
ವಿರಾಜಪೇಟೆ (ಕೊಡಗು) (ನ.24): ಕ್ರೀಡಾಮನೋಭಾವ ಮೆರೆಯಬೇಕಿದ್ದ ಮೈದಾನವೊಂದು ನಿನ್ನೆ ರಾತ್ರಿ ಕ್ಷಣಕಾಲ ರಣರಂಗವಾಗಿ ಬದಲಾದ ಘಟನೆ ಕೊಡಗಿನ ವಿರಾಜಪೇಟೆಯಲ್ಲಿ ನಡೆದಿದೆ.
ವಿರಾಜಪೇಟೆ ತಾಲ್ಲೂಕು ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆಯುತ್ತಿದ್ದ ಪ್ರತಿಷ್ಠಿತ 'ಮೆಮೋರಿಯಲ್ ಫುಟ್ಬಾಲ್ ಕಪ್' ಪಂದ್ಯಾವಳಿಯ ವೇಳೆ ಎರಡು ತಂಡಗಳ ನಡುವೆ ಭಾರೀ ಗಲಾಟೆ ಏರ್ಪಟ್ಟಿದೆ. ಕಡಂಗ ಹಾಗೂ ಸುಂಟಿಕೊಪ್ಪ ತಂಡಗಳ ನಡುವಿನ ರೋಚಕ ಪಂದ್ಯದ ಬಳಿಕ ಈ ಘಟನೆ ನಡೆದಿದೆ.
ಪಂದ್ಯದಲ್ಲಿ ಸುಂಟಿಕೊಪ್ಪ ತಂಡವು ಕಡಂಗ ತಂಡದ ವಿರುದ್ಧ ಜಯಗಳಿಸಿತ್ತು. ಗೆಲುವಿನ ಖುಷಿಯಲ್ಲಿದ್ದ ಸುಂಟಿಕೊಪ್ಪ ತಂಡದ ಆಟಗಾರರು ಮತ್ತು ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಈ ವೇಳೆ ಸೋಲಿನ ಆಘಾತದಲ್ಲಿದ್ದ ಕಡಂಗ ತಂಡದ ಕಡೆಯ ಕೆಲ ಯುವಕರು, ಸಂಭ್ರಮಿಸುತ್ತಿದ್ದವರ ಮೇಲೆ ಏಕಾಏಕಿ ಡ್ರಮ್ ಒಂದನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ. ಇದೇ ವಿಚಾರವು ವಿಕೋಪಕ್ಕೆ ಹೋಗಿ, ಎರಡೂ ತಂಡಗಳ ನಡುವೆ ಮಾತಿನ ಚಕಮಕಿ ನಡೆದು, ಅದು ಮಾರಾಮಾರಿಗೆ ತಿರುಗಿದೆ.
ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆಯೇ, ತಕ್ಷಣವೇ ಮಧ್ಯಪ್ರವೇಶಿಸಿದ ವಿರಾಜಪೇಟೆ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಗಲಾಟೆ ನಿಯಂತ್ರಿಸಿದ ಪೊಲೀಸರು, ಕ್ರೀಡಾಂಗಣದಲ್ಲಿ ಶಾಂತಿ ಕಾಪಾಡುವ ಮೂಲಕ ಸ್ಥಗಿತಗೊಂಡಿದ್ದ ಪಂದ್ಯಾವಳಿಯನ್ನು ಮತ್ತೆ ಮುಂದುವರಿಸಲು ಅವಕಾಶ ಮಾಡಿಕೊಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ