ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಕಲಿ ಅಭ್ಯರ್ಥಿಗಳನ್ನು ತಡೆಯಲು ಹೊಸ ವ್ಯವಸ್ಥೆಯನ್ನು ಬಳಸಿದೆ. ವಿಧಾನಪರಿಷತ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಾಯೋಗಿಕವಾಗಿ ಬಳಸಿದ್ದು, ಯಶಸ್ವಿಯಾಗಿದೆ.
ಬೆಂಗಳೂರು: ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುವುದನ್ನು ತಪ್ಪಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲ ಬಾರಿಗೆ ಎಐ ತಾಂತ್ರಿಕತೆಯ ಮೊಬೈಲ್ ಆಧಾರಿತ ಅಭ್ಯರ್ಥಿ ದೃಢೀಕರಣ (ಮೊಬೈಲ್-ಬೇಸ್ಟ್ ಕ್ಯಾಂಡಿಡೇಟ್ ಅಥೆಂಟಿಕೇಷನ್) ವ್ಯವಸ್ಥೆಯನ್ನು ವಿಧಾನಪರಿಷತ್ನ ಖಾಲಿ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಬಳಸಿದೆ. ಇದನ್ನು ಪ್ರಾಧಿಕಾರದ ಎಂಜಿನಿಯರಿಂಗ್ ತಂಡ ಸಿದ್ಧಪಡಿಸಿದೆ. ಕಂಪ್ಯೂಟರ್ ಆಪರೇಟರ್ ಹಾಗೂ ಇತರ ಹುದ್ದೆಗಳ ನೇಮಕಕ್ಕೆ ನಡೆದ ಪರೀಕ್ಷೆಯಲ್ಲಿ ಇದನ್ನು ಪ್ರಾಯೋಗಿಕವಾಗಿ ಬಳಸಲಾಗಿದೆ. ಪ್ರಥಮ ಯತ್ನ ಯಶಸ್ವಿಯಾಗಿದೆ ಎಂದು ಕೆಇಎ ತಿಳಿಸಿದೆ.
ಹೇಗೆ ಕೆಲಸ ಮಾಡುತ್ತದೆ?:
ಪರೀಕ್ಷಾ ಕೊಠಡಿ ಪ್ರವೇಶಿಸುವ ವೇಳೆ ಸ್ಮಾರ್ಟ್ಫೋನ್ ಆ್ಯಪ್ ಬಳಸಿ ಅಭ್ಯರ್ಥಿಗಳ ಫೋಟೋ ಸೆರೆ ಹಿಡಿಯಲಾಗುತ್ತದೆ. ಇದು ತಕ್ಷಣ ಕೆಇಎ ಡೇಟಾ ಸರ್ವರ್ನೊಂದಿಗೆ ಸಂಪರ್ಕಗೊಂಡು ಅರ್ಜಿ ಸಲ್ಲಿಸುವಾಗ ಅಪ್ಲೋಡ್ ಮಾಡಿರುವ ಭಾವಚಿತ್ರದೊಂದಿಗೆ ತಾಳೆ ಮಾಡಿ ನೈಜ್ಯತೆ ದೃಢಪಡಿಸುತ್ತದೆ. ಶನಿವಾರ 2 ಪತ್ರಿಕೆಗಳಿಗೆ 341 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಮುಂದಿನ ದಿನಗಳಲ್ಲಿ ಇತರ ಪರೀಕ್ಷೆಗಳಿಗೂ ಇದರ ಬಳಕೆಯನ್ನು ವಿಸ್ತರಿಸಲಾಗುವುದು.
ಇದನ್ನೂ ಓದಿ: Karnataka Assembly: ಶಾಸಕರು, ಸಚಿವರ ವೇತನ ಏರಿಕೆ ಮಸೂದೆ, ಚರ್ಚೆ ಇಲ್ಲದೇ ಫಟಾಫಟ್ ಪಾಸ್!
ವೆಬ್ಸೈಟ್ನಲ್ಲಿ ಸಿಗದ ಓಎಂಆರ್ಶೀಟ್
ಪರೀಕ್ಷೆ ಮುಗಿದ ತಕ್ಷಣ ಅಭ್ಯರ್ಥಿಗಳ ಓಎಂಆರ್ಶೀಟ್ಗಳನ್ನು ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದೆ ಎಂದು ಕೆಇಎ ತಿಳಿಸಿತ್ತು. ಆದರೆ, ವೆಬ್ಸೈಟ್ನಲ್ಲಿನ ಲಿಂಕ್ ಕ್ಲಿಕ್ ಮಾಡಿದರೆ ತೆರೆದುಕೊಳ್ಳಲಿಲ್ಲ. ಇನ್ ವ್ಯಾಲಿಡ್ ಯುಆರ್ಎಲ್ ಎಂದು ತೋರಿ ಸುತ್ತಿತ್ತು. ಓಎಂಆರ್ ಅಪ್ಲೋಡ್ ಮಾಡುವುದರಿಂದ ಪಾರದರ್ಶಕತೆ ಇರುತ್ತದೆ. ಇದರಿಂದ ಅಕ್ರಮ/ಅನುಮಾನಗಳಿಗೆ ಅವಕಾಶವೇ ಇಲ್ಲದಂತಾಗಲಿದೆ ಎಂದು ಕೆಇಎ ತಿಳಿಸಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಆಲಿಕಲ್ಲು ಮಳೆ: ಇನ್ನೂ ನಾಲ್ಕೈದು ದಿನ ಈ ಭಾಗದಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ