ಸಿದ್ದು ಸರ್ಕಾರದ ಮೊದಲ ವಿಕೆಟ್‌ ಪತನ ನಿಶ್ಚಿತ: ಅಶೋಕ್‌

By Kannadaprabha NewsFirst Published Jun 1, 2024, 5:00 AM IST
Highlights

ಸಿದ್ದರಾಮಯ್ಯನವರ ಕಳೆದ ಸರ್ಕಾರವಿದ್ದಾಗ ಡಿವೈಎಸ್ಪಿ ಅನುಪಮಾ ಶೆಣೈ ರೋಸತ್ತು ರಾಜೀನಾಮೆ ನೀಡಿದರು. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಬಂಡೆ, ಡಿ.ಕೆ ರವಿ ಸಾವು ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿದ್ದು.‌ ಭಾಗ್ಯ ಭಾಗ್ಯ ಎನ್ನುವ ಸರ್ಕಾರ ಅಧಿಕಾರಿಗಳ ಜೀವನ ಭಾಗ್ಯವನ್ನೂ ಕಿತ್ತುಕೊಂಡಿದೆ ಎಂದು ಆರೋಪಿಸಿದ ವಿಪಕ್ಷ ನಾಯಕ ಆರ್‌.ಅಶೋಕ್‌ 
 

ಶಿವಮೊಗ್ಗ (ಜೂ.01): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದೆ. ಒಂದು ವರ್ಷದ ಸಾಧನೆಯಲ್ಲಿ ಸಚಿವ ನಾಗೇಂದ್ರ ಮೊದಲ‌ ವಿಕೆಟ್ ಪತನವಾಗಲಿದೆ. ಮೃತ ಅಧಿಕಾರಿ ಕುಟುಂಬಕ್ಕೆ ಗೃಹ ಸಚಿವರು ಪೊಳ್ಳು ಭರವಸೆ ನೀಡಿದ್ದಾರೆ. ಜಿಲ್ಲಾಧಿಕಾರಿ ಇನ್ನೂ ಸಂತ್ರಸ್ತರ ಮನೆಗೆ ಬಂದಿಲ್ಲ.‌ ಹಾಗಾಗಿ ಸರ್ಕಾರದ ಭರವಸೆಯ ಬಗ್ಗೆ ಅನುಮಾನವಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಟೀಕಿಸಿದರು. 

ಶಿವಮೊಗ್ಗದ ವಿನೋಬನಗರದಲ್ಲಿರುವ ಮೃತ ಅಧಿಕಾರಿ ಚಂದ್ರಶೇಖರನ್‌ ಮನೆಗೆ ಶುಕ್ರವಾರ ಸಂಜೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಚಂದ್ರಶೇಖರನ್‌ ಸಾವು ನಿಷ್ಠಾವಂತ ಅಧಿಕಾರಿಗಳಿಗೆ ಭಯ ಹುಟ್ಟಿಸಿದೆ. ಸಿದ್ದರಾಮಯ್ಯ ಸರ್ಕಾರ ಬಂದಾಗಲೆಲ್ಲ ಅಧಿಕಾರಿಗಳು ಭಯ ಭೀತಿಗೆ ಒಳಗಾಗಿದ್ದಾರೆ. ವಾಲ್ಮೀಕಿ ನಿಗಮಕ್ಕೂ ಐಟಿ ಕಂಪನಿಗೂ ಏನು ಸಂಬಂಧ, ಪರಿಶಿಷ್ಟ ಜಾತಿ ಅಭಿವೃದ್ಧಿಗಾಗಿ ಹಣ ವಿನಿಯೋಗಿಸುವ ನಿಗಮ ಐಟಿ ಕಂಪನಿಗೆ ಹಣ ಹೇಗೆ ವರ್ಗಾಯಿಸಲಿದೆ. ಹಣಕಾಸು ಸಚಿವರಾಗಿ ಸಿದ್ದರಾಮಯ್ಯನವರೇ ಇದ್ದರೂ ಹಣಕಾಸು ಸಚಿವಾಲಯದ ಅನುಮತಿಯಿಲ್ಲದೆ ಹೇಗೆ ವರ್ಗಾವಣೆ ಆಗಿದೆ ಎಂದು ಪ್ರಶ್ನಿಸಿದರು.

Latest Videos

ಕಾಂಗ್ರೆಸ್‌ ಹೈಕಮಾಂಡ್‌ಗೆ ರಾಜ್ಯ ಸರ್ಕಾರವೇ ಎಟಿಎಂ: ಬಿ.ವೈ.ವಿಜಯೇಂದ್ರ ಆರೋಪ

ಚಂದ್ರಶೇಖರನ್‌ ಗೆ ನ್ಯಾ.ನಾಗಮೋಹನ್ ದಾಸ್ ಬೆಸ್ಟ್ ಅವಾರ್ಡ್ ನೀಡಿದ್ದಾರೆ. ಕೋವಿಡ್ ಇದ್ದಾಗ‌ ಒಂದು ತಿಂಗಳವರೆಗೆ ಐಸಿಯುವಿನಲ್ಲಿದ್ದ ಚಂದ್ರಶೇಖರ್ ಬದುಕುಳಿದಿದ್ದೇ ಹೆಚ್ಚು. ಭ್ರಷ್ಟಚಾರಿ ಅಧಿಕಾರಿ ಆಗಿದ್ದರೆ ಅವರು ಮಾಡಿರುವ 20 ಲಕ್ಷ ರು. ಸಾಲ ತೀರಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.

ಸಿದ್ದರಾಮಯ್ಯನವರ ಕಳೆದ ಸರ್ಕಾರವಿದ್ದಾಗ ಡಿವೈಎಸ್ಪಿ ಅನುಪಮಾ ಶೆಣೈ ರೋಸತ್ತು ರಾಜೀನಾಮೆ ನೀಡಿದರು. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಬಂಡೆ, ಡಿ.ಕೆ ರವಿ ಸಾವು ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಿದ್ದು.‌ ಭಾಗ್ಯ ಭಾಗ್ಯ ಎನ್ನುವ ಸರ್ಕಾರ ಅಧಿಕಾರಿಗಳ ಜೀವನ ಭಾಗ್ಯವನ್ನೂ ಕಿತ್ತುಕೊಂಡಿದೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲ ನಾಲ್ಕು ಸಂಗತಿಗಳು ಸಂಭವಿಸುತ್ತದೆ.‌ ಒಂದು ಕಾನೂನು ಸುವ್ಯವಸ್ಥೆ ಗೂಂಡಾಗಳಿಗೆ ಗುತ್ತಿಗೆ ಆಗುತ್ತದೆ. ಎರಡು, ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗುತ್ತದೆ . ಮೂರು ಬರ ಎಂಬುದು ರಾಜ್ಯಕ್ಕೆ ಕಟ್ಟಿಟ್ಟ ಬುತ್ತಿಯಾಗುತ್ತದೆ. ಅಲ್ಪಸಂಖ್ಯಾತರ ಓಲೈಕೆ ಮಾಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಅಲ್ಪಾವಧಿ ಸರ್ಕಾರ ಎಂದು ಭವಿಷ್ಯ ನುಡಿದರು.‌

ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ, ನೈತಿಕ ಹೊಣೆ ಹೊತ್ತು ಸಿಎಂ ರಾಜೀನಾಮೆ ನೀಡಲಿ: ಅಶ್ವತ್ಥ ನಾರಾಯಣ್

ತರಾತುರಿಯಲ್ಲಿ ಸಿಐಡಿಗೆ ಕೊಟ್ಟಿದ್ದೇಕೆ?

ಸರ್ಕಾರದ ಸಿಎಂ ಮತ್ತು ಡಿಸಿಎಂ ಇಬ್ಬರೂ ತರಾತುರಿಯಲ್ಲಿ ಸಭೆ ನಡೆಸುತ್ತಿದ್ದಾರೆ. ಸಿಬಿಐಗೆ ಪ್ರಕರಣ ಹೋಗುತ್ತಿದೆ ಎಂದು ಸಭೆ ನಡೆಸಲಾಗುತ್ತಿದೆ. ಸಿಐಡಿ ತನಿಖೆ‌ ಎಂಬುದೇ ದೊಂಬರಾಟ. ನೊಂದ ಕುಟುಂಬಸ್ಥರ ಅನುಮತಿ ಪಡೆದು ತನಿಖೆ ಸಿಐಡಿಗೆ ಕೊಡಬೇಕಿತ್ತು. ಆದರೆ, ಸರ್ಕಾರ ತರಾತುರಿಯಲ್ಲಿ ಸಿಐಡಿಗೆ ಹಸ್ತಾಂತರಿಸಿದ್ದು ಹೇಗೆ? ಅವ್ಯವಹಾರ ನಡೆದರೂ ಒಬ್ಬನ ಬಂಧನವಾಗಿಲ್ಲ ಎಂದು ಅಶೋಕ್‌ ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್‌ ವಿರುದ್ಧವೇ ವಾಮಾಚಾರ ನಡೆಸಲಾಗುತ್ತಿದೆ ಎನ್ನುತ್ತಿದ್ದಾರೆ. ಅವರ ಬಾಯಿಯಲ್ಲಿ ಹೋಮ ಹವನದ ಬಗ್ಗೆ ಹೇಳಿರುವುದು ಸಿಂಪತಿ ತೆಗೆದುಕೊಳ್ಳಲು ಹೊರಟಿರುವುದು ಸ್ಪಷ್ಟ. ಪ್ರಜ್ವಲ್ ರೇವಣ್ಣ‌ ಬಂಧನ ತಡವಾಗಿದೆ. ಪ್ರಜ್ವಲ್‌ಗೆ ಬುದ್ಧಿ ಇದ್ದಿದ್ದರೆ ಕಾನೂನಿಗೆ ಶರಣಾಗಬೇಕಿತ್ತು. ತಡವಾದರೂ ಬಂದು ಶರಣಾಗಿದ್ದಾರೆ. ತನಿಖೆಯಾಗಲಿ ಕಾನೂನು‌ ನೋಡಿಕೊಳ್ಳಲಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ತಿಳಿಸಿದ್ದಾರೆ.  

click me!