ರಾಜ್ಯದಲ್ಲಿ 4 ದಿನಗಳ ಬಳಿಕ 400ಕ್ಕಿಂತ ಕಡಿಮೆ ಸಾವು

By Kannadaprabha NewsFirst Published Jun 5, 2021, 7:54 AM IST
Highlights

* ಶುಕ್ರವಾರ 364 ಬಲಿ, 16068 ಸೋಂಕಿನ ಪ್ರಕರಣ
* ಪಾಸಿಟಿವಿಟಿ ಪ್ರಮಾಣ ಶೇ.10.66ಕ್ಕೆ ಇಳಿಕೆ
* ರಾಜ್ಯದಲ್ಲಿ ಶುಕ್ರವಾರ 2.35 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ವಿತರಣೆ
 

ಬೆಂಗಳೂರು(ಜೂ.05): ರಾಜ್ಯದಲ್ಲಿ ಶುಕ್ರವಾರ 16,068 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಧೃಢ ಪಟ್ಟಿದೆ. 364 ಮಂದಿ ಮರಣವನ್ನಪ್ಪಿದ್ದಾರೆ. 22,316 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ.

1.50 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದ್ದು ಪಾಸಿಟಿವಿಟಿ ದರ ಶೇ.10.66ಕ್ಕೆ ಕುಸಿದಿದೆ. ಬೆಂಗಳೂರಿನಲ್ಲಿ 3,221 ಮಂದಿಯಲ್ಲಿ ಸೋಂಕು ಧೃಢ ಪಟ್ಟಿದ್ದು ಉಳಿದ ಪ್ರಕರಣಗಳು ರಾಜ್ಯದ ಇತರ ಭಾಗಗಳಿಂದ ವರದಿಯಾಗಿದೆ. ಇನ್ನು ಚೇತರಿಕೆ ಪ್ರಮಾಣ ಶೇ.89ಕ್ಕೆ ತಲುಪಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 2.80 ಲಕ್ಷಕ್ಕೆ ಇಳಿದಿದೆ.

ಶುಕ್ರವಾರ ಪ್ರಮಾಣದಲ್ಲಿಯೂ ಕುಸಿತ ದಾಖಲಾಗಿದ್ದು ನಾಲ್ಕು ದಿನಗಳ ಬಳಿಕ 400ಕ್ಕಿಂತ ಕಡಿಮೆ ಸಾವು ವರದಿಯಾಗಿದೆ. ಸಾವಿನ ದರ ಶೇ.2.6ರಷ್ಟಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 26.69 ಲಕ್ಷ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 23.58 ಲಕ್ಷ ಮಂದಿ ಗುಣ ಹೊಂದಿದ್ದಾರೆ. ಒಟ್ಟು 30,895 ಮಂದಿ ಮೃತರಾಗಿದ್ದಾರೆ.

ತಂದೆಯ ಅಂತ್ಯ ಸಂಸ್ಕಾರದಲ್ಲಿಯೇ ಮಗ ಕುಸಿದು ಬಿದ್ದು ಸಾವು

ಎಲ್ಲೆಲ್ಲಿ ಹೆಚ್ಚು ಸಾವು:

ಶುಕ್ರವಾರ ಬೆಂಗಳೂರು ನಗರದಲ್ಲಿ 206, ಮೈಸೂರು 18, ಕೋಲಾರ 10, ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ 9, ಬಳ್ಳಾರಿ, ದಾವಣಗೆರೆ, ಶಿವಮೊಗ್ಗ ತಲಾ 8 ಮಂದಿ ಮೃತರಾಗಿದ್ದಾರೆ.

ಲಸಿಕೆ ಅಭಿಯಾನ:

ರಾಜ್ಯದಲ್ಲಿ ಶುಕ್ರವಾರ 2.35 ಲಕ್ಷ ಡೋಸ್‌ ಕೋವಿಡ್‌ ಲಸಿಕೆ ವಿತರಿಸಲಾಗಿದೆ. ಇದರಲ್ಲಿ 2.16 ಲಕ್ಷ ಮೊದಲ ಡೋಸ್‌ ಮತ್ತು 18,409 ಎರಡನೇ ಡೋಸ್‌ ಲಸಿಕೆ ನೀಡಲಾಗಿದೆ. ಈ ಪೈಕಿ ಯಾರಲ್ಲಿಯೂ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ.
ರಾಜ್ಯದಲ್ಲಿ ಈವರೆಗೆ 1.46 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದ್ದು 28.29 ಲಕ್ಷ ಮಂದಿ ಎರಡೂ ಡೋಸ್‌ ಪೂರ್ಣಗೊಳಿಸಿದ್ದಾರೆ. 45 ವರ್ಷ ಮೇಲ್ಪಟ್ಟ16,134, 18 ರಿಂದ 44 ವರ್ಷದೊಳಗಿನ 404 ಮಂದಿ, ಮುಂಚೂಣಿ ಕಾರ್ಯಕರ್ತರು 1,166 ಮಂದಿ, ಆರೋಗ್ಯ ಕಾರ್ಯಕರ್ತರು 922 ಮಂದಿ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ಪಡೆದಿದ್ದಾರೆ. 18 ವರ್ಷದಿಂದ 44 ವರ್ಷದೊಳಗಿನ 1.45 ಲಕ್ಷ ಮಂದಿ, 45 ವರ್ಷ ಮೇಲ್ಪಟ್ಟ 64,622, ಮುಂಚೂಣಿ ಕಾರ್ಯಕರ್ತರು 5,258 ಆರೋಗ್ಯ ಕಾರ್ಯಕರ್ತರು 922 ಮಂದಿ ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಪಡೆದಿದ್ದಾರೆ.
 

click me!