
ದಾಂಡೇಲಿ (ಜ.31): ಇಲ್ಲಿಯ ದಾಂಡೇಲಪ್ಪ ದೇವಸ್ಥಾನದ ಎದುರು ಕಾಳಿ ನದಿ ತಟದಲ್ಲಿ ನಿರ್ಮಾಣಗೊಂಡಿರುವ ದೇಶದ ಎರಡನೇ ಹಾಗೂ ರಾಜ್ಯದ ಪ್ರಥಮ ಮೊಸಳೆ (ಕ್ರೋಕೊಡೈಲ್) ಪಾರ್ಕ್ (Crocodile Park) ಅನ್ನು ಶಾಸಕ ಆರ್.ವಿ.ದೇಶಪಾಂಡೆ (RV Deshpande) ಭಾನುವಾರ ಲೋಕಾರ್ಪಣೆ ಮಾಡಿದರು.
ಕಾಳಿ ನದಿ ಸಮೀಪದ ದಾಂಡೇಲಪ್ಪ ದೇವಸ್ಥಾನ ಮೊಸಳೆಗಳು ಹೆಚ್ಚಾಗಿ ಕಾಣಿಸಿಕೊಳ್ಳುವ ತಾಣವಾಗಿದೆ. ಹೀಗಾಗಿ ಈ ಪ್ರದೇಶದಲ್ಲಿ ಮೊಸಳೆ ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. ಸುಮಾರು ಎರಡು ಎಕರೆ ಜಾಗದಲ್ಲಿ ಈ ಪಾರ್ಕ್ ನಿರ್ಮಾಣವಾಗಿದೆ. ಈ ಪಾರ್ಕ್ ಪ್ರದೇಶದಲ್ಲಿ ಮೊಸಳೆ ಸೇರಿದಂತೆ ಕೆಲವು ಕಾಡು ಪ್ರಾಣಿಗಳ ಪ್ರತಿರೂಪಗಳನ್ನು ಸೃಷ್ಟಿಸಲಾಗಿದೆ. ಜತೆಗೆ, ಇಲ್ಲಿ ಮಕ್ಕಳ ಮೋಜಿಗೆ ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಸುಮಾರು ಮೂರು ಕೋಟಿ ವೆಚ್ಚದಲ್ಲಿ ಈ ಪಾರ್ಕ್ ನಿರ್ಮಿಸಲಾಗಿದೆ. ಪ್ರಕೃತಿಯ ನಡುವೆ ಪ್ರವಾಸಿಗರು ನೆಮ್ಮದಿಯಾಗಿ ಕಾಲಕಳೆಯುವ ವಾತಾವರಣ ಇಲ್ಲಿ ಸೃಷ್ಟಿಸಲಾಗಿದೆ. ಕಳೆದ ವರ್ಷವೇ ಈ ಪಾರ್ಕ್ ಉದ್ಘಾಟನೆಯಾಗಬೇಕಿದ್ದರೂ ಕೋವಿಡ್ನಿಂದಾಗಿ (Covid19) ಈಗ ಲೋಕಾರ್ಪಣೆಗೊಂಡಿದೆ. ಸದ್ಯ ಈ ಪಾರ್ಕ್ಗೆ ಉಚಿತ ಪ್ರವೇಶವಿದೆ.
ದಾಂಡೇಲಿ: ಮೀನು ಹಿಡಿಯಲು ಹೋಗಿ ಮೊಸಳೆ ಪಾಲಾದ ಬಾಲಕ..!
ಪ್ರವಾಸೋದ್ಯಮ ಅಭಿವೃದ್ಧಿಯಿಂದ ಜನರ ಜೀವನಮಟ್ಟ ಸುಧಾರಣೆ: ದಾಂಡೇಲಿ-ಜೋಯಿಡಾಗಳ ದಟ್ಟಅರಣ್ಯ ಇರುವ ಕಾರಣ ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಇದ್ದು, ಸ್ಥಳೀಯರಿಗೆ ಉದ್ಯೋಗ ದೊರೆತು ನೆಮ್ಮದಿಯ ಬದುಕು ನಡೆಸಿದಾಗ ಅಭಿವೃದ್ಧಿ ಸಾರ್ಥಕ ಎಂದು ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ನುಡಿದರು.
ಅವರು ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಯ ಸಹಯೋಗದಲ್ಲಿ ಸುಮಾರು ಮೂರು ಕೋಟಿಗಳ ವೆಚ್ಚದಲ್ಲಿ ಇಲ್ಲಿಯ ದಾಂಡೇಲಪ್ಪ ದೇವಸ್ಥಾನದ ಎದುರು ಕಾಳಿ ನದಿ ತಟದಲ್ಲಿ ನಿರ್ಮಾಣಗೊಂಡಿರುವ ದೇಶದ ಎರಡನೇ ಮತ್ತು ರಾಜ್ಯದ ಪ್ರಥಮ ಮೊಸಳೆ (ಕ್ರೋಕೊಡೈಲ್) ಪಾರ್ಕ್ನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಪ್ರವಾಸೋದ್ಯಮ ಅಭಿವೃದ್ಧಿ ಎಂದರೆ ಆ ಭಾಗದ ಜನರ ಮೂಲಭೂತ ಸೌಕರ್ಯ ಅಭಿವೃದ್ಧಿಯಾಗಿದೆ.
ಒಂದು ಕೈಗಾರಿಕೆಯಿಂದ ಸೀಮಿತ ಅಭಿವೃದ್ಧಿ ಸಾಧ್ಯವಾದರೆ, ಪ್ರವಾಸೋದ್ಯಮ ಅಭಿವೃದ್ಧಿಯಿಂದ ಎಲ್ಲ ವರ್ಗದ ಜನರಿಗೆ ಉದ್ಯೋಗ ದೊರೆಯುತ್ತದೆ ಎಂದರು. ಮೊಸಳೆ ಪಾರ್ಕ್ನ ಸರಿಯಾದ ನಿರ್ವಹಣೆಯೊಂದಿಗೆ ಜನಪ್ರಿಯಗೊಳಿಸುವಂತೆ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಜಯಂತ ಎಚ್.ವಿ. ಮಾತನಾಡಿ, ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಇಲಾಖೆಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲು ಸಿದ್ಧ ಎಂದರು.
ಆಹಾರಕ್ಕಾಗಿ ಹೋರಾಟ... ಜಿಂಕೆಯನ್ನು ಕಚ್ಚಿ ಅತಿಂದಿತ್ತ ಎಳೆದಾಡಿದ ಸಿಂಹ, ಮೊಸಳೆ
ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಆಲೂರು ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಜಾಧವ, ಉಪಾಧ್ಯಕ್ಷೆ ನೂರಜಹಾನ ನದಾಫ, ಅಂಬೇವಾಡಿ ಗ್ರಾಪಂ ಸದಸ್ಯ ಜಿ. ಪ್ರಕಾಶ, ದಾಂಡೇಲಿ ತಹಸೀಲ್ದಾರ್ ಸೈಲೇಶ ಪರಮಾನಂದ, ನಗರಸಭೆಯ ಪೌರಾಯುಕ್ತ ರಾಜಾರಾಮ ಪವಾರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಕೆ.ಎನ್. ಹಂಚಿನಮನಿ, ದೇವಾನಂದ ಅಮರಗೋಳಕರ, ಡಿವೈಎಸ್ಪಿ ಗಣೇಶ ಕೆ.ಎಲ್., ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ವಿ.ಆರ್. ಹೆಗಡೆ, ಪಕ್ಷದ ಮುಖಂಡರಾದ ಆರ್.ಪಿ. ನಾಯ್ಕ, ಕೀರ್ತಿ ಗಾಂವಕರ, ಅನಿಲ ದಂಡಗಲ, ಮೋಹನ ಹಲವಾಯಿ, ದಾಂಡೇಲಿ ನಗರಸಭಾ ಸದಸ್ಯರು, ಆಲೂರು ಗ್ರಾಪಂ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ