Kodagu: ರಾಜ್ಯದಲ್ಲಿ ಉಗ್ರರ ತರಬೇತಿ ಶಾಲೆಯಾಗುತ್ತಿದೆಯಾ ಕೊಡಗು?

By Sathish Kumar KHFirst Published Dec 6, 2022, 5:13 PM IST
Highlights

ರಾಜ್ಯದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ ಹಾಗೂ ಮಂಗಳೂರು ಎಲ್ಲಿಯೇ ಬಾಂಬ್‌ ಸ್ಫೋಟ ಪ್ರಕರಣ, ಧಾರ್ಮಿಕ ಹಿನ್ನೆಲೆಯಲ್ಲಿನ ಹತ್ಯಾಕಾಂಡ ನಡೆದಿದ್ದರೂ ಅದಕ್ಕೆ ಸಂಬಂಧಿಸಿದಂತಹ ಅಪರಾಧಿಗಳು ಕೊಡಗಿನ ರೆಸಾರ್ಟ, ಸ್ಟೇ ಹೋಂ ಗಳಲ್ಲಿ ತಂಗಿರುವುದು ಹಾಗೂ ಅಲ್ಲಿ ತರಬೇತಿ ಪಡೆದುಕೊಂಡಿರುತ್ತಾರೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರಿಗೆ ಕೊಡಗು ತರಬೇತಿ ಶಾಲೆ ಆಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತಿದೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಡಿ.6):ಯಾವುದೇ ಉಗ್ರ ಚಟುವಟಿಕೆಗಳು ನಡೆದರು ಆ ಚಟುವಟಿಕೆಯ ಹೆಜ್ಜೆ ಗುರುತ್ತುಗಳು ಕೊಡಗಿನಲ್ಲೂ ಮೂಡಿರುತ್ತವೆ ಎನ್ನುವುದಕ್ಕೆ ಹಲವು ನಿದರ್ಶನಗಳಿವೆ. ಹೀಗಾಗಿಯೇ ಕೊಡಗು ಜಿಲ್ಲೆ ನಿಜವಾಗಿಯೂ ಉಗ್ರ ಚಟುವಟಿಕೆಗಳ ತರಬೇತಿ, ಆಶ್ರಯ ತಾಣವೇ ಎನ್ನುವ ಪ್ರಶ್ನೆ ಮೂಡತೊಡಗಿದೆ. ಅದಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆಯೂ ಕಾರಣವಾಗುತ್ತಿದೆ ಎನ್ನುವುದು ಸಾರ್ವಜನಿಕರ ಆಕ್ರೋಶವಾಗಿದೆ.

ಕೊಡಗು ಪ್ರಾಕೃತಿಕವಾಗಿ ಸಂಪತ್ಭರಿತ ಜಿಲ್ಲೆಯಾಗಿದ್ದು, ದೇಶ ವಿದೇಶಿಗರನ್ನು ಸೆಳೆಯುತ್ತಿದೆ. ಇಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ. ಇದನ್ನು ಅವಲಂಬಿಸಿ ಹೋಂಸ್ಟೇ, ರೆಸಾರ್ಟ್, ಹೊಟೇಲ್ ಉದ್ಯಮ ದೊಡ್ಡಪ್ರಮಾಣದಲ್ಲಿ ಬೆಳೆದಿದೆ. ಆದರೆ ಈ ಉದ್ಯಮದ ಮೇಲೆ ಜಿಲ್ಲಾಡಳಿತ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಿ ನಿಯಂತ್ರಣ ಮಾಡುವುದರಲ್ಲಿ ಸೋತಿದೆ, ಜಾಣಕುರುಡುತನ ಪ್ರದರ್ಶಿಸಿ ಅನೈತಿಕ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಾಣವಾಗಿ ಬೆಳೆಯುವಂತೆ ಮಾಡುತ್ತಿದೆ ಎಂದು ಸ್ಥಳೀಯ ಸಂಘ ಸಂಸ್ಥೆಗಳು ಅಸಮಾಧಾನ ಹೊರಹಾಕುತ್ತಿವೆ. 

Mangauru bomb blast: ಹೋಂ ಸ್ಟೇಯಲ್ಲಿ ಸ್ತ್ರೀಯರ ಜತೆ ತಂಗಿದ್ದ ಶಾರೀಕ್‌!

ಎಲ್ಲ ಉಗ್ರರಿಗೂ ಕೊಡುಗು ನಂಟಿದೆ: 
ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್ ಮದನಿ ಕೊಡಗಿನ ಸೋಮವಾರಪೇಟೆ ತಾಲೂಕಿನ ಹೊಸತೋಟದಲ್ಲಿ ನೆಲೆಸಿದ್ದ. ಅಲ್ಲಿಯೇ ಬಾಂಬ್‍ಗಳನ್ನು ತಯಾರಿಸುತ್ತಿದ್ದ ಎನ್ನುವುದು ನಂತರವಷ್ಟೇ ಅದು ಬೆಳಕಿಗೆ ಬಂದಿತ್ತು. ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ನಡೆದ ಪ್ರವೀಣ್ ನೆಟ್ಟಾರು ಪ್ರಕರಣದ ಹತ್ಯೆ ಆರೋಪಿಗಳು ಕೊಡಗಿಗೆ ಬಂದು ನೆಲೆಸಿದ್ದರು ಎನ್ನುವುದು ಎನ್‍ಐಎ ಅಧಿಕಾರಿಗಳು ಜಿಲ್ಲೆಗೆ ಬಂದು ತಲಾಶ್ ನಡೆಸಲು ಆರಂಭಿಸಿದ ಬಳಿಕವೆ ಗೊತ್ತಾಯಿತು. ಇವಿಷ್ಟೇ ಯಾಕೆ ಈಗ ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರಿಕ್ ಕೊಡಗಿನ ವೆಸ್ಟ್ ನಮ್ಮೆಲೆ ಗ್ರಾಮದಲ್ಲಿ 2022 ರ ಮೇ ತಿಂಗಳಿನಲ್ಲಿ ನಡೆದ ಕಾಡಿನಲ್ಲಿ ಬದುಕುವುದು ಹೇಗೆ ಎಂಬ ತರಬೇತಿಯಲ್ಲಿ ಭಾಗವಹಿಸಿದ್ದ ಎನ್ನುವುದು ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡಿದೆ. ಹೀಗೆ ಯಾರೇ ಬಂದು ಕೊಡಗಿನಲ್ಲಿ ನೆಲೆಸಿ ಹೋಗುತ್ತಿದ್ದಾರೆ ಎನ್ನುವುದಕ್ಕೆ ಕೊಡಗಿನಲ್ಲಿ ಅನಧಿಕೃತವಾಗಿ ನಡೆಯುತ್ತಿರುವ ಹೋಂಸ್ಟೇ, ರೆಸಾರ್ಟ್‍ಗಳೂ ಕಾರಣ ಎನ್ನುವುದು ಜನರ ಅಸಮಾಧಾನವಾಗಿದೆ.

3,300 ಅನಧಿಕೃತ ಹೋಂ ಸ್ಟೇಗಳ ಸೇವೆ:
ಕೊಡಗಿನಲ್ಲಿ ನಾಲ್ಕುವರೆ ಸಾವಿರಕ್ಕೂ ಹೆಚ್ಚು ಹೋಂಸ್ಟೇಗಳಿವೆ. ಅವುಗಳಲ್ಲಿ 1,200 ಅಷ್ಟೇ ಅಧಿಕೃತವಾಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿತವಾಗಿವೆ. ಉಳಿದ 3,300 ಕ್ಕೂ ಹೆಚ್ಚು ಹೋಂಸ್ಟೇಗಳು ಅನಧಿಕೃತವಾಗಿ ನಡೆಯುತ್ತಿವೆ. ಇವುಗಳಿಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ. ಏನು ಚಟುವಟಿಕೆ ಮಾಡುತ್ತಾರೆ ಎನ್ನುವುದು ಗೊತ್ತೇ ಆಗುವುದಿಲ್ಲ. ಹೀಗಾಗಿ ಈ ಅನಧಿಕೃತ ಹೋಂಸ್ಟೇಗಳು ಕೊಡಗಿಗೆ ಮಗ್ಗುಲ ಮುಳ್ಳಾಗುತ್ತಿವೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಇವೆಷ್ಟೇ ಅಲ್ಲ ದೊಡ್ಡದೊಡ್ಡ ರೆಸಾರ್ಟ್‍ಗಳಲ್ಲೂ ಯಾವುದೇ ದಾಖಲೆಗಳನ್ನು ನಿರ್ವಹಿಸುತ್ತಿಲ್ಲ ಎಂದು ವಕೀಲರಾದ ಪವನ್ ಪೆಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

Kodagu: ಕೊಡಗಿನ ಅರಣ್ಯದಲ್ಲಿ ತರಬೇತಿ ಪಡೆದಿದ್ದ ಉಗ್ರ ಶಾರೀಕ್!

ದಾಖಲೆಗಳನ್ನು ಪಡೆಯದ ಹೋಂ ಸ್ಟೇಗಳು: 
ಪ್ರತೀ ಹೋಂಸ್ಟೇ, ರೆಸಾರ್ಟ್, ಹೊಟೇಲ್‍ಗಳಲ್ಲಿ ರೂಂಗಳನ್ನು ಕೊಡುವಾಗ ಕಡ್ಡಾಯವಾಗಿ ಅವರ ದಾಖಲೆಗಳನ್ನು ಪಡೆದುಕೊಂಡು ನೋಂದಣಿ ಮಾಡಿಕೊಳ್ಳಬೇಕು ಎನ್ನುವ ನಿಯಮವಿದ್ದರೂ ಅವುಗಳನ್ನು ಪಾಲಿಸುತ್ತಿಲ್ಲ. ಇದು ಕಾನೂನು ಬಾಹಿರ ಚಟುವಟಿಕೆ ನಡೆಸುವವರಿಗೆ ಅನುಕೂಲವಾಗಲಿದೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ನರಸತ್ತವರಂತೆ ನಡೆದುಕೊಳ್ಳುತ್ತಿವೆ ಎಂದು ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ. ಅನಂತ ಶಯನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅವಲಂಬಿಸಿ ನಡೆಯುತ್ತಿರುವ ಹೋಂಸ್ಟೇ, ಹೊಟೇಲ್ ಮತ್ತು ರೆಸಾರ್ಟ್ ಉದ್ಯಮದ ಮೇಲೆ ಜಿಲ್ಲಾಡಳಿತವಾಗಲಿ ಅಥವಾ ಪ್ರವಾಸೋದ್ಯಮ ಇಲಾಖೆಯಾಗಲಿ ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಮಾಡದೇ ಇರುವುದು ಕಾನೂನು ಬಾಹಿರ ಚಟುವಟಿಕೆಗಳ ಹೆಜ್ಜೆಗುರುತ್ತುಗಳು ಕೊಡಗಿನಲ್ಲಿ ಹೆಚ್ಚುವುದುಕ್ಕೆ ಕಾರಣ ಎನ್ನುವುದು ಎರಡು ಮಾತಿಲ್ಲ.

click me!