* ಕ್ಲಬ್ಹೌಸ್ನಲ್ಲಿ ಸದ್ದು ಮಾಡಿದ ತುಳುನಾಡು ವರ್ಸಸ್ ಕರುನಾಡು
* ಮಂಗಳೂರಿನ ಬಗ್ಗೆ ಹಗುರವಾಗಿ ಮಾತನಾಡಿದ ವ್ಯಕ್ತಿ ಬಗ್ಗೆ ಭಾರೀ ಆಕ್ರೋಶ
* ತುಳುನಾಡನ್ನು ನಿಂದಿಸಿ ಮಾತನಾಡಿದ ಆಡಿಯೋ ವೈರಲ್
ಮಂಗಳೂರು (ಜೂ.28): ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಂ ಬಳಿಕ ಸದ್ಯ ಮಾತುಗಾರರಿಗೆ ಹಾಗೂ ಕೇಳುಗರಿಗೆಂದೇ ಹೇಳಿ ಮಾಡಿಸಿದಂತಿರುವ ಕ್ಲಬ್ಹೌಸ್ ಎಲ್ಲೆಡೆ ಸೌಂಡ್ ಮಾಡುತ್ತಿದೆ. ಆದರೆ ದಿನಗಳೆದಂತೆ ಇಲ್ಲಿ ನಡೆಯುತ್ತಿರುವ ಚರ್ಚೆಗಳು ಮಾತ್ರ ಭಾರೀ ವಿವಾದ ಸೃಷ್ಟಿಸುತ್ತಿವೆ. ಸದ್ಯ ಇಲ್ಲಿ ಚರ್ಚೆಯೊಂದರ ನಡುವೆ ಮಂಗಳೂರಿಗರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹೌದು ಸದ್ಯ ಕ್ಲಬ್ಹೌಸ್ನಲ್ಲಿ 'ಕರುನಾಡು ವರ್ಸಸ್ ತುಳುನಾಡು' ಎಂಬ ವಿಚಾರದ ಬಗ್ಗೆ ಚರ್ಚೆ ನಡೆದಿದ್ದು, ಈ ನಡುವೆ ತುಳುವರನ್ನು ನಿಂದಿಸಿರುವ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇಲ್ಲಿನ ದೇಗುಲಗಳಿಂದ ಹಿಡಿದು ಪ್ರತಿಭೆಗಳವರೆಗೆ ಎಲ್ಲಾ ವಿಚಾರವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
Clubhouse app ಲೋಗೋದಲ್ಲಿರುವ ಆ ಮಹಿಳೆ ಯಾರು?
ಕ್ಲಬ್ಹೌಸ್ನಲ್ಲಿ ತುಳುನಾಡಿನ ಬಗ್ಗೆ ಹಗುರವಾಗಿ ಮಾತನಾಡಿದ ಶರತ್ ಕುಮಾರ್ ಎಂಬಾತ ತುಳುನಾಡಿನ ದೇಗುಲದಿಂದ ಹಿಡಿದು, ಇಲ್ಲಿನ ಪ್ರತಿಭೆಗಳವರೆಗೆ ಎಲ್ಲರನ್ನೂ ನಿಂದಿಸಿದ್ದಾರೆ. ತನ್ನ ತರ್ಕವನ್ನು ಮುಂದಿಡುತ್ತಾ ರಾಜ್ಯದಲ್ಲಿ ಹಲವಾರು ದೇಗುಲಗಳಿವೆ ಹೀಗಿರುವಾಗ ಪದೇ ಪದೇ ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ಹೋಗುತ್ತೇವೆ. ಇದನ್ನು ಕಡಿಮೆ ಮಾಡಬೇಕು. ಅಲ್ಲದೇ ಇಂದು ಕನ್ನಡ ಟಿವಿ ಮಾಧ್ಯಮಗಳಲ್ಲಿ ತುಳುನಾಡಿನವರು ಮೆರೆಯುತ್ತಿದ್ದಾರೆ, ಅವರನ್ನು ಪ್ರೊಮೋಟ್ ಮಾಡುವುದು ಕಡಿಮೆ ಮಾಡಬೇಕು. ಎಂದಿರುವ ವ್ಯಕ್ತಿ ನಿರೂಪಕಿ ಅನುಶ್ರೀಗೆ ಸಿಗುತ್ತಿರುವ ಅವಕಾಶದ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮೊದಲು ನಮ್ಮವರಿಗೆ ಅವಕಾಶ ಸಿಗುತ್ತಿತ್ತು ಎಂದಿರುವ ವ್ಯಕ್ತಿ, ಯಾವಾಗ ಅನುಶ್ರೀ ಎಂಟ್ರಿಯಾದ್ರೋ ಆಗಿನಿಂದ ಆ ಕಡೆಯವರೇ ತುಂಬುತ್ತಿದ್ದಾರೆ ಎಂದಿದ್ದಾರೆ. ಈ ಮೂಲಕ ಕರ್ನಾಟಕವೇ ಬೇರೆ, ಮಂಗಳೂರೇ ಬೇರೆ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ, ಕರಾವಳಿಗೆ ಪ್ರವಾಸ ಹೋಗೋದು ಎಲ್ಲಿವರೆಗೆ ನಿಲ್ಲಿಸುದಿಲ್ವೋ ಅಲ್ಲಿವರೆಗೆ ಮಂಗಳೂರಿನವರ ಸೊಕ್ಕು ಮುರಿಯುವುದಿಲ್ಲ ಎಂದು ಮಾತನಾಡಿದ್ದಾರೆ.
ಅಷ್ಟರಲ್ಲಿ ಅನೇಕರು ದೇವರ ಬಗ್ಗೆ ಚರ್ಚೆ ಯಾಕೆ, ಮಂಗಳೂರಿನವರೂ ಕನ್ನಡಿಗರೇ ಎಂದು ಅರ್ಥೈಸಲು ಯತ್ನಿಸಿದ್ದರಾದರೂ ಅವರು ತಮ್ಮ ವಾದವನ್ನು ಮುಂದುವರೆಸಿದ್ದಾರೆ.
ಹೊಸ ಸೆನ್ಸೇಷನ್, ಕ್ಲಬ್ಹೌಸ್ ಹೌಸ್ಫುಲ್; ಏನಿದು ಆ್ಯಪ್? ಹೇಗೆ ಕೆಲಸ ಮಾಡುತ್ತದೆ?
ಸದ್ಯ ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕರಾವಳಿ ಜನತೆ ಈ ಬಗ್ಗೆ ತೀವ್ರ ಆಕ್ಎಪ ವ್ಯಕ್ತಪಡಿಸಿದ್ದಾರೆ. ಈ ವಿಚಾರ ಮುಂದೆ ಯಾವ ರೂಪ ಪಡೆಯುತ್ತೆ ಎಂದು ಕಾದು ನೊಡಬೇಕಷ್ಟೇ. ಇನ್ನು ಆರಂಭದಲ್ಲಿ ಉತ್ತಮ ಹಾಗೂ ಆರೋಗ್ಯಕರ ಚರ್ಚೆ ಮೂಲಕ ಜನಮನ್ನಣೆ ಗಳಿಸಿದ್ದ ಕ್ಲಬ್ಹೌಸ್ ಸದ್ಯ ಇಂತಹ ವಿವಾದಗಳಿಂದ ಸದ್ದು ಮಾಡುತ್ತಿದೆ ಎಂಬುವುದು ಉಲ್ಲೇಖನೀಯ.