ಕಿರಿಯ ವಯಸ್ಸಿಗೆ ನ್ಯಾಯಾಧೀಶ ಪಟ್ಟ: ಶಿರಸಿ ಸುಮಂತ್‌ 2ನೇ ರ‍್ಯಾಂಕ್‌, ಧಾರವಾಡ ಸುಧಾ 24ನೇ ವಯಸ್ಸಿಗೆ ಜಡ್ಜ್!

Published : Feb 19, 2026, 01:32 PM IST
Karnataka New Judge Sumanth Naik and Sudha

ಸಾರಾಂಶ

2025ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯದ ಯುವ ಕಾನೂನು ಪದವೀಧರರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶಿರಸಿಯ ಸುಮಂತ್ ನಾಯ್ಕ್ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದರೆ, ಧಾರವಾಡದ ಮೂವರು ಸೇರಿದಂತೆ ಹಲವು ಯುವಕ-ಯುವತಿಯರು ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು (ಫೆ.19): ಛಲವೊಂದಿದ್ದರೆ ಗುರಿ ಮುಟ್ಟುವುದು ಅಸಾಧ್ಯವಲ್ಲ ಎಂಬುದನ್ನು ಕರ್ನಾಟಕದ ಯುವ ಕಾನೂನು ಪದವೀಧರರು ಸಾಬೀತುಪಡಿಸಿದ್ದಾರೆ. 2025ನೇ ಸಾಲಿನ ಕರ್ನಾಟಕ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ವಿವಿಧ ಭಾಗಗಳ ಯುವ ಪ್ರತಿಭೆಗಳು ಅತ್ಯಂತ ಕಿರಿಯ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಒಟ್ಟು 83 ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಕರ್ನಾಟಕ ಹೈಕೋರ್ಟ್ ಪ್ರಕಟಿಸಿದ್ದು, ಇದರಲ್ಲಿ ಶಿರಸಿ ಮೂಲದ ಸುಮಂತ್ ಮಂಜುನಾಥ್ ನಾಯ್ಕ್ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದು ಗಮನ ಸೆಳೆದರೆ, ಧಾರವಾಡದ ಮೂವರು ಯುವ ವಕೀಲರು ನ್ಯಾಯಪೀಠ ಅಲಂಕರಿಸಲು ಸಜ್ಜಾಗಿದ್ದಾರೆ.

ಶಿರಸಿಯ ಸುಮಂತ್ ನಾಯ್ಕ್‌ಗೆ ರಾಜ್ಯಕ್ಕೆ 2ನೇ ರ್ಯಾಂಕ್

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾದ ಸುಮಂತ್ ಮಂಜುನಾಥ್ ನಾಯ್ಕ್, ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆಯುವ ಮೂಲಕ ಮಲೆನಾಡಿನ ಕೀರ್ತಿ ಹೆಚ್ಚಿಸಿದ್ದಾರೆ. ವಿಶೇಷವೆಂದರೆ ಸುಮಂತ್ ತಮ್ಮ ಮೊದಲ ಪ್ರಯತ್ನದಲ್ಲೇ ಈ ಅಪ್ರತಿಮ ಯಶಸ್ಸು ಕಂಡಿದ್ದಾರೆ. ಬೆಂಗಳೂರು ಲೋಕಾಯುಕ್ತದ ಸರ್ಕಾರಿ ಅಭಿಯೋಜಕರಾದ ಮಂಜುನಾಥ್ ನಾಯ್ಕ ಹಾಗೂ ವಕೀಲೆ ಸುಜಾತಾ ನಾಯ್ಕ ದಂಪತಿಯ ಪುತ್ರನಾಗಿರುವ ಸುಮಂತ್ ಅವರಿಗೆ ಕಾನೂನು ಕ್ಷೇತ್ರ ಮನೆಯಿಂದಲೇ ರಕ್ತಗತವಾಗಿ ಬಂದಿದೆ. ಪಠ್ಯದ ಜೊತೆಗೆ ಪತ್ಯೇತರ ಚಟುವಟಿಕೆಗಳಲ್ಲೂ ಸೈ ಎನಿಸಿಕೊಂಡಿರುವ ಇವರು, ಕಾನೂನು ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡುವ ಗುರಿ ಹೊಂದಿದ್ದಾರೆ.

ಧಾರವಾಡದ ವಕೀಲರ ಸಂಘಕ್ಕೆ ಹೆಮ್ಮೆ ತಂದ ಮೂವರು

ಧಾರವಾಡ ವಕೀಲರ ಸಂಘದ ಮೂವರು ಸದಸ್ಯರು ಅತ್ಯಂತ ಕಿರಿಯ ವಯಸ್ಸಿನಲ್ಲೇ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.

ಅನಿರುದ್ಧ ರಾಜೀವ್ ಜೋಶಿ (25): ನಿವೃತ್ತ ಜಿಲ್ಲಾ ನ್ಯಾಯಾಧೀಶ ರಾಜೀವ್ ಜೋಶಿ ಅವರ ಪುತ್ರರಾದ ಇವರು ರಾಜ್ಯಕ್ಕೆ 17ನೇ ರ್‍ಯಾಂಕ್ ಪಡೆದಿದ್ದಾರೆ. ರಾಜ್ಯ ಕಾನೂನು ವಿಶ್ವವಿದ್ಯಾಲಯದಿಂದ 3 ಚಿನ್ನದ ಪದಕಗಳೊಂದಿಗೆ ಪದವಿ ಪಡೆದಿದ್ದ ಇವರು, ತಂದೆಯ ಹಾದಿಯಲ್ಲೇ ಸಾಗಿ ನ್ಯಾಯಾಂಗದ ಸೇವೆಗೆ ಸಿದ್ಧರಾಗಿದ್ದಾರೆ.

ಸುಧಾ ಪಟ್ಟಣಶೆಟ್ಟಿ (24): ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದ ರೈತ ಕುಟುಂಬದ ಮಗಳಾದ ಸುಧಾ, ಪಟ್ಟ ಶ್ರಮಕ್ಕೆ ಇಂದು ಪ್ರತಿಫಲ ಸಿಕ್ಕಿದೆ. ಮೊದಲ ಯತ್ನದಲ್ಲೇ ರಾಜ್ಯಕ್ಕೆ 27ನೇ ರ್‍ಯಾಂಕ್ ಪಡೆದಿರುವ ಸುಧಾ, ಗ್ರಾಮೀಣ ಭಾಗದ ಹೆಣ್ಣುಮಕ್ಕಳಿಗೆ ಅತಿದೊಡ್ಡ ಸ್ಫೂರ್ತಿಯಾಗಿದ್ದಾರೆ. 24ರ ಹರೆಯದಲ್ಲೇ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದು ಇವರ ಸಾಧನೆಯ ಹಿರಿಮೆ.

ಋತೇಜಾ ಪಾಟೀಲ್: ಹಾನಗಲ್ ಮೂಲದ, ಹುಬ್ಬಳ್ಳಿ ನಿವಾಸಿ ನಿವೃತ್ತ ಜಿಲ್ಲಾ ನ್ಯಾಯಾಧೀಶರ ಪುತ್ರಿಯಾದ ಋತೇಜಾ ರಾಜ್ಯಕ್ಕೆ 53ನೇ ರ್‍ಯಾಂಕ್ ಪಡೆದಿದ್ದಾರೆ. 2024ರಲ್ಲಿ ಎಲ್‌ಎಲ್‌ಎಂ ಮುಗಿಸಿ ಎರಡನೇ ಪ್ರಯತ್ನದಲ್ಲಿ ಈ ಉನ್ನತ ಹುದ್ದೆ ಅಲಂಕರಿಸಿದ್ದಾರೆ.

ಯುವ ನ್ಯಾಯಾಧೀಶರಿಂದ ಹೊಸ ನಿರೀಕ್ಷೆ

ನ್ಯಾಯಾಂಗ ಕ್ಷೇತ್ರದಲ್ಲಿ ಈ ಹಿಂದೆ 30-35ರ ಹರೆಯದಲ್ಲಿ ನ್ಯಾಯಾಧೀಶರಾಗುವುದು ಹೆಚ್ಚಾಗಿ ಕಂಡುಬರುತ್ತಿತ್ತು. ಆದರೆ ಈಗ 24-25 ವರ್ಷದ ಯುವಕ-ಯುವತಿಯರು ನ್ಯಾಯಪೀಠ ಏರುತ್ತಿರುವುದು ವ್ಯವಸ್ಥೆಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ. ಅದರಲ್ಲೂ ರೈತ ಕುಟುಂಬದ ಪ್ರತಿಭೆಗಳು ಮತ್ತು ಕಿರಿಯ ವಯಸ್ಸಿನಲ್ಲೇ ಗೋಲ್ಡ್ ಮೆಡಲ್ ಪಡೆದವರು ನ್ಯಾಯಾಧೀಶರಾಗಿ ಆಯ್ಕೆಯಾಗಿರುವುದು ರಾಜ್ಯದ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಹೀರೋಗಳಿಗಿಂತ ಅತಿ ಹೆಚ್ಚು ಸಂಭಾವನೆ ಪಡೆದ ಕನ್ನಡದ ಏಕೈಕ ನಟಿ ಮಾಲಾಶ್ರೀ; ಇದು ಸಾಧ್ಯವಾಗಿದ್ದು ಹೀಗೆ..!
ನಟೇಶ್ ಭಡ್ತಿಗಾಗಿ ಶಾಲಿನಿ ರಜನೀಶ್ ಗೆ 1.60 ಕೋಟಿ ಲಂಚ, ಹಣ ಸಾಗಿಸಿದ ಕಾರು ಸಮೇತ ಸ್ಫೋಟಕ ದಾಖಲೆ ಬಿಡುಗಡೆ!