ಲಾಕ್‌ಡೌನ್‌ನಿಂದಾಗಿ ರಾಜ್ಯಕ್ಕೆ ಎದುರಾಗಿದೆ ಆರ್ಥಿಕ ಸಂಕಷ್ಟ: ಬಿಎಸ್‌ವೈ

By Kannadaprabha NewsFirst Published Dec 10, 2020, 8:35 AM IST
Highlights

ಲಾಕ್‌ ಡೌನ್‌ನಿಂದಾಗಿ ರಾಜ್ಯಕ್ಕೆ ಭಾರೀ ಪ್ರಮಾಣದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಮುಖ್ಯಮಂತ್ರಿ  ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ. 

ವಿಧಾನಸಭೆ (ಡಿ.10):  ಕೋವಿಡ್‌, ಪ್ರವಾಹ ಸೇರಿದಂತೆ ಯೋಜನೇತರ ಕಾರ್ಯಗಳಿಗಾಗಿ ವೆಚ್ಚ ಮಾಡಲಾದ 3320.40 ಕೋಟಿ ರು. ಮೊತ್ತದ ಎರಡನೇ ಕಂತಿನ ಪೂರಕ ಅಂದಾಜಿಗೆ ಸದನವು ಧ್ವನಿ ಮತದ ಮೂಲಕ ಒಪ್ಪಿಗೆ ನೀಡಿತು.

ಬುಧವಾರ ಪೂರಕ ಅಂದಾಜಿಗೆ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸದನವನ್ನು ಕೋರಿದರು. ಪೂರಕ ಅಂದಾಜಿನ ಮೇಲೆ ಚರ್ಚೆ ನಡೆದ ಬಳಿಕ ಸದನವು ಧ್ವನಿ ಮತದ ಮೂಲಕ ಅಂಗೀಕರಿಸಿತು.

ಕಳೆದ ವರ್ಷ ಸರ್ಕಾರದಲ್ಲಿ 2809 ಕೋಟಿ ಗೋಲ್ಮಾಲ್‌ ..

ಲಾಕ್‌ಡೌನ್‌ ಜಾರಿಯಿಂದಾಗಿ ರಾಜ್ಯವು ಆರ್ಥಿಕ ಸಂಕಷ್ಟಎದುರಿಸಿದ್ದು, ರಾಜಸ್ವ ಸಂಗ್ರಹದಲ್ಲಿ ಮತ್ತು ಜಿಎಸ್‌ಟಿ ಕ್ರೋಢೀಕರಣ ಮಾಡುವಲ್ಲಿ ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಬಿಎಂಟಿಸಿ ನೌಕರರ ವೇತನಕ್ಕಾಗಿ 168 ಕೋಟಿ ರು., ಕೋವಿಡ್‌ ನಿಯಂತ್ರಣ ಸಂಬಂಧ ತುರ್ತು ಔಷಧಿ, ಆರ್‌ಟಿಪಿಸಿಆರ್‌ ಕಿಟ್ಸ್‌, ಎಕ್ಸ್‌ ಟ್ರಾಕ್ಸನ್‌ ಕಿಟ್‌ ಖರೀದಿಗೆ ಸಂಬಂಧಿಸಿದಂತೆ 170.72 ಕೋಟಿ ರು. ಮತ್ತು ವೆಂಟಿಲೇಟರ್‌, ಪಲ್ಸ್‌ ಆಕ್ಸಿಮೀಟರ್‌ ಖರೀದಿಗೆ 34.68 ಕೋಟಿ ರು. ವೆಚ್ಚ ಮಾಡಲಾಗಿದೆ. ಆಗಸ್ಟ್‌-ಸೆಪ್ಟೆಂಬರ್‌ ತಿಂಗಳಲ್ಲಿ ಉಂಟಾದ ಪ್ರವಾಹದಿಂದ ಹಾನಿಗೀಡಾದ ಮನೆಗಳ ದುರಸ್ತಿ, ಪುನರ್‌ ನಿರ್ಮಾಣಕ್ಕಾಗಿ ಪರಿಹಾರ ನೀಡಲು ಕಂದಾಯ ಇಲಾಖೆ 74.19 ಕೋಟಿ ರು.ನಷ್ಟುಖರ್ಚು ಮಾಡಿದೆ. ಕೇಂದ್ರ ಸರ್ಕಾರ ಘೋಷಿಸಿರುವ ಪಿಎಂಜಿಕೆಎವೈ ಯೋಜನೆಯನ್ನು ಅನುಷ್ಠಾನಗೊಳಿಸಲು 711.62 ಕೋಟಿ ರು. ವೆಚ್ಚ ಮಾಡಲಾಗಿದೆ. ಈ ಮೊತ್ತವು ರಾಜ್ಯಕ್ಕೆ ವಾಪಸ್‌ ಬರಲಿದೆ ಎಂದು ಹೇಳಿದರು.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಮೊದಲನೇ ಕಂತಿನಲ್ಲಿ 4008 ಕೋಟಿ ರು. ಮಂಡಿಸಲಾಗಿದ್ದು, ಎರಡನೇ ಕಂತಿನಲ್ಲಿ 3320 ಕೋಟಿ ರು. ಮಂಡಿಸಲಾಗಿದೆ. ತೆರಿಗೆಗಳ ವಸೂಲಿ ಸರಿಯಾಗಿ ಆಗಿಲ್ಲ. ಕಳೆದ ವರ್ಷಕ್ಕಿಂತ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಜಿಎಸ್‌ಟಿ ಸಹ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ. ಹೀಗಿರುವಾಗ ಯಾವ ಮೂಲದಿಂದ ಆದಾಯ ಕ್ರೋಢೀಕರಣ ಮಾಡಲಾಗುತ್ತದೆ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು ಎಂದು ಒತ್ತಾಯಿಸಿದರು.

click me!