
ಬೆಂಗಳೂರು: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಇತ್ತೀಚಿನ ಬೆಳವಣಿಗೆಗಳ ಕುರಿತು ಸ್ಪಷ್ಟನೆ ನೀಡಿದ್ದು, ಯಾರೇ ಆಗಿರಲಿ ಮಹಿಳೆಯರ ಘನತೆಗೆ ಧಕ್ಕೆ ತಂದರೆ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಮಹಿಳಾ ಹೋರಾಟಗಾರರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಅದರಲ್ಲಿ “ಧರ್ಮಸ್ಥಳದ ಸೌಜನ್ಯ, ವೇದವಲ್ಲಿ ಅವರನ್ನೆಲ್ಲಾ ಯಾರು ಕೊಂದ್ರು ಎಂಬ ಅಂಶವನ್ನು ಒಳಗೊಂಡ ಪತ್ರವನ್ನು ಪ್ರಗತಿಪರರು ನೀಡಿದ್ದಾರೆ ಎಂದು ಚೌಧರಿ ವಿವರಿಸಿದರು.
ಈ ಕುರಿತು ಈಗಾಗಲೇ ಎಸ್ಐಟಿ ತನಿಖೆ ಪ್ರಾರಂಭವಾಗಿದೆ. “ಯಾರು ಸಂತ್ರಸ್ತೆಯರಿದ್ದರೂ ಅವರಿಗೆ ಬೆಂಬಲ ನೀಡುವುದು ನಮ್ಮ ಕರ್ತವ್ಯ. ಅನನ್ಯಾ ಭಟ್ ಅವರ ತಾಯಿ ‘ಪದೇಪದೇ ಪ್ರಶ್ನೆ ಮಾಡಿದರೆ ನಾನು ನೇಣು ಹಾಕಿಕೊಳ್ಳುತ್ತೇನೆ’ ಎಂದು ಹೇಳುತ್ತಿದ್ದಾರೆ. ಆದ್ದರಿಂದ ಅವರಿಗೂ ಎಸ್ಐಟಿ ಭದ್ರತೆ ಒದಗಿಸಬೇಕು ಎಂಬುದಾಗಿ ನಾನು ಶಿಫಾರಸು ಮಾಡಿದ್ದೇನೆ,” ಎಂದು ಅವರು ತಿಳಿಸಿದರು.
ಪ್ರಕರಣ ಈಗಾಗಲೇ ಎಸ್ಐಟಿ ತನಿಖೆಯಲ್ಲಿದೆ. ಯಾರಿಗೂ ಯಾವುದೇ ರೀತಿಯ ತೊಂದರೆ ಆಗದಂತೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ತನಿಖೆಯಲ್ಲಿ ಬೇಕಾದ ಎಲ್ಲಾ ಅಂಶಗಳು ಹೊರಬರುತ್ತವೆ. ನಾವು ಸತ್ಯ ಹೊರಬರುವುದನ್ನು ಕಾಯಬೇಕು ಎಂದು ನಾಗಲಕ್ಷ್ಮಿ ಚೌಧರಿ ಅವರು ಸ್ಪಷ್ಟಪಡಿಸಿದರು.
ಇನ್ನೊಂದು ಪತ್ರದಲ್ಲಿ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಗಂಭೀರ ಆರೋಪ ಹೊರಬಿದ್ದಿದ್ದು, “ಅವರು ಸುಳ್ಳು ಹೇಳಿಕೆ ನೀಡಿ ಮಹಿಳೆಯರ ಮಾನಕ್ಕೆ ಧಕ್ಕೆ ತಂದಿದ್ದಾರೆ. ಮಹಿಳೆಯರ ಮಾನಸಿಕ ಸ್ಥಿತಿ ಹಾಗೂ ಅವರ ಚಾರಿತ್ರ್ಯ ವಧೆಗೆ ಕಾರಣವಾದರೆ, ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನಾನು ಸೂಚನೆ ನೀಡುತ್ತಿದ್ದೇನೆ,” ಎಂದು ಚೌಧರಿ ಎಚ್ಚರಿಸಿದರು.
ಅದರೊಂದಿಗೆ ಭಾಸ್ಕರ್ ಪ್ರಸಾದ್ ಎಂಬವರು ವಿಜಯಲಕ್ಷ್ಮಿ ಪರವಾಗಿ ದೂರು ನೀಡಿದ್ದಾರೆ. “ಇದು ವಿಜಯಲಕ್ಷ್ಮಿ ಹಾಗೂ ರಮ್ಯಾ ಸಂಬಂಧಪಟ್ಟ ವಿಷಯವಲ್ಲ. ಯಾವುದೇ ಹೆಣ್ಣು ಮಕ್ಕಳ ಘನತೆಗೆ ಚ್ಯುತಿ ಉಂಟಾದರೆ ತಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಅವರು ಸ್ಪಷ್ಟಪಡಿಸಿದರು.
ಈ ಪ್ರಕರಣದಲ್ಲಿ ಈಗಾಗಲೇ ಎಂಟು ಮಂದಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಸಂಬದ್ಧವಾಗಿ ಪ್ರತಿಕ್ರಿಯಿಸುವವರಿಗೆ ಎಚ್ಚರಿಕೆ ನೀಡಿದ ಅವರು, “ಆರೋಗ್ಯಕರ ಚರ್ಚೆ ನಡೆಸಿದರೆ ಸ್ವಾಗತ. ಆದರೆ ಮಹಿಳೆಯರ ಘನತೆಗೆ ಧಕ್ಕೆ ತಂದರೆ ಅದು ಅಪರಾಧ. ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗಬಹುದು,” ಎಂದು ನಾಗಲಕ್ಷ್ಮಿ ಚೌಧರಿ ಎಚ್ಚರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ