ಸಾರಿಗೆ ನೌಕರರ ಸಂಧಾನ ವಿಫಲ: ಸರ್ಕಾರದ 26 ತಿಂಗಳ ಹಿಂಬಾಕಿಗೆ ಒಪ್ಪದ ನೌಕರರು, ಬಿಜೆಪಿ ಮೇಲೆ ಗೂಬೆ ಕೂರಿಸಿದ ಸಚಿವರು!

Published : Feb 19, 2026, 04:18 PM IST
KSRTC Employees Protest

ಸಾರಾಂಶ

ರಾಜ್ಯ ಸಾರಿಗೆ ನೌಕರರು 38 ತಿಂಗಳ ಪೂರ್ಣ ಹಿಂಬಾಕಿ ಹಣಕ್ಕಾಗಿ ಪಟ್ಟು ಹಿಡಿದಿದ್ದು, ಸರ್ಕಾರದ 26 ತಿಂಗಳ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ ಹಿಂದಿನ ಸರ್ಕಾರದ ಮೇಲೆ ಆರೋಪ ಹೊರಿಸಿದ್ದು, ಸಂಧಾನ ವಿಫಲವಾಗಿರುವುದರಿಂದ ಸಾರಿಗೆ ಬಂದ್‌ನ ಆತಂಕ ಎದುರಾಗಿದೆ.

ಬೆಂಗಳೂರು (ಫೆ.19): ರಾಜ್ಯದಲ್ಲಿ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮತ್ತು ಹಿಂಬಾಕಿ (Arrears) ಹಣದ ವಿಚಾರವಾಗಿ ಸರ್ಕಾರ ಮತ್ತು ನೌಕರರ ನಡುವಿನ ಸಂಘರ್ಷ ತಾರಕಕ್ಕೇರಿದೆ. ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಸರ್ಕಾರದ ಸಂಧಾನದ ಪ್ರಯತ್ನಗಳು ಸದ್ಯಕ್ಕೆ ವಿಫಲವಾಗಿವೆ. 26 ತಿಂಗಳ ಹಿಂಬಾಕಿ ನೀಡುವ ಸರ್ಕಾರದ ಪ್ರಸ್ತಾವನೆಯನ್ನು ನೌಕರರ ಸಂಘಟನೆಗಳು ಕಡಾಖಂಡಿತವಾಗಿ ತಿರಸ್ಕರಿಸಿದ್ದು, 38 ತಿಂಗಳ ಪೂರ್ಣ ಬಾಕಿಗಾಗಿ ಪಟ್ಟು ಹಿಡಿದಿವೆ.

ಬಿಜೆಪಿ ಸರ್ಕಾರವೇ ಈ ಸ್ಥಿತಿಗೆ ಕಾರಣ: ಸಚಿವ ರಾಮಲಿಂಗಾರೆಡ್ಡಿ

ಈ ಬಿಕ್ಕಟ್ಟಿನ ಕುರಿತು ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಿಂದಿನ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ. "'ಇವತ್ತಿನ ಈ ಪರಿಸ್ಥಿತಿಗೆ ನೇರವಾಗಿ ಬಿಜೆಪಿ ಸರ್ಕಾರವೇ ಕಾರಣ. 2020 ರಿಂದಲೇ ಆಗಬೇಕಿದ್ದ ವೇತನ ಪರಿಷ್ಕರಣೆಯನ್ನು ಬೊಮ್ಮಾಯಿ ಸರ್ಕಾರ ವಿಳಂಬ ಮಾಡಿ, 2023 ರಲ್ಲಿ ಗೆಜೆಟ್ ಹೊರಡಿಸಿತು. ಅವರು ಅಂದೇ ಕ್ರಮ ಕೈಗೊಂಡಿದ್ದರೆ ಇಂದು ನೌಕರರಿಗೆ ಇಷ್ಟು ದೊಡ್ಡ ಮೊತ್ತದ ಹಿಂಬಾಕಿ ಬಾಕಿ ಉಳಿಯುತ್ತಿರಲಿಲ್ಲ. ಅಲ್ಲದೆ, ನಿಗಮಗಳಲ್ಲಿ 4,000 ಕೋಟಿ ರೂಪಾಯಿ ಸಾಲ ಉಳಿಸಿ ಹೋಗಿದ್ದರು' ಎಂದು ಕಿಡಿಕಾರಿದರು.

ಮುಂದುವರಿದು ಮಾತನಾಡಿದ ಅವರು, 'ನೌಕರರ ಹಿತದೃಷ್ಟಿಯಿಂದ ನಾನೇ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸಿ, ಮೊದಲು ನೀಡಬೇಕಿದ್ದ 14 ತಿಂಗಳ ಹಿಂಬಾಕಿಯ ಜೊತೆಗೆ ಹೆಚ್ಚುವರಿ 12 ತಿಂಗಳು ಸೇರಿಸಿ ಒಟ್ಟು 26 ತಿಂಗಳ ಬಾಕಿ (ಅರಿಯರ್ಸ್) ನೀಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಸರ್ಕಾರ ಸುಮಾರು 1,272 ಕೋಟಿ ರೂಪಾಯಿಗಳನ್ನು ಭರಿಸಲು ಒಪ್ಪಿಕೊಂಡಿದೆ. ಆದರೆ, ನೌಕರರು 38 ತಿಂಗಳಿಗಾಗಿ ಪಟ್ಟು ಹಿಡಿಯುತ್ತಿರುವುದು ಸರಿಯಲ್ಲ' ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಣ್ಣೀರು ಹಾಕಿದ ನೌಕರರು: ಮಣಿಯದ ಸಂಘಟನೆಗಳು

ಇತ್ತ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಅವರು ನೌಕರರ ಸಂಧಾನಕ್ಕೆ ಮುಂದಾದರಾದರೂ ಯಶಸ್ವಿಯಾಗಲಿಲ್ಲ. 'ನನ್ನ ಹಂತದಲ್ಲಿ ಆಗಬೇಕಿದ್ದ 100 ಕೋಟಿ ರೂ. ಗ್ರಾಚ್ಯುಟಿ ಬಾಕಿಯನ್ನು ಈಗಾಗಲೇ ಬಿಡುಗಡೆ ಮಾಡಿಸಿದ್ದೇನೆ. ನಿವೃತ್ತ ಸಿಬ್ಬಂದಿಗೂ ಹಣ ನೀಡಲಾಗಿದೆ. ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಹೆಜ್ಜೆ ಇಡಬೇಕಾಗುತ್ತದೆ' ಎಂದು ಮನವಿ ಮಾಡಿದರು. ಆದರೆ, ಎಂಡಿ ಅವರ ಮಾತು ಕೇಳಿ ಪ್ರತಿಭಟನಾ ಸ್ಥಳದಲ್ಲಿದ್ದ ನೌಕರರು ಭಾವುಕರಾಗಿ ಕಣ್ಣೀರು ಹಾಕಿದರು. 'ನಮ್ಮ ಜೀವನ ನಡೆಸುವುದು ಕಷ್ಟವಾಗಿದೆ. ಸಾಲದ ಬಾಧೆ ಹೆಚ್ಚಾಗಿದೆ. ನಮಗೆ ನ್ಯಾಯಯುತವಾಗಿ ಸಿಗಬೇಕಾದ 38 ತಿಂಗಳ ಹಿಂಬಾಕಿ ಸಿಗುವವರೆಗೂ ನಾವು ಹೋರಾಟ ಕೈಬಿಡುವುದಿಲ್ಲ' ಎಂದು ನೌಕರರು ಪಟ್ಟು ಹಿಡಿದರು. ಸರ್ಕಾರವು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಸಾರಿಗೆ ಮುಖಂಡರು ಆರೋಪಿಸಿದ್ದಾರೆ.

ಬಜೆಟ್ ನಂತರ ಹಣ ಬಿಡುಗಡೆಯ ಭರವಸೆ:

ಸರ್ಕಾರವು 26 ತಿಂಗಳ ಹಿಂಬಾಕಿ ನೀಡಲು ಸಿದ್ಧವಿದ್ದು, ಬಜೆಟ್ ನಂತರ ಶೀಘ್ರವಾಗಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಜಂಟಿ ಕ್ರಿಯಾ ಸಮಿತಿಯ ಬೇಡಿಕೆಗಳ ಬಗ್ಗೆ ಚರ್ಚಿಸಲು ಬಾಗಿಲು ತೆರೆದಿದೆ ಎಂದು ಅಕ್ರಂ ಪಾಷಾ ತಿಳಿಸಿದ್ದಾರೆ. ಆದರೆ, 38 ತಿಂಗಳ ಪೂರ್ಣ ಹಣ ಸಿಗದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ನೌಕರರು ಎಚ್ಚರಿಸಿದ್ದಾರೆ. ನಾಳೆಯಿಂದ ಸಾರಿಗೆ ಬಂದ್ ಆಗಲಿದೆಯೇ ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಟೇಶ್ ಬಡ್ತಿಗಾಗಿ ಮುಖ್ಯ ಕಾರ್ಯದರ್ಶಿ ಕೋಟಿ ಲಂಚ ಆರೋಪ, 12 ಪ್ರಶ್ನೆಗಳಾಗಿ ಎಳೆಎಳೆಯಾಗಿ ಉತ್ತರ ಕೊಟ್ಟ ಶಾಲಿನಿ ರಜನೀಶ್
ಕಿರಿಯ ವಯಸ್ಸಿಗೆ ನ್ಯಾಯಾಧೀಶ ಪಟ್ಟ: ಶಿರಸಿ ಸುಮಂತ್‌ 2ನೇ ರ‍್ಯಾಂಕ್‌, ಧಾರವಾಡ ಸುಧಾ 24ನೇ ವಯಸ್ಸಿಗೆ ಜಡ್ಜ್!