
ಬೆಂಗಳೂರು (ಡಿ.3): ಕರ್ನಾಟಕದಲ್ಲಿ ಅತಿ ದೊಡ್ಡ ಕಬ್ಬಿಣದ ಕಾರ್ಖಾನೆ ಇದ್ದು, ಮುಂದಿನ 4-5 ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ಕಬ್ಬಿಣ ಅದಿರು ಉತ್ಪಾದನೆ ಮಾಡುವ ರಾಜ್ಯವಾಗಲಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೇಂದ್ರ ಸರ್ಕಾರದ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದಿಂದ ಹಮ್ಮಿಕೊಂಡಿದ್ದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಮತ್ತು ಗಣಿಗಾರಿಕೆ ವಲಯದಲ್ಲಿನ ಅವಕಾಶಗಳ ಕುರಿತ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಪ್ರಸ್ತುತ ಒರಿಸ್ಸಾ ಗಣಿಗಾರಿಕೆಯ ರಾಜ್ಯವಾಗಿದೆ. ಅಲ್ಲಿ ಗಣಿಗಾರಿಕೆ ಪ್ರಮುಖ ಉದ್ಯಮ, ಅದನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಲ್ಲಿನ ನೀತಿಗಳನ್ನೇ ಇತರೆ ರಾಜ್ಯಗಳಿಗೆ ಅನ್ವಯಿಸುವುದು ಕೂಡ ಸೂಕ್ತವಲ್ಲ. ರಾಜ್ಯದಲ್ಲಿರುವ ಗುಣಮಟ್ಟದ ಗಣಿಗಳಿಂದ ಮಾತ್ರ ಉತ್ಪಾದನೆ ಸಾಧ್ಯವಾಗಲಿದೆ. ಇಂಧನ, ಗಣಿ ಹಾಗೂ ಉಕ್ಕು ಸಚಿವಾಲಯಗಳು ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಹಾಗೂ ಬೇಡಿಕೆಯಲ್ಲಿರುವ ಖನಿಜಗಳ ಉತ್ಪಾದನೆಗೆ ತೊಡಗಬೇಕು ಎಂದು ಅಭಿಪ್ರಾಯಪಟ್ಟರು.
2023ಕ್ಕೆ ಮತ್ತೆ ಬಿಜೆಪಿ ಅಧಿಕಾರ ಖಚಿತ: ಸಿಎಂ ಬೊಮ್ಮಾಯಿ
ಅನ್ವೇಷಣೆ, ಶೋಷಣೆಯಲ್ಲಿ ಸಮತೋಲನ ಬೇಕು: ಗಣಿಗಳ ಅನ್ವೇಷಣೆ ಮತ್ತು ಶೋಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು. ಇದನ್ನು ಸಾಧಿಸಿದಾಗ ಸುಸ್ಥಿರತೆ ಸಾಧಿಸಬಹುದು. ಈ ವಲಯದಲ್ಲಿ ಸುಸ್ಥಿರತೆಯನ್ನು ತಂದು ಅತ್ಯುತ್ತಮ ಗಣಿ ಸಂಸ್ಕೃತಿಯನ್ನು ಜಾರಿಗೆ ತರಬೇಕಿದೆ. 5 ಸಾವಿರಕ್ಕೂ ಹೆಚ್ವು ಜನರಿಗೆ ಉದ್ಯೋಗ ಕಲ್ಪಿಸುವ ಗಣಿಗಾರಿಕೆ ವಲಯ, ಸರ್ಕಾರಕ್ಕೂ ಆದಾಯ ತರಲಿದೆ. ಚಿನ್ನ, ಗಣಿ ಹಾಗೂ ಪರಿಸರ ಸೂಕ್ಷ್ಮತೆಯನ್ನು ಕಾಪಾಡಿಕೊಳ್ಳುತ್ತದೆ. ವೈಜ್ಞಾನಿಕವಾಗಿ ಗಣಿಗಾರಿಕೆ ಮಾಡದಿದ್ದರೆ, ಉತ್ಪಾದನೆಯನ್ನು ಹೆಚ್ಚುಗೊಳಿಸಲಾಗುವುದಿಲ್ಲ. ಇದರಿಂದ ಭವಿಷ್ಯಕ್ಕೆ ಗಣಿಯೂ ಉಳಿಯುವುದಿಲ್ಲ. ಅನ್ವೇಷಣೆ ಮಾಡಿದರೆ ದೇಶ ಹಾಗೂ ದೇಶದ ಆರ್ಥಿಕತೆಗೆ ಹಾಗೂ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಶೋಷಣೆ ಮಾಡಿದರೆ ಭವಿಷ್ಯದಿಂದ ಕಳುವು ಮಾಡಿದಂತಾಗುತ್ತದೆ ಎಂದರು.
ನಿಯಮಗಳ ಸರಳೀಕರಣ: ದೇಶದ ಅನೇಕ ಗಣಿ ಕಂಪನಿಗಳು ಕೋಲಾರ ಚಿನ್ನದ ಗಣಿ ಮರು ಆರಂಭಿಸಲು ಮನವಿ ಸಲ್ಲಿಸಿವೆ. ಗಣಿ ನೀತಿಯಲ್ಲಿ ರಾಜ್ಯ ಸರ್ಕಾರ ನಿಯಮಗಳನ್ನು ಸರಳಿಕರಣಗೊಳಿಸಿದೆ. ಗಣಿ ಉದ್ಯಮಿಗಳು ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ಆಗಮಿಸಿ ರಾಜ್ಯದ ಆದಾಯ ವೃದ್ಧಿಗೆ ಕೊಡುಗೆ ನೀಡಬೇಕು. ಹಿಂದಿನ ಸರ್ಕಾರಗಳು ಗಣಿಗಾರಿಕೆ ವಿಚಾರದಲ್ಲಿ ಮಾಡಿದ್ದ ತಪ್ಪುಗಳನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ನೂತನ ಗಣಿ ನೀತಿಯನ್ನು ಜಾರಿಗೆ ತಂದು ಗರಿಷ್ಠ ಉತ್ಪಾದನೆ ಹಾಗೂ ಸುಸ್ಥಿರತೆಯನ್ನು ತಂದಿದ್ದಾರೆ. ಪಾರದರ್ಶಕ, ವೈಜ್ಞಾನಿಕ ರೀತಿಯಲ್ಲಿ ಗಣಿಕಾರಿಕೆ ಕೈಗೊಳ್ಳಲು ನೂತನ ವಿಧಾನ, ಯಂತ್ರಗಳು ಬಂದಿವೆ. ಗಣಿಕಾರಿಕೆಯನ್ನು ವೃತ್ತಿಯಾಗಿ ಕೈಗೆತ್ತಿಕೊಳ್ಳಲು ಇದು ಸಕಾಲ. ಈ ರೀತಿಯ ವಾತಾವರಣ ಎಂಟು ವರ್ಷಗಳ ಹಿಂದೆ ಇರಲಿಲ್ಲ ಎಂದರು.
ಬೆಳಗಾವಿಗೆ ಮಹಾರಾಷ್ಟ್ರ ಸಚಿವರು ಬರಬೇಡಿ: ಸಿಎಂ ಬೊಮ್ಮಾಯಿ
ನವೀಕರಣ ಇಂಧನಕ್ಕೆ 2.5 ಕೋಟಿ ರೂ. ಹೂಡಿಕೆ: ಇಂಧನ ದೇಶದ ಅಭಿವೃದ್ದಿಗೆ ಪೂರಕವಾಗಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿರುವ ಇತಿಮಿತಿಗಳನ್ನು ಮೀರಿ ಕ್ಷೇತ್ರ ಬೆಳೆಯುತ್ತಿದೆ. ಕರ್ನಾಟಕ 2.5 ಕೋಟಿ ರೂ.ಗಳನ್ನು ಮುಂದಿನ 3 ವರ್ಷದಲ್ಲಿ ನವೀಕರಣ ಇಂಧನ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲಿದೆ. ಕರ್ನಾಟಕ ಅತಿ ಹೆಚ್ಚು ನವೀಕರಿಸಬಹುದಾದ ಇಂಧನ ಉತ್ಪಾದಿಸುವ ರಾಜ್ಯವಾಗಿದೆ. ಹೈಡ್ರೋಜನ್ ಇಂಧನ ಹಾಗೂ ಕಡಲಿನಿಂದ ಅಮೋನಿಯಾ ಉತ್ಪಾದನೆಗೆ 2 ಲಕ್ಷಕ್ಕಿಂತಲೂ ಹೆಚ್ವಿನ ಹೂಡಿಕೆ ಆಗುತ್ತಿದೆ. ಸಮೃದ್ಧ ಗಣಿಮೂಲಗಳನ್ನು ಹೊಂದಿರುವ ರಾಜ್ಯ ನಮ್ಮದು. ಚಿನ್ನ, ಬ್ರೋಮೈಡ್, ನಿಕ್ಕಲ್ ಮುಂತಾದ ಖನಿಜಗಳನ್ನು ಹೊಂದಿದೆ. ನಾವು ಉತ್ತಮ ಗಣಿ ನೀತಿ ಹೊಂದಿದ್ದೇವೆ. ಸರ್ಕಾರ ಹೂಡಿಕೆದಾರರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಭರವಸೆ ನೀಡಿದರು.
ಚಿರತೆ ದಾಳಿಗೆ ಮೃತಪಟ್ಟವರ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ: ಸಿಎಂ ಬೊಮ್ಮಾಯಿ
ಗಣಿಗಾರಿಕೆಯಲ್ಲಿ ಹರಾಜು ಪ್ರಕ್ರಿಯೆ ಶೀಘ್ರ ಆರಂಭ: ಗಣಿಗಾರಿಕೆಯಲ್ಲಿ ಗರಿಷ್ಠ ಉತ್ಪಾದನೆಯಿಂದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸಲು ನಮಗೆ ಸಹಾಯಕವಾಗಲಿದೆ. ಭಾರತವನ್ನು ಆರ್ಥಿಕತೆಯ ಶಕ್ತಿ ಕೇಂದ್ರವಾಗಿಸಲು ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಗರಿಷ್ಠ ಉತ್ಪಾದನೆಯನ್ನು ನಿಗದಿತ ಸಮಯದಲ್ಲಿ ಮಾಡಬೇಕಿದೆ. ಕಬ್ಬಿಣ ಮತ್ತು ಉಕ್ಕಿನ ಗಣಿಗಾರಿಕೆ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದು, ಅದರಂತೆ ಗಣಿಗಾರಿಕೆ ನಡೆಸಲು ಅವಕಾಶ ನೀಡಲಾಗುತ್ತಿದೆ. ಹರಾಜು ಪ್ರಕ್ರಿಯೆಯನ್ನು ದಕ್ಷ ಹಾಗೂ ಪಾರದರ್ಶಕವಾಗಿ ಕೈಗೊಳ್ಳಲು ಸೂಚಿಸಲಾಗಿದೆ. ಹರಾಜು ಪ್ರಕ್ರಿಯೆಯಲ್ಲಿ ಮೊದಲ ಹಂತದಲ್ಲಿ 16 ಬ್ಲಾಕ್ ಗಳ ಹರಾಜು ಪ್ರಕ್ರಿಯೆ ಆಗಲಿದ್ದು, ಇನ್ನೂ 25 ಬ್ಲಾಕ್ ಗಳ ಹರಾಜು ಶೀಘ್ರವೇ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಗಣಿ ಮತ್ತು ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಇಲಾಖೆ ಕಾರ್ಯದರ್ಶಿ ಅಮೃತ್ ಲಾಲ್ ಮೀನಾ, ಸಂಜಯ್ ಮೊದಲಾದವರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ