರ್ನಾಟಕ ಗಡಿಯಲ್ಲಿನ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳಿಗೆ ಇದು ಅನ್ವಯಿಸಲಿದೆ.
ಜೂನ್ ತಿಂಗಳಲ್ಲೇ ಶಿಂಧೆ ಸರ್ಕಾರ ಈ ಯೋಜನೆಯನ್ನು ರೂಪಿಸಿತ್ತು ಎನ್ನಲಾಗಿದ್ದು, ನ.30ರಂದು ಮಹಾರಾಷ್ಟ್ರದ ಮರಾಠಿ ಭಾಷಾ ಇಲಾಖೆ ಇದನ್ನು ಅಧಿಕೃತವಾಗಿ ಪ್ರಕಟಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇತ್ತೀಚೆಗಷ್ಟೇ ಭಾಷಣವೊಂದರಲ್ಲಿ ಏಕನಾಥ ಶಿಂಧೆ ಅವರು ಗಡಿಯಲ್ಲಿನ ಮರಾಠಿ ಸಂಘಸಂಸ್ಥೆಗಳು, ಕರ್ನಾಟಕದಲ್ಲಿನ ಮರಾಠಿ ಭಾಷಿಕ ಸ್ವಾತಂತ್ರ್ಯಯೋಧರಿಗೆ ನೆರವು ನೀಡುವುದಾಗಿ ಘೋಷಿಸಿದ್ದರು. ಅದರ ಬೆನ್ನಲ್ಲೇ ಸಂಘ-ಸಂಸ್ಥೆಗಳ ನೆರವು ಘೋಷಣೆಯನ್ನು ಕಾರ್ಯರೂಪಕ್ಕೆ ತರಲಾಗಿದೆ.
ಮಸಿ ಎರಚುವ ಭಯ: ಫೇಸ್ ಶೀಲ್ಡ್ ಧರಿಸಿ ಸಮಾರಂಭದಲ್ಲಿ ಭಾಗಿಯಾದ ಮಹಾ ಸಚಿವ
ಏನೇನು ನೆರವು? ಯಾರಿಗೆ ಸಹಾಯ?: ಮರಾಠಿ ಹಾಗೂ ಕನ್ನಡ ಎರಡೂ ಭಾಷೆಗಳು ಬಳಕೆಯಾಗುವ ಗಡಿ ಭಾಗದಲ್ಲಿ ಮರಾಠಿ ಭಾಷೆ ಹಾಗೂ ಸಾಹಿತ್ಯವನ್ನು ಸಂರಕ್ಷಿಸಿ ಅದನ್ನು ಬೆಳೆಸುವಂತೆ ಮಾಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಇದರ ಅಡಿಯಲ್ಲಿ ಮರಾಠಿ ಪ್ರಚಾರಕ್ಕಾಗಿ ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದಲ್ಲಿ ಕೆಲಸ ಮಾಡುತ್ತಿರುವ ಸಂಸ್ಥೆಗೆ 10 ಲಕ್ಷ ರು.ವರೆಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸರ್ಕಾರದ ನಿರ್ಣಯದಲ್ಲಿ ತಿಳಿಸಲಾಗಿದೆ.
ಗಡಿ ಭಾಗದಲ್ಲಿ ಮರಾಠಿ ಲೇಖಕರು, ತತ್ವಶಾಸ್ತ್ರಜ್ಞರು, ಕಥೆಗಾರರು, ಕವಿಗಳ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸುವುದು, ಮರಾಠಿ ಪುಸ್ತಕಗಳ ಪ್ರದರ್ಶನ ಏರ್ಪಡಿಸುವುದು, ರಿಯಾಯಿತಿ ದರದಲ್ಲಿ ಮರಾಠಿ ಪುಸ್ತಕ ಮಾರಾಟ, ಮರಾಠಿ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಲು ಸಹಾಯ ಮೊದಲಾದ ಕಾರ್ಯಗಳಿಗೆ ಸರ್ಕಾರ ನೀಡಿದ ಆರ್ಥಿಕ ನೆರವನ್ನು ಸಂಘಟನೆಗಳು ಬಳಸಬಹುದಾಗಿದೆ. ಇದಲ್ಲದೇ ಗಡಿಭಾಗದಲ್ಲಿರುವ ಮರಾಠಿ ಸುದ್ದಿ ಪತ್ರಿಕೆ ಹಾಗೂ ಪ್ರಕಟಣೆಗಳಿಗೆ ಹಾಗೂ ಮರಾಠಿ ಭಾಷೆ ಬರೆಯಲು ಬಳಸುವ ದೇವನಾಗರಿ ಲಿಪಿ ಸಂರಕ್ಷಣೆ ಹಾಗೂ ಅದನ್ನು ಜನಪ್ರಿಯಗೊಳಿಸುವ ಕಾರ್ಯಗಳಿಗೂ ಇನ್ನು ಸರ್ಕಾರದಿಂದ ಹಣಕಾಸಿನ ನೆರವು ಸಿಗಲಿದೆ.
ಎಂಇಎಸ್ ಪುಂಡರನ್ನು ಹದ್ದುಬಸ್ತಿನಲ್ಲಿಡುವ ತಂತ್ರ ಸಿದ್ಧವಾಗಿದೆ: ಸಿಎಂ ಬೊಮ್ಮಾಯಿ
ಈ ಯೋಜನೆಯ ಮೂಲಕ ಗಡಿಭಾಗದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸಿ ಯುವಕರು ಹಾಗೂ ಮಕ್ಕಳಲ್ಲಿ ಮರಾಠಿ ಭಾಷೆ ಪ್ರಚಾರ ಮಾಡುವ ಕಾರ್ಯಕ್ಕೆ ಶಿಂಧೆ ಸರ್ಕಾರ ಮುಂದಾಗಿದೆ. ಶಾಲೆಗಳಲ್ಲಿ ಮಕ್ಕಳಿಗಾಗಿ ಮರಾಠಿ ಪ್ರಬಂಧ, ಭಾಷಣ, ಚರ್ಚೆ, ನಾಟಕ ಸ್ಫರ್ಧೆಗಳನ್ನು ಆಯೋಜಿಸಿದರೆ ಅಂತಹ ಶಾಲೆಗಳೂ ಹಣಕಾಸಿನ ನೆರವು ಪಡೆದುಕೊಳ್ಳಲು ಅರ್ಹವಾಗಿವೆ ಎಂದು ಮಾಧ್ಯಮ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ