ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು #KFCಕನ್ನಡಬೇಕು!

By Suvarna NewsFirst Published Oct 25, 2021, 10:37 PM IST
Highlights

* ಕನ್ನಡ ಹಾಡು ಹಾಕಿ ಎಂದ ಮಹಿಳೆ ಮೇಲೆ ದರ್ಪ ತೋರಿದ KFC ಸಿಬ್ಬಂದಿ
* ಕೆಎಫ್‌ಸಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಭಾರೀ ಆಕ್ರೋಶ
* ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು #KFCಕನ್ನಡಬೇಕು!

ಬೆಂಗಳೂರು, (ಅ.25): ಇಲ್ಲಿನ ಕೆಎಫ್‌ಸಿ (KFC) ಮಳಿಗೆಯಲ್ಲಿ ಕನ್ನಡ ಹಾಡು (Kannada Song) ಹಾಕದ ವಿಚಾರದಲ್ಲಿ ವಾಗ್ವಾದ ನಡೆದ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕನ್ನಡ ರಾಜ್ಯೋತ್ಸವದ (Kannada Rajyotsava) ಮುನ್ನಲೆಯಲ್ಲಿ ಸಾಮಾಜಿಕ ಜಾಲತಾಣ 'ಕೂ' ನಲ್ಲಿ  #KFCಕನ್ನಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

'ಬೆಂಗಳೂರಿನ (Bengaluru) ಕೆಎಫ್‌ಸಿ ಮಳಿಗೆಯಲ್ಲಿ ಮಹಿಳೆಯೊಬ್ಬರು ಕನ್ನಡ ಹಾಡು ಹಾಕದ ಕಾರಣದಿಂದಾಗಿ ಕೆಎಫ್‌ಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ. #KFCಕನ್ನಡಬೇಕು ಎಂಬ ಹ್ಯಾಶ್ ಟ್ಯಾಗ್ ಅಡಿ ಅನೇಕರು ಕರ್ನಾಟಕದಲ್ಲಿ ಕನ್ನಡ ಬಳಸಲಿ ಎನ್ನುವ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ. 

64 ವರ್ಷದಿಂದ ಬಳಸ್ತಿದ್ದ ಸ್ಲೋಗನ್ ಕೈ ಬಿಟ್ಟ KFC: ಕಾರಣ ಕೊರೋನಾ

'Kfc ಅಮೆರಿಕ ಮೂಲದ ಕರ್ನಲ್ ಹರ್ಲ್ಯಾಂಡ್ ಸ್ಯಾಂಡರ್ಸ್ ಎಂಬ ವೃದ್ಧನಿಂದ ಆರಂಭವಾಗಿ ಜನಪ್ರಿಯವಾಗಿದೆ. ಕಂಪನಿ ಯಾವುದೇ ಇದ್ದರೂ,ಆಯಾ ಪ್ರಾದೇಶಿಕ ಭಾಷೆಗೆ ಮಾನ್ಯತೆ ನೀಡಿ ಪ್ರಾದೇಶಿಕ ಭಾಷೆ ಅರಿತ ವ್ಯಕ್ತಿಗಳಿಗೆ ಉದ್ಯೋಗ ನೀಡಿದಲ್ಲಿ ಯಾವುದೇ ತೊಂದರೆಗಳು ಉಂಟಾಗದು. ಅಂತೆಯೇ ನಾವು ಕೂಡ ನಮ್ಮ ನಾಡಿನ ಭಾಷೆಯನ್ನು ಬಳಸುವ ಪದ್ಧತಿಯನ್ನು ಬೆಳೆಸಿಕೊಳ್ಳಬೇಕು.ಕನ್ನಡ ಭಾಷೆ ಗೊತ್ತಿದ್ದರೂ ನಟನೆ ಮಾಡುವ ಜನ  ತಮ್ಮಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು' ಎಂದು ಸವಿತಾ ಎನ್ನುವವರು ಕೂ ಮಾಡಿದ್ದಾರೆ. 

ಭಾನುವಾರ ಸಂಜೆ ಟ್ವಿಟ್ಟರ್‌ನಲ್ಲಿ #RejectKFC #KFCಕನ್ನಡಬೇಕು ಎಂಬ‌ ಹ್ಯಾಶ್ ಟ್ಯಾಗ್ ಮೂಲಕ ಕನ್ನಡಿಗರು‌ ಆಕ್ರೋಶ ವ್ಯಕ್ತಪಡಿಸಿದ್ದರು. #RejectKFC ಭಾರತಮಟ್ಟದಲ್ಲಿ ಸುಮಾರು‌ ಮೂರು ಗಂಟೆಗಳ‌ ಕಾಲ ಮೂರನೇ ಸ್ಥಾನದಲ್ಲಿ ಟ್ರೆಂಡ್ ಆಗಿತ್ತು.

'ಇಂತಹ ತಿಕ್ಕಾಟಗಳಿಗೆ ಕಾರಣ ,ವಿಶೇಷವಾಗಿ ಬೆಂಗಳೂರಿನಲ್ಲಿರುವ ಕನ್ನಡಿಗರು ಕನ್ನಡಕ್ಕೆ ಬೆಲೆ ಕೊಡದಿರುವುದು ಮತ್ತು ಅನ್ಯ ಭಾಷೆಯ ಮೇಲೆ ಮೋಹ ತೋರುವುದು! ಬೆಂಗಳೂರಿನ KFC ,ಬರ್ಗರ್ ಕಿಂಗ್ ಮತ್ತು ಮ್ಯಾಕ್ ಡೊನಾಲ್ಡ್ ಮಳಿಗೆಗಳಲ್ಲಿ 65 % ಕ್ಕೂ ಅಧಿಕ ಗ್ರಾಹಕರು ಅನ್ಯಭಾಷಿಕರು!! ಸರ್ಕಾರ ಕೆಲವು ಶಿಸ್ತಿನ ನಿಯಮ ತರೆದ ಹೊರತು ಏನೂ ಅಲ್ಲಾಡುವುದಿಲ್ಲ!' ಎಂದು ಮಂಜುನಾಥ್ ಎನ್ನುವರು ಬರೆದುಕೊಂಡಿದ್ದಾರೆ. 'ತಮಿಳನಾಡು ತರಹ ನಾವು ಕೂಡ ಕನ್ನಡ ಮಾತನಾಡು ಇಲ್ಲದಿದ್ದರೆ ಜಾಗ ಖಾಲಿ ಮಾಡು. ಸ್ವಲ್ಪ ದಿನ ಖರೀದಿ kfc ban ಮಾಡಿ ನೋಡಿ ಒಂದೇ ವಾರದಲ್ಲಿ ,ಕನ್ನಡ ಕನ್ನಡ ಅಂತ ಬರ್ತಾನೆ .ನಾವು ಒಗ್ಗಟ್ಟಾಗೋಣ' ಎಂದು ಬನಶಂಕರ್ ಅಭಿಪ್ರಾಯ ಪಟ್ಟಿದ್ದಾರೆ. 'ತಿಳಿಸಿ ಹೇಳುವುದರಲ್ಲಿ ಅರ್ಥವಿಲ್ಲ, ತಿಳಿಸಿ ಹೇಳುವ ಎಲ್ಲಾ ಆಂದೋಲನ, ಪ್ರತಿಭಟನೆ, ಅಭಿಯಾನ ಇನ್ನೊಂದು ಮತ್ತೊಂದು ಮಾಡಾಯ್ತು..ವ್ಯವಹಾರಿಕ ಭಾಷೆಯಾಗಿ ಕನ್ನಡ ಬಳಸಿ ಅಂತ ಈ ಮರಾಠಿಗರ ಥರ ಕತ್ತುಪಟ್ಟಿ ಹಿಡ್ದು ಹೇಳೋದ್ ಒಂದ್ ಬಾಕಿ ಇದೆ, ಅದೊಂದ್ ಆಗ್ಲಿ' ಎಂದು ವೀರಭದ್ರ ಎನ್ನುವವರು ಹೇಳಿದ್ದಾರೆ. 'ಆಯಾ ಪ್ರದೇಶದ ರಾಜ್ಯದ ಭಾಷೆಯಲ್ಲಿ ವ್ಯವಹರಿಸೋದು ವ್ಯವಹಾರದ ಲಕ್ಷಣ.. ಕನಿಷ್ಠ ಆ ನೈತಿಕತೆಯಾದ್ರು ಇರ್ಲಿ' ಎಂದು ಸುನೀಲ್ ಎನ್ನುವವರು ಕೂ ಮಾಡಿದ್ದಾರೆ.

click me!