ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರಿಗೆ ನಿರ್ಬಂಧ

By Kannadaprabha NewsFirst Published Oct 23, 2022, 8:59 AM IST
Highlights

ವಿಶ್ವ ವಿಖ್ಯಾತ ಕೆಆರ್‌ಎಸ್‌ ಬೃಂದಾವನ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ.

ಶ್ರೀರಂಗಪಟ್ಟಣ (ಅ.23): ವಿಶ್ವ ವಿಖ್ಯಾತ ಕೆಆರ್‌ಎಸ್‌ ಬೃಂದಾವನ ಉದ್ಯಾನವನದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷಗೊಂಡು ಪ್ರವಾಸಿಗರು ಹಾಗೂ ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ಶನಿವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಚಿರತೆ ಅಣೆಕಟ್ಟೆ ದಕ್ಷಿಣ ದ್ವಾರದ ಬಳಿಯ ನಗುವನ ತೋಟದಿಂದ ಅಣೆಕಟ್ಟೆ ಮೆಲ್ಭಾಗದಲ್ಲಿ ನಡೆದು ಬಂದು ನಂತರ ಬೃಂದಾವನದ ಕಡೆಗೆ ಹಾರಿ ಹೋದುದ್ದನ್ನ ಅಣೆಕಟ್ಟೆಬಳಿ ಗಿಡ-ಗಂಟೆ ತೆರವು ಮಾಡುತ್ತಿದ್ದ ನಿಗಮದ ಕೆಲಸಗಾರರು ಗಮನಿಸಿದ್ದಾರೆ. ಇದರಿಂದ ಕಾವೇರಿ ನೀರಾವರಿ ನಿಗಮ ಸಿಬ್ಬಂದಿ, ಅಣೆಕಟ್ಟೆಭದ್ರತೆಗೆ ನಿಯೋಜನೆಗೊಂಡಿರುವ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಹಾಗೂ ಪ್ರವಾಸಿಗರು ಆತಂಕಗೊಡಿದ್ದಾರೆ.

ಬೃಂದಾವನ ಬಳಿ ಚಿರತೆ ಕಾಣಿಸಿಕೊಂಡ ಬಗ್ಗೆ ಕೆಲಸಗಾರರ ಮಾಹಿತಿ ಪಡೆದ ಅಧಿಕಾರಿಗಳು ಮತ್ತು ಕರ್ನಾಟಕ ಕೈಗಾರಿಕಾ ಭದ್ರತಾ ಪಡೆ ಉಸ್ತುವಾರಿ ಅಧಿಕಾರಿ ಸಂತೋಷ ಸ್ಥಳ ಪರಿಶೀಲನೆ ನಡೆಸಿ ಚಿರತೆ ನಡೆದು ಹೋಗಿರುವ ಹೆಜ್ಜೆ ಗುರುತು ಕಂಡು ಬಂದಿರುವುದಾಗಿ ತಿಳಿದು ಬಂದಿರುವುದಾಗಿ ಹೇಳಿದ್ದಾರೆ. ಪ್ರವಾಸಿಗರ ಸುರಕ್ಷತೆ ದೃಷ್ಠಿಯಿಂದ ಶನಿವಾರ ಪ್ರವಾಸಿಗರಿಗೆ ಬೃಂದಾವನಕ್ಕೆ ಪ್ರವೇಶಕ್ಕೆ ನಿರ್ಬಂಧಿಸಿ ಚಿರತೆ ಪ್ರತ್ಯಕ್ಷ ಕುರಿತು ಶ್ರೀರಂಗಪಟ್ಟಣ ವಲಯ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಿರುವುದಾಗಿ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಘಾರೂಕ್‌ ಅಬು ಮಾಹಿತಿ ನೀಡಿದ್ದಾರೆ. ಇವರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ, ಚಿರತೆ ಸೆರೆ ಹಿಡಿಯಲು ರಾಯಲ್‌ ಆರ್ಕಿಡ್‌ ಬಳಿ ಬೋನ್‌ ಇರಿಸಿದ್ದಾರೆ.

Chikkamagaluru: ಕಾಫಿ ತೋಟಕ್ಕೆ ಬಂದ ಚಿರತೆ ಅರಣ್ಯಾಧಿಕಾರಿಗಳ ಬಲೆಗೆ

ಚಿರತೆ ಹಾವಳಿ ಕಡಿವಾಣಕ್ಕೆ ಆಗ್ರಹ: ಅರಣ್ಯ ಇಲಾಖೆಯವರು ಚಿರತೆ ಸೆರೆ ಹಿಡಿಯುವುದರ ಜತೆಗೆ ಸಾರ್ವಜನಿಕರಲ್ಲಿನ ಭಯ ಹೋಗಲಾಡಿಸಲು ಮುಂದಾಗುವಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ. ಸುದರ್ಶನ ಅವರಿಗೆ ಮನವಿ ಮಾಡಿದರು. ತಾಲೂಕಿನ ಸಾಲ್ಕೋಡ್‌ ಗ್ರಾಮದಲ್ಲಿ ವಿಪರೀತವಾಗಿ ಚಿರತೆ ಕಾಟದ ಹಿನ್ನೆಲೆ ಕಾಂಗ್ರೆಸ್‌ ಮುಖಂಡ ಮಂಜುನಾಥ ನಾಯ್ಕ ನೇತ್ರತ್ವದಲ್ಲಿ ಸ್ಥಳೀಯರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಸಮಾಲೋಚನಾ ಸಭೆಯಲ್ಲಿ ಆಗ್ರಹಿಸಿದರು. ಗ್ರಾಮದಲ್ಲಿ ಕಾಡು ಪ್ರಾಣಿಯ ಹಾವಳಿ ವಿಪರೀತವಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ. 

ತಾವು ಬೆಳೆದ ಬೆಳೆ ಹಾನಿಯಿಂದ ಕಂಗೆಟ್ಟಿದ್ದು, ರೈತರಿಗೆ ಇತ್ತೀಚಿನ ವರ್ಷದಲ್ಲಿ ಸಾಕು ಪ್ರಾಣಿಯಾದ ನಾಯಿ, ಆಕಳುಗಳು ತಮ್ಮ ಮುಂದೆಯೇ ಪ್ರಾಣ ಕಳೆದುಕೊಳ್ಳುತ್ತಿವೆ. ಇದೀಗ ಮನುಷ್ಯರ ಮೇಲೂ ಹಾನಿ ಮಾಡುತ್ತಿದ್ದು, ಇಲಾಖೆಯ ಸಿಬ್ಬಂದಿ ಕಾಡು ಪ್ರಾಣಿಗಳ ನಿಯಂತ್ರಣ ಮಾಡಿ ಸಾರ್ವಜನಿಕರು ನೆಮ್ಮದಿಯಿಂದ ಜೀವನ ನಡೆಸುವಂತೆ ಮಾಡಬೇಕು ಎಂದರು. ಸಾಲ್ಕೋಡ್‌ ಕೆಳಗಿನಕೇರಿಯ ಶಂಕರ ನಾಯ್ಕ ಅವರ ಆಕಳ ಕರು ಚಿರತೆ ದಾಳಿಗೊಳಗಾದ ಸ್ಥಳ ಪರಿಶೀಲನೆ ನಡೆಸಿ, ಇಲಾಖೆಯ ಅಧಿಕಾರಿಗಳು ಮತ್ತು ಸಾರ್ವಜನಿಕರಿಂದ ಮಾಹಿತಿ ಪಡೆದರು. 

ಹುಟ್ಟುಹಬ್ಬಕ್ಕೆ ಬಿಂಕದಕಟ್ಟಿಯ ಭೀಮಾ ಹೆಸರಿನ ಚಿರತೆಯನ್ನು ದತ್ತು ಪಡೆದ ಬಾಲಕ

ಚಿರತೆ ಹಾವಳಿ ನಿಯಂತ್ರಿಸುವಂತೆ ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗುವ ಜೊತೆ ಪರಿಹಾರ ಒದಗಿಸುವಂತೆ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆರ್‌ಎಫ್‌ಒ ವಿಕ್ರಂ ರೆಡ್ಡಿ, ಗ್ರಾಪಂ ಉಪಾಧ್ಯಕ್ಷೆ ಪುಷ್ಪಾ ಮಹೇಶ, ಸದಸ್ಯೆ ಆಶಾ ಮಡಿವಾಳ, ದೀಪಕ ನಾಯ್ಕ, ಮುಖಂಡರಾದ ವಿನಾಯಕ ಶೆಟ್ಟಿ, ಸಂದೇಶ ಶೆಟ್ಟಿ, ಕಿರಣ ಭಂಡಾರಿ, ಮಹೇಶ ನಾಯ್ಕ, ಜಯ ಕರ್ನಾಟಕ ಸಂಘದ ಪ್ರದೀಪ ಶೆಟ್ಟಿ, ಆರ್‌.ಕೆ. ಮೇಸ್ತ, ರಾಘವೇಂದ್ರ ನಾಯ್ಕ, ಶ್ರೀನಾಥ ಶೆಟ್ಟಿ, ವಸಂತ ಅರೇಅಂಗಡಿ, ಶ್ರೀರಾಮ ಜಾದೂಗಾರ, ದಿವಾಕರ ನಾಯ್ಕ, ರಾಘವ ಹೆಗಡೆ ಗ್ರಾಮಸ್ಥರು ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

click me!