ರಾಜ್ಯದ ಹಲವೆಡೆ ಪ್ರತಿಭಟನೆ, ಮೂಲಸೌಕರ್ಯ ಕೊರತೆ, ಮತದಾನ ಬಹಿಷ್ಕಾರ!

By Kannadaprabha NewsFirst Published Apr 27, 2024, 7:03 AM IST
Highlights

ಹಲವು ಕಾರಣಗಳಿಗೆ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಿದ ಘಟನೆಗಳು ಮೊದಲ ಹಂತದ ಚುನಾವಣೆ ನಡೆದ ಹಲವು ಕ್ಷೇತ್ರಗಳಲ್ಲಿ ಜರುಗಿವೆ. ಚಾಮರಾಜನಗರದ ಕೆರೆದಿಂಬ ಗೊಂಬೆಗಲ್ಲು ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. 

ಬೆಂಗಳೂರು (ಏ.27): ಹಲವು ಕಾರಣಗಳಿಗೆ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಿದ ಘಟನೆಗಳು ಮೊದಲ ಹಂತದ ಚುನಾವಣೆ ನಡೆದ ಹಲವು ಕ್ಷೇತ್ರಗಳಲ್ಲಿ ಜರುಗಿವೆ. ಚಾಮರಾಜನಗರದ ಕೆರೆದಿಂಬ ಗೊಂಬೆಗಲ್ಲು ಗ್ರಾಮದಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಅಧಿಕಾರಿಗಳು ಮನವೊಲಿಸಿದ ನಂತರ ಮಧ್ಯಾಹ್ನ 12ರ ಬಳಿಕ ಮತದಾನ ನಡೆದಿದೆ. ಬೇಲೂರು ತಾಲೂಕಿನ ಹೊನ್ನೇನಹಳ್ಳಿ ಕಾವಲಿನ ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದಿರುವುದನ್ನು ಖಂಡಿಸಿ ಗ್ರಾಮಸ್ಥರು ಮತದಾನ ಮಾಡದೆ ಪ್ರತಿಭಟನೆ ನಡೆಸಿದರು. 

ತಾಲೂಕಿನ ಹನಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊನ್ನೆನಹಳ್ಳಿ ಗ್ರಾಮದ ಸುಮಾರು ೪೫ ಕುಟುಂಬಗಳು ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸದಿರುವುದನ್ನು ಖಂಡಿಸಿ ಮತಗಟ್ಟೆ ಸಂಖ್ಯೆ ೫೭ರಲ್ಲಿ ಮತದಾನ ಮಾಡುವುದಿಲ್ಲ ಎಂದು ಚುನಾವಣೆ ಪ್ರಕ್ರಿಯೆಯಿಂದ ಹೊರಗುಳಿದಿದ್ದಾರೆ. ಹಾಗೆಯೇ ಮಳವಳ್ಳಿ ತಾಲೂಕಿನಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಹಲವು ಕಡೆ ಮತಪಟ್ಟಿಯಿಂದ ಮತದಾರರು ಹೆಸರು ಕೈಬಿಟ್ಟು ಹೋಗಿದ್ದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. 

ತಾಲೂಕಿನ ದಾಸನದೊಡ್ಡಿ ಗ್ರಾಮಸ್ಥರು ಮತಪಟ್ಟಿಯಲ್ಲಿ 30ಕ್ಕೂ ಹೆಚ್ಚು ಮತದಾರರನ್ನು ಕೈಬಿಡಲಾಗಿದೆ ಎಂದು ಆರೋಪಿಸಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು. ಮೃತಪಟ್ಟ ಹೆಸರನ್ನು ಡಿಲೀಟ್ ಮಾಡಲು ಹೋಗಿ ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ಡಿಲೀಟ್ ಮಾಡಿದ್ದಾರೆಂದು ಕಿಡಿಕಾರಿದರು. ಹಾಸನದ ಅರಕಲಗೂಡಿನ ಬಸವಾಪಟ್ಟಣ ಸಮೀಪದ ಕಾನನಕೊಪ್ಪಲು ಗ್ರಾಮದ ಜನ ಪಕ್ಕದ ಗ್ರಾಮಕ್ಕೆ ತೆರಳಿ ಮತದಾನ ಮಾಡಬೇಕಾಗಿತ್ತು. ಇದನ್ನು ವಿರೋಧಿಸಿ ಮತದಾನ ಬಹಿಷ್ಕಾರಕ್ಕೆ ಮುಂದಾದ ಘಟನೆ ನಡೆಯಿತು. 

ಬಿಜೆಪಿಯಲ್ಲಿ ಎಲ್ಲರಿಗೂ ಒಂದೇ ನ್ಯಾಯ: ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ಜತೆಗೆ ಮೂಲಭೂತ ಸೌಕರ್ಯಗಳಿಂದ ವಮಚಿತರಾಗಿದ್ದು, ಹೀಗಾಗಿ ಚುನಾವಣೆ ಬಹಿಷ್ಕರಿಸುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದರು. ಆದರೆ, ರಾಮನಾಥಪುರ ಮತ್ತು ಬಸವಾಪಟ್ಟಣದ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಿ, ಮತದಾನ ಆಗುವಂತೆ ನೋಡಿಕೊಂಡರು. ಅರಕಲಗೂಡು ತಾಲೂಕಿನ ನೆಲಮಾಕನಹಳ್ಳಿಯ ಮತಗಟ್ಟೆ 37ರಲ್ಲಿ ಮತಪಟ್ಟಿಯಲ್ಲಿ ಹಲವು ಹೆಸರುಗಳು ಕೈಬಿಟ್ಟಿವೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಮತಗಟ್ಟೆಗೆ ನುಗ್ಗಿ ಮತಪತ್ರ ಹರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡಾ ನಡೆದಿದೆ.

click me!