ಕೋಟಾ ಶ್ರೀನಿವಾಸ ಆಯ್ಕೆಯಿಂದ ನಾಲ್ಕು ಕ್ಷೇತ್ರ ಮೇಲೆ ಪ್ರಭಾವ; ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ?

By Ravi JanekalFirst Published Mar 14, 2024, 6:13 PM IST
Highlights

ತೀವ್ರ ಕುತೂಹಲ ಕೆರಳಿಸಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸರಳ, ಸಜ್ಜನಿಕೆಗೆ ಹೆಸರಾದ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು  ಕಣಕ್ಕಿಳಿಸಲು ತೀರ್ಮಾನಿಸುವ ಮೂಲಕ ಈ ಬಾರಿ ಬದಲಾವಣೆ ಬೇಕೆಂಬ ಕ್ಷೇತ್ರದ ಮತದಾರರ ಭಾವನೆಗಳಿಗೆ ಪಕ್ಷ ಸ್ಪಂದಿಸಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.14): ತೀವ್ರ ಕುತೂಹಲ ಕೆರಳಿಸಿದ್ದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸರಳ, ಸಜ್ಜನಿಕೆಗೆ ಹೆಸರಾದ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅವರನ್ನು  ಕಣಕ್ಕಿಳಿಸಲು ತೀರ್ಮಾನಿಸುವ ಮೂಲಕ ಈ ಬಾರಿ ಬದಲಾವಣೆ ಬೇಕೆಂಬ ಕ್ಷೇತ್ರದ ಮತದಾರರ ಭಾವನೆಗಳಿಗೆ ಪಕ್ಷ ಸ್ಪಂದಿಸಿದೆ.

ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಾಲಿ ಸಂಸದೆ ಶೋಭಾ ಕರಂದ್ಲಾಜೆ(shobha karandlaje) ಅವರನ್ನು ಬದಲಿಸಿ ಬೇರೊಬ್ಬರನ್ನು ಕಣಕ್ಕಿಳಿಸಬೇಕು ಎನ್ನುವ ಕೂಗು ಸ್ವಪಕ್ಷದಲ್ಲೇ ಎದ್ದಿದ್ದ ಹಿನ್ನೆಲೆಯಲ್ಲಿ ಅಳೆದು-ತೂಗಿ ಎಲ್ಲರೂ ಒಪ್ಪುವ ವ್ಯಕ್ತಿತ್ವದ, ಮತ್ತೆ ಅಪಸ್ವರಗಳಿಗೆ ಅವಕಾಶವಿಲ್ಲದ ಅಭ್ಯರ್ಥಿಯನ್ನೇ ಬಿಜೆಪಿ ಆಯ್ಕೆ ಮಾಡಿರುವುದು ವಿಶೇಷ.

ದಾವಣಗೆರೆ ಲೋಕಸಭಾ ಕ್ಷೇತ್ರ ಗೆದ್ದೇ ಗೆಲ್ತೇವೆ: ಕೋಟ ಶ್ರೀನಿವಾಸ ಪೂಜಾರಿ

ಅಪಸ್ವರಗಳಿಗೆ ಅವಕಾಶವಿಲ್ಲದ ಅಭ್ಯರ್ಥಿ : 

ಶೋಭಾ ಅವರನ್ನು ಬದಲಿಸಿ ಬೇರೆ ಯಾರಿಗಾದರೂ ಟಿಕೆಟ್ ಕೊಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದವರು, ಶೋಭಾ ಬದಲಿಗೆ ಸಿ.ಟಿ.ರವಿ(CT Ravi) ಅವರನ್ನೇ ಕಣಕ್ಕಿಳಿಸಿ ಎಂದು ಒತ್ತಾಯ ಮಾಡಿದ್ದವರಿಗೆ ಕೋಟಾ ಶ್ರೀನಿವಾಸ ಪೂಜಾರಿ(Kota shrinivas poojary) ಅವರ ಆಯ್ಕೆ ಅಚ್ಚರಿ ತಂದಿರುವುದಂತೂ ನಿಜ.ಈ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಕಾಂಗ್ರೆಸ್ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದನ್ನೂ ಸೇರಿದಂತೆ ಪ್ರಾದೇಶಿಕತೆ, ಎರಡೂ ಜಿಲ್ಲೆಯ ಕಾರ್ಯಕರ್ತರಲ್ಲಿ ಸಮಾನ ವಿಶ್ವಾಸ ಉಳಿಸಿಕೊಂಡಿರುವ ವ್ಯಕ್ತಿತ್ವ, ಸಚ್ಚಾರಿತ್ರ್ಯ, ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದ ಸೇವೆ ಇದೆಲ್ಲವನ್ನೂ ಪರಿಗಣಿಸಿ ಈ ಆಯ್ಕೆಗೆ ತೀರ್ಮಾನಿಸಿರುವುದು ಸ್ಪಷ್ಟ. ಗೋ ಬ್ಯಾಕ್ ಶೋಭಾ ಅಭಿಯಾನ ಶುರುವಾದ ಆರಂಭದಲ್ಲಿ ಪೂಜಾರಿ ಅವರ ಹೆಸರು ಪ್ರಸ್ತಾಪದಲ್ಲೇ ಇರಲಿಲ್ಲ. ಶೋಭಾ ಅವರನ್ನು ಬದಲಿಸಲೇ ಬೇಕು ಎನ್ನುವ ಒತ್ತಡಗಳು ಹೆಚ್ಚಾದ ಜೊತೆಗೆ ಜಯಪ್ರಕಾಶ ಹೆಗ್ಡೆ ಅವರು ಕಾಂಗ್ರೆಸ್ ಸೇರ್ಪಡೆ ಗೊಂಡ ಬೆನ್ನಲ್ಲೇ ಪೂಜಾರಿ ಅವರೇ ಸೂಕ್ತ ಎನ್ನುವ ತೀರ್ಮಾನಕ್ಕೆ ಪಕ್ಷ ಬಂದಂತಿದೆ.

ಹಿಂದುಳಿದ ವರ್ಗದ ಸಮುದಾಯಕ್ಕೆ ಆದ್ಯತೆ : ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ?

ಕೋಟಾ ಶ್ರೀನಿವಾಸ ಪೂಜಾರಿ ಅವರ ಮೂಲಕ ಲೋಕಸಭೆ ಚುನಾವಣೆಗೆ ಬಿಜೆಪಿ ಮೊದಲ ಬಾರಿಗೆ ಬಿಲ್ಲವ ಸಮಾಜಕ್ಕೆ ಅವಕಾಶ ಮಾಡಿಕೊಟ್ಟಿದೆ. ಬಿಲ್ಲವ ಸಮಾಜ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಅತೀ ದೊಡ್ಡ ಸಂಖ್ಯೆಯಲ್ಲಿರುವ ಹಿಂದುಳಿದ ವರ್ಗದ ಸಮುದಾಯವೂ ಆಗಿರುವುದರಿಂದ ಈ ಬಾರಿ ಚುನಾವಣೆಯಲ್ಲಿ ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಎನ್ನುವ ಅಭಿಪ್ರಾಯಗಳು ಈಗಾಗಲೇ ಕೇಳಿಬಂದಿದೆ.

ಕಳೆದ ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಆರ್ಯಈಡಿಗ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ರಾಜಪ್ಪ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಈ ಬಾರಿ ಸಮಾಜಕ್ಕೆ ಎರಡು ಸ್ಥಾನಗಳನ್ನು ನೀಡಬೇಕು ಎಂದು ಪಕ್ಷಾತೀತವಾಗಿ ಆಗ್ರಹಿಸಿದ್ದರು. ಈಗ ಬಿಜೆಪಿಯಲ್ಲಿ ಅದಕ್ಕೆ ಮನ್ನಣೆ ಸಿಕ್ಕಂತಾಗಿರುವುದು ಸಮಾಜದಲ್ಲೂ ಸಮಾಧಾನ ತಂದಿದೆ.ಕಾಂಗ್ರೆಸ್ಪಕ್ಷ ದಕ್ಷಿಣ ಕನ್ನಡದ ಮಂಗಳೂರು ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿ ಬಿಲ್ಲವ ಮತ್ತು ಬಂಟ್ಸ್ ಜಾತಿ ಸಮೀಕರಣದ ಅಸ್ತ್ರ ಪ್ರಯೋಗಿಸುವ ಸಾಧ್ಯತೆ ಹೆಚ್ಚಿರುವುದರಿಂದ ಬಿಜೆಪಿ ಅದಕ್ಕೆ ಪ್ರತಿಯಾಗಿ ಅದೇ ಅಸ್ತ್ರವನ್ನು ಹೂಡುವುದು ಸಹ ಪೂಜಾರಿ ಆಯ್ಕೆ ಹಿಂದಿನ ತಂತ್ರ ಎನ್ನಲಾಗುತ್ತಿದೆ. ಇದಲ್ಲದೆ ಅಕ್ಕ ಪಕ್ಕದ ಶಿವಮೊಗ್ಗ, ಮಂಗಳೂರು ಕ್ಷೇತ್ರಗಳ ಮೇಲೂ ಇದರ ಪರಿಣಾಮ ಬೀರಲಿದೆ. 

ಎರಡೂ ಕ್ಷೇತ್ರಗಳಲ್ಲಿ ಈಡಿಗರ ಮತಗಳು ಹಾಗೂ ಉಪ ಪಂಗಡ ಬಿಲ್ಲವರ ಮತಗಳು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಬಿಜೆಪಿಗೆ ಅಲ್ಲಿಯೂ ಅನುಕೂಲವಾಗಲಿದೆ ಎನ್ನುವ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್ನದ್ದಾಗಿದೆ. ವಿಧಾನ ಪರಿಷತ್ ನಾಯಕರಾಗಿ, ವಿರೋಧ ಪಕ್ಷದ ನಾಯಕರಾಗಿ, ಸಮಾಜ ಕಲ್ಯಾಣ, ಮುಜರಾಯಿ, ಮೀನುಗಾರಿಕೆ, ಬಂದರು ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಚಿವರಾಗಿ ಸಮರ್ಥ ಆಡಳಿತ ನೀಡಿದ್ದಲ್ಲದೆ, ಆಯಾ ಇಲಾಖೆಗಳಲ್ಲಿ ಸಾಕಷ್ಟು ಸುಧಾರಣೆ ತಂದ  ಖ್ಯಾತಿಯೂ ಶ್ರೀನಿವಾಸ ಪೂಜಾರಿ ಅವರ ಬೆನ್ನಿಗಿದೆ. ವೈಯಕ್ತಿಕ ವ್ಯಕ್ತಿತ್ವ, ನಡವಳಿಕೆಯಲ್ಲೂ ಕಿಂಚಿತ್ತು ದರ್ಪವಿಲ್ಲದ ಅವರ ಸರಳತೆ, ಸಾಮಾನ್ಯರಲ್ಲಿ ಸಾಮಾನ್ಯರೊಂದಿಗೂ ಆತ್ಮೀಯತೆ, ಪ್ರೀತಿ, ವಿಶ್ವಾಸದಿಂದ ನಡೆದುಕೊಳ್ಳುವ ಕಾರಣಕ್ಕೆ ಅವರು ಒಂದು ರೀತಿ ಅಜಾತ ಶತೃ ಇದ್ದಂತೆ. ಈ ಕಾರಣಕ್ಕೆ ವಿರೋಧ ಪಕ್ಷಗಳಲ್ಲೂ ಅವರು ಹೆಚ್ಚು ವಿಶ್ವಾಸಿಗಳನ್ನು ಗಳಿಸಿದ್ದಾರೆ.

ಸಮಾವೇಶಕ್ಕೆ ಬಂದವರಿಗೆ ₹200 ಗ್ಯಾರಂಟಿ! ಕಾರ್ಯಕ್ರಮ ಮುಗಿದ ಬಳಿಕ ಹಣಕ್ಕಾಗಿ ಬಿಸಲಲ್ಲಿ ಕಾದು ಸುಸ್ತಾದ ಮಹಿಳೆಯರು!

ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಮಟ್ಟದಿಂದಲೇ ರಾಜಕೀಯದಲ್ಲಿ ಬೆಳೆದು ಬಂದಿರುವ ಅವರು, ಸ್ಥಳೀಯ ಸಂಸ್ಥೆಗಳ ಮೂಲಕ ಪರಿಷತ್ತಿಗೆ ನಡೆದ ಕಳೆದ ಚುನಾವಣೆಯಲ್ಲಿ ಹಣವನ್ನೇ ಖರ್ಚು ಮಾಡದೆ ಹೆಚ್ಚಿನ ಅಂತರದಿಂದ ಗೆದ್ದು ಬಂದವರಾಗಿದ್ದಾರೆ. ಈ ಎಲ್ಲಾ ವರ್ಚಸ್ಸುಗಳನ್ನು ಈಗ ಅವರು ಲೋಕಸಭೆ ಚುನಾವಣೆಯಲ್ಲಿ ಪಣಕ್ಕಿಡಲಿದ್ದಾರೆ.

click me!